ಬಿಎಸ್ವೈ ಆದೇಶ: ಜಿಲ್ಲಾಧಿಕಾರಿಗಳಿಗೆ ಬಯಸದೇ ಬಂದ ಸೌಭಾಗ್ಯ
ಬೆಂಗಳೂರು, ಆ 13: ಸ್ವಾತಂತ್ರ್ಯೋತ್ಸವದ ದಿನದಂದು, ಆಯಾಯ ಜಿಲ್ಲಾಕೇಂದ್ರಗಳಲ್ಲಿ ಯಾರು ಧ್ವಜಾರೋಹಣ ಮಾಡಬೇಕು ಎನ್ನುವ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ.
ಸಚಿವ ಸಂಪುಟ ರಚನೆಯಾಗದ ಹಿನ್ನಲೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿಗಳು ಇನ್ನೂ ನೇಮಕವಾಗದ ಹಿನ್ನಲೆಯಲ್ಲಿ ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಧ್ವಜಾರೋಹಣ ಮಾಡುವಂತೆ ಯಡಿಯೂರಪ್ಪ ಸೂಚನೆಯನ್ನು ನೀಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನಾಚರಣೆ ನಂತರ ಸಂಪುಟ ವಿಸ್ತರಣೆ, ಯಾರಿಗೆ ಅದೃಷ್ಟ?
ಈ ಸಂಬಂಧ ಆದೇಶ ಹೊರಡಿಸಿರುವ ಸಿಎಂ ಬಿಎಸ್ವೈ, ಬೆಂಗಳೂರು ನಗರ ಜಿಲ್ಲೆಯನ್ನು ಹೊರತು ಪಡಿಸಿ, ಜಿಲ್ಲಾಕೇಂದ್ರಗಳಲ್ಲಿ ಡಿಸಿಗಳು, ಉಪವಿಭಾಗಗಳಲ್ಲಿ ಉಪ ವಿಭಾಗಾದಿಕಾರಿಗಳು, ತಾಲೂಕುಗಳಲ್ಲಿ ತಹಶೀಲ್ದಾರ್ ಗಳಿಗೆ ಧ್ವಜಾರೋಹಣ ಮಾಡುವಂತೆ ಸೂಚನೆ ಹೊರಡಿಸಿದ್ದಾರೆ.
ಗುರುವಾರ, ಆಗಸ್ಟ್ ಹದಿನೈದರಂದು, ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಧ್ವಜಾರೋಹಣ ಮಾಡಲಿದ್ದಾರೆ. ಉಳಿದಂತೆ, ಸರಕಾರದ ಆದೇಶ ಅನ್ವಯವಾಗಲಿದೆ.
ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಪ್ರವಾಹದ ಕಾರಣದಿಂದಾಗಿ, ಸ್ವಾತಂತ್ರ್ಯಾಚರಣೆಯನ್ನು ಸರಳವಾಗಿ ಆಚರಿಸುವಂತೆಯೂ ಸರಕಾರದ ಆದೇಶದಲ್ಲಿ ಸೂಚಿಸಲಾಗಿದೆ.
ಜಿಲ್ಲಾ ಉಸ್ತುವಾರಿಗಳು ಇಲ್ಲದಿರುವುದರಿಂದ, ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳಿಗೆ ಧ್ವಜಾರೋಹಣ ಮಾಡುವ ಸೌಭಾಗ್ಯ ಲಭಿಸಿದೆ.