ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯಗೆ "ಸಿಡಿ' ಸಂಕಷ್ಟ?
ಬೆಂಗಳೂರು, ಜ.29: ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು "ಸಿಡಿ' ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾದರೇ ರೇಣುಕಾಚಾರ್ಯ ಅವರಿಗೆ ಸಂಕಷ್ಟ ಕಾದಿದೆ.
ದೇಶದ ಹೆಮ್ಮೆಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಅವರು ಸ್ಥಾಪಿಸಿರುವ ಭಾರತ ಜ್ಞಾನವಿಜ್ಞಾನ ಸಮಿತಿಯು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ದಾವಣಗೆರೆ : ವಿವಾದ ಹುಟ್ಟು ಹಾಕಿದ ಸಿಡಿ ಉತ್ಸವ
ಹೊನ್ನಾಳಿ ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ನಿನ್ನೆ ನಡೆದಿದ್ದ ಸಿಡಿ ಉತ್ಸವದಲ್ಲಿ ದಲಿತ ಮಹಿಳೆಯರನ್ನು ಕಂಬಕ್ಕೆ ಕಟ್ಟಿ ಹಾಕಿ ತೂಗಿಸುವ ಅಮಾನುಷ ಆಚರಣೆ ಮಾಡಿರುವುದರ ವಿರುದ್ಧ ಕಾನೂನು ಕ್ರಮಕ್ಕೆ ಸಮಿತಿ ಆಗ್ರಹಿಸಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಎದುರೇ ಈ ಆಚರಣೆ ನಡೆದಿದೆ. ಅಮಾನುಷ ಆಚರಣೆಗೆ ಚಾಲನೆ ಕೊಡುವುದಲ್ಲದೆ, ಅದನ್ನು ಸಮರ್ಥಿಸಿಕೊಂಡಿದ್ದಾರೆ. ಸಿಡಿ ಆಚರಣೆ ಮಢ್ಯ ಮಾತ್ರವಲ್ಲ, ಅಪಾಯಕಾರಿ ಕೂಡ. ಜೊತೆಗೆ ದಲಿತ ಮಹಿಳೆಯರನ್ನು ಅಪಮಾನಿಸುವ, ಅಪಾಯಕ್ಕೆ ನೂಕುವ ಅನಿಷ್ಟ ಪದ್ದತಿ ಎಂದು ಸಮಿತಿ ದೂರಿದೆ.
ಮೌಢ್ಯ ವಿರೋಧಿ ಕಾನೂನು ಜಾರಿಯಾಗಿದೆ: ರಾಜ್ಯ ಬಿಜೆಪಿ ಸರ್ಕಾರ ಅಪಾಯಕಾರಿ, ಅಮಾನವೀಯ ಮೌಢ್ಯಗಳ ಆಚರಣೆಯನ್ನು ನಿಷೇಧಿಸುವ ಕಾನೂನು ರೂಪಿಸಿ, ಜಾರಿ ಮಾಡಿ ಆದೇಶ ಹೊರಡಿಸಿದೆ. ಕಾಯ್ದೆಯ ಪ್ರಕಾರ ಸಿಡಿ ಆಚರಣೆ ನಿಷೇಧಿಸಲ್ಪಿಟ್ಟಿದೆ. ಅದನ್ನು ಆಚರಣೆ ಆಡುವುದು ಅಥವಾ ಮಾಡಲು ಕುಮ್ಮಕ್ಕು ಕೊಡುವುದು ಶಿಕ್ಷಾರ್ಹ ಅಪರಾಧ. ಇದಲ್ಲದೆ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ತಾನು ಸಿಡಿ ಆಚರಣೆಗೆ ಚಾಲನೆ ಕೊಟ್ಟಿಲ್ಲವೆಂದೂ, ಸಾಮಾನ್ಯ ವ್ಯಕ್ತಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇನೆಂದೂ ರೇಣುಕಾಚಾರ್ಯ ಅವರು ಹೇಳಿದ್ದಾರೆ.
"ನಾನು ಕಲ್ಲು ಬಂಡೆ, ಯಾವ ಟೀಕೆಗೂ ಜಗ್ಗಲ್ಲ"; ರೇಣುಕಾಚಾರ್ಯ
ಮೌಢ್ಯ ವಿರೋಧಿ ಕಾಯ್ದೆಯು ದೇಶದ ಎಲ್ಲ ಪ್ರಜೆಗಳಿಗೆ ಸಮಾನವಾಗಿ ಅನ್ವಯವಾಗುತ್ತದೆ. ತಮ್ಮದೆ ಸರ್ಕಾರ ರೂಪಿಸಿರುವ ಸಮಾಜಮುಖಿ ಕಾನೂನನ್ನು ಜಾರಿ ಮಾಡಿಸುವ ವಿಶೇಷ ಜವಾಬ್ದಾರಿಯು ಜನಪ್ರತಿನಿಧಿಗಳ ಹೆಗಲ ಮೇಲಿರುತ್ತದೆ. ಆದರಿಂದ ಶಾಸಕ ರೇಣುಕಾಚಾರ್ಯ ಅವರು ಕಾನೂನು ಕ್ರಮಗಳಿಂದಾಗಲಿ, ನೈತಿಕ ಹೊಣೆಗಾರಿಕೆಯಿಂದಾಗಲಿ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸರ್ಕಾರವನ್ನು ಸಮಿತಿ ರಾಜ್ಯ ಕಾರ್ಯದರ್ಶಿ ಶುಭಂಕರ ಚಿಕ್ರವರ್ತಿ ಒತ್ತಾಯಿಸಿದ್ದಾರೆ.