ರೈತರ ಆತ್ಮಹತ್ಯೆಗಳು ನೋವು ತಂದಿದೆ: ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್, 15: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ರಾಜ್ಯದ ರೈತರಿಗೆ ಸಾಂತ್ವನ ಹೇಳಿದ್ದಾರೆ. ನಾನು ಸ್ವಾತಂತ್ರ್ಯ ದಿನದ ಸಂಭ್ರಮ ಅನುಭವಿಸುವ ಮನಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರಿನ ಮಣಿಕ್ ಷಾ ಪರೇಡ್ ಮೈದಾನದಲ್ಲಿ 69ನೇ ಸ್ವಾತಂತ್ರ್ಯ ದಿನದ ಧ್ವಜಾರೋಹಣ ಮಾಡಿ ಮಾತನಾಡಿದ ಸಿಎಂ ತೆರೆದ ವಾಹನದಲ್ಲಿ ನಿಂತು ಕವಾಯಿತು ವೀಕ್ಷಿಸಿದರು. ರೆಡ್ ರಕ್ಷಣಾ ಪಡೆ, ಪೊಲೀಸ್ ತುಕಡಿಗಳು, ಹೋಮ್ ಗಾರ್ಡ್, ಎನ್'ಸಿಸಿ ಹಾಗೂ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಕಾರ್ಯಕ್ರಮಗಳು ಗಮನ ಸೆಳೆದವು.[ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ಹೈಲೆಟ್ಸ್]
ಬುಲೆಟ್ ಫ್ರೂಫ್ ಬಾಕ್ಸ್ ನಲ್ಲಿ ನಿಂತು ಭಾಷಣ ಮಾಡಿದ ಸಿದ್ದರಾಮಯ್ಯ ರೈತರ ಕುಟುಂಬಗಳಿಗೆ ಎಲ್ಲರೂ ಸಾಂತ್ವನ ಹೇಳಬೇಕು. ರೈತರ ಕುಟುಂಬದವರು ಮತ್ತಷ್ಟು ಆತಂಕಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸರ್ಕಾರ ಪರಿಹಾರ ಕ್ರಮ ತೆಗೆದುಕೊಳ್ಳುತ್ತಿದ್ದರೂ ಸರಣಿ ಆತ್ಮಹತ್ಯೆಗಳಾಗುತ್ತಿರುವುದು ನೋವು ತಂದಿದೆ ಎಂದು ಹೇಳಿದರು.
ಕನ್ನಡ ನಾಡು ನುಡಿ ಹೋರಾಟಕ್ಕೆ ಸರ್ಕಾರ ಬದ್ಧ. ಇದರಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯಲ್ಲ ಎಂದ ಸಿದ್ದರಾಮಯ್ಯ ರಾಜ್ಯ ಸರ್ಕಾರದ ಕೆಲ ಯೋಜನೆಗಳನ್ನು ಉಲ್ಲೇಖ ಮಾಡಿದರು.