ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಐಟಿ ಅಧಿಕಾರಿಗಳಿಂದ ಶಾಕ್ !
ಬೆಂಗಳೂರು, ಫೆಬ್ರವರಿ 17: ತೆರಿಗೆ ವಂಚನೆ ಮತ್ತು ಸುಳ್ಳು ಲೆಕ್ಕ ತೋರಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಮೆಡಿಕಲ್ ಕಾಲೇಜುಗಳ ಮೇಲೆ ದಾಳಿ ನಡೆಸಿ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ, ತುಮಕೂರು, ಮಂಗಳೂರು, ದೇವನಹಳ್ಳಿ, ಹೊಸಕೋಟೆ ನಾನಾ ಕಡೆ ಏಕ ಕಾಲಕ್ಕೆ 30 ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಾಸಗಿ ಇನ್ನೋವಾ ವಾಹನಗಳಲ್ಲಿ ಬಂದ ಐಟಿ ಅಧಿಕಾರಿಗಳ ತಂಡಗಳು ಬೆಳಗಿನ ಜಾವ ಆರು ಗಂಟೆಗೆ ದಾಳಿ ಮಾಡಿದ್ದಾರೆ. ಮೆಡಿಕಲ್ ಸೀಟು ಹಂಚಿಕೆ, ಕೋವಿಡ್ ಹಿನ್ನೆಲೆಯಲ್ಲಿ ನಡೆಸಿರುವ ಹಣಕಾಸಿನ ವ್ಯವಹಾರದಲ್ಲಿ ಅಕ್ರಮ ಕಂಡು ಬಂದಿದ್ದು, ಈ ಕುರಿತ ದಾಖಲೆಗಳನ್ನು ಸಂಗ್ರಹಿಸಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ತೆರಿಗೆ ವಂಚನೆ, ಸುಳ್ಳು ಲೆಕ್ಕ ಮತ್ತಿತರ ಆರೋಪಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಈ ಕೆಳಕಂಡ ವೈದ್ಯಕೀಯ ಕಾಲೇಜು ಹಾಗೂ ಮಾಲೀಕರ ಮನೆಗಳ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜು ಮೇಲೆ ಐಟಿ ದಾಳಿ
ದೇವನಹಳ್ಳಿ ಆಕಾಶ್ ಮೆಡಿಕಲ್ ಕಾಲೇಜು:
ದೇವನಹಳ್ಳಿಯಲ್ಲಿರುವ ಆಕಾಶ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಆಸ್ಪತ್ರೆಯ ಮಾಲೀಕ ಮುನಿರಾಜು ಅವರು ಬೆಂಗಳೂರಿನ ಸಹಕಾರ ನಗರದಲ್ಲಿ ವಾಸವಿದ್ದು, ಮನೆ ಮೇಲೂ ದಾಳಿ ನಡೆದಿದೆ. ಕೋವಿಡ್ ಸಂಕಷ್ಟದ ನಡುವೆಯೂ ಸರ್ಕಾರಿ ಕೋಟಾದ ಸೀಟುಗಳನ್ನು ಮಾರಾಟ ಮಾಡಿಕೊಂಡು ಹಣ ಗಳಿಕೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲವು ಮಹತ್ವದ ದಾಖಲೆಗಳು ಸಿಕ್ಕಿದ್ದು, ಪರಿಶೀಲನಾ ಕಾರ್ಯ ಮುಂದುವರೆದಿದೆ. ಅಧಿಕಾರಿಗಳು ದಾಳಿ ಮಾಡಿದಾಗ ಮಾಲೀಕ ಮುನಿರಾಜು ಕೂಡ ಮನೆಯಲ್ಲಿದ್ದರು. ಮುನಿರಾಜು ಮೊಬೈಲ್ ವಶಕ್ಕೆ ಪಡೆದಿದ್ದು, ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕಳೆದ ಒಂದು ವರ್ಷಕ್ಕೆ ಸಂಬಂಧಿಸಿದ ದಾಖಲೆ ಪ್ರಮಾಣ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ತೆರಿಗೆ ವಂಚನೆ ಸಂಬಂಧಿಸಿದಂತೆ ಲೋಪ ಕಂಡು ಬಂದ ಹಿನ್ನೆಲೆಯಲ್ಲಿ ಮುನಿರಾಜು ವೈಯಕ್ತಿಕ ಆದಾಯ, ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಸಹ ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.
ಬಾಣವಾರ ಸಪ್ತಗಿರಿ ಮೆಡಿಕಲ್ ಕಾಲೇಜ್ :
ಇನ್ನು ಹೆಸರಘಟ್ಟ ಮುಖ್ಯ ರಸ್ತೆಯಲ್ಲಿರುವ ಸಪ್ತಗಿರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮೇಲೆ ಐಟಿ ದಾಳಿ ನಡೆದಿದೆ. ದಾಳಿ ವೇಳೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಕಳೆದ ಮೂರು ವರ್ಷದಲ್ಲಿ ವೈದ್ಯ ಪದವಿಗೆ ಸೇರಿದ ವಿವರಗಳನ್ನು ಪಡೆದುಕೊಂಡಿದ್ದಾರೆ. ಆನಂತರ ಮಾಲೀಕ ದಯಾನಂದ್ ಅವರು ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯಲ್ಲಿರುವ ಮನೆ ಮೇಲೂ ಸಹ ಶೋಧ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೆಡಿಕಲ್ ಸೀಟು ವಹಿವಾಟು ಮತ್ತು ತೆರಿಗೆ ವಹಿವಾಟಿಗೆ ಸಂಬಂಧಿಸಿದಂತೆ ಲೋಪದೋಷಗಳು ಕಂಡು ಬಂದಿದ್ದು, ಎಲ್ಲಾ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕೆಂಗೇರಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ :
ಒಕ್ಕಲಿಗರ ಮಹಾ ಸಂಸ್ಥಾನಕ್ಕೆ ಸೇರಿದ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು ಮೇಲೂ ಐಟಿ ದಾಳಿ ನಡೆದಿದೆ. ಕೆಂಗೇರಿಯಲ್ಲಿರುವ ಈ ಆಸ್ಪತ್ರೆಯನ್ನು ಚೆನ್ನೈ ಮೂಲದ ಗ್ಲೋಬಲ್ ಆಸ್ಪತ್ರೆ ಸಂಸ್ಥಾಪಕರು ಕೆಂಗೇರಿಯಲ್ಲಿರುವ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ವೈದ್ಯಕೀಯ ಸಂಸ್ಥೆ ಮಠಕ್ಕೆ ಸೇರಿದೆ. ಇದೀಗ ಬಿಜಿಎಸ್ ಆಸ್ಪತ್ರೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು : ಇನ್ನು ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಮಾಲೀಕ ಹುಲಿಯೂರ್ ನಾಯಕ ಅವರ ಸೋಮೇಶ್ವರದಲ್ಲಿರುವ ನಿವಾಸದ ಮೇಲೂ ದಾಳಿ ನಡೆದಿದ್ದು, ಏಕ ಕಾಲಕ್ಕೆ ಮಡಿಕಲ್ ಕಾಲೇಜುಗಳಿಗೆ ಐಟಿ ಅಧಿಕಾರಿಗಳು ಒಂದೇ ಸಲ ಶಾಕ್ ನೀಡಿದ್ದಾರೆ.
Recommended Video
ಹೊಸಕೋಟೆ ಎಂವಿಜೆ ಮೆಡಿಕಲ್ ಕಾಲೇಜು:
ಹೊಸಕೋಟೆಯಲ್ಲಿರವ ಎಂವಿ.ಜೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೇಲೂ ದಾಳಿ ನಡೆಸಿದ ಐಟಿ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಮೆಡಿಕಲ್ ಸೀಟು ಹಂಚಿಕೆ ಹಾಗೂ ಡೊನೇಷನ್ ಸಂಬಂಧಿಸಿದಂತೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ. ದಾಳಿ ವೇಳೆ ಕೋಟ್ಯಂತರ ರೂಪಾಯಿ ನಗದು ಸಿಕ್ಕಿದೆ ಎಂದು ಹೇಳಲಾಗುತ್ತಿದ್ದು, ಐಟಿ ಅಧಿಕಾರಿಗಳು ಖಚಿತ ಪಡಿಸಿಲ್ಲ.