KGF ಬಾಬು ಅಲಿಯಾಸ್ ಸ್ಕ್ರಾಪ್ ಬಾಬು ಮನೆ ಮೇಲೆ ಇಡಿ ದಾಳಿ
ಬೆಂಗಳೂರು, ಮೇ. 28: ಬೆಂಗಳೂರು ನಗರ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ನಿಂದ ಕಣಕ್ಕೆ ಇಳಿದು ಸೋಲನುಭವಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಕೆಜಿಎಫ್ ಬಾಬು ಅಲಿಯಾಸ್ ಯೂಸಫ್ ಶರೀಫ್ ಗೆ ಶನಿವಾರ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಶಾಕ್ ನೀಡಿದ್ದಾರೆ.
ವಸಂತನಗರದಲ್ಲಿರುವ ಕೆಜಿಎಫ್ ಬಾಬು ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಬೆಳಗಿನ ಜಾವ ದಾಂಗುಡಿ ಇಟ್ಟು ದಾಖಲೆಗಳನ್ನು ವಶಕ್ಕೆ ಪಡೆದಿವೆ. ಸುಮಾರು ಎಂಟಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಬೋಗಸ್ ಕಂಪನಿಗಳು ಹುಟ್ಟಿಹಾಕಿರುವ ಕೆಜಿಎಫ್ ಬಾಬು ಸರ್ಕಾರದ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ನಗರದ ಪ್ರಮುಖ ಪ್ರದೇಶದಲ್ಲಿ ಸರ್ಕಾರಿ ಜಮೀನನ್ನು ಆಕ್ಷನ್ ಹೆಸರಿನಲ್ಲಿ ಖರೀದಿಸಿ ಕೋಟಿ ಕೋಟಿ ಲೂಟಿ ಮಾಡಿದ ಆರೋಪ ಕೇಳಿ ಬಂದಿತ್ತು. ನಾನಾ ಕಂಪನಿಗಳ ಹೆಸರಿನಲ್ಲಿ ಸರ್ಕಾರಿ ಜಮೀನು ಕಬಳಿಸಿ ಅದನ್ನು ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಬಾಬು ಅನ್ಯ ಕಂಪನಿಗಳಿಗೆ ಮಾರಾಟ ಮಾಡಿ ಕೋಟಿ ಕೋಟಿ ಗಳಿಸಿದ ಆರೋಪ ಕೇಳಿ ಬಂದಿತ್ತು.
ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರು ನಗರದಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದು ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ವಿರುದ್ಧ ಸೋಲುಂಡಿದ್ದರು. ರೋಲ್ಸ್ ರಾಯ್ ಕಾರಿನಲ್ಲಿ ಬಂದಿದ್ದ ಬಾಬು ಸೋಲು ಕಂಡು ಆಟೋದಲ್ಲಿ ತೆರಳುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು. ಚುನಾವಣೆ ವೇಳೆ 1743 ಕೋಟಿ ರೂ. ಆಸ್ತಿಯನ್ನು ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡಿದ್ದರು. ಈ ಮೂಲಕ ರಾಜ್ಯದ ನಂಬರ್ ಒನ್ ಶ್ರೀಮಂತ ರಾಜಕಾರಣಿ ಎಂದೇ ಹೆಸರಾಗಿದ್ದರು.
ಕೆಜಿಎಫ್ ಬಾಬು ಅಲಿಯಾಸ್ ಸ್ಕ್ರಾಪ್ ಬಾಬು ಅಲಿಯಾಸ್ ಚಿಕ್ಕಳು ಬಾಬು ಅವರ ಆದಾಯದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದರು. ಕಳೆದ ಚುನಾವಣೆ ಈತ ಆಸ್ತಿ ಘೋಷಣೆ ಮಾಡಿದ್ದು ಎಲ್ಲರನ್ನು ದಿಗ್ರ್ಭಾಂತರನ್ನಾಗಿಸಿತ್ತು. ಕೇವಲ ಐದನೇ ತರಗತಿ ಓದಿರುವ ಬಾಬು 1700 ಕೋಟಿ ರೂ. ಒಡೆಯನಾದ ಬಗ್ಗೆ ಜನರೇ ಅಚ್ಚರಿಗೊಂಡಿದ್ದರು.