ಜನಾರ್ದನ ರೆಡ್ಡಿ ಮಗಳ ಅದ್ಧೂರಿ ಮದುವೆ: ಹಣದ ಮೂಲ ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ ನಕಾರ
ಬೆಂಗಳೂರು, ಮೇ. 25: ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆ ಖರ್ಚಿನ ಹಣಕಾಸಿನ ಮೂಲದ ಬಗ್ಗೆ ನೀಡಿದ್ದ ದೂರನ್ನು ತನಿಖೆ ಮಾಡದೇ ನಿರ್ಲಕ್ಷ ವಹಿಸಿದ ಆದಾಯ ತೆರಿಗೆ ಇಲಾಖೆ ಬೆಂಗಳೂರು ವಲಯದ ಹೆಚ್ಚುವರಿ ನಿರ್ದೇಶಕ ಡಾ. ಸುಭಾಷ್ ಕೆ. ಅರ್. ವಿರುದ್ದ ಕೇಂದ್ರ ಜಾಗೃತ ಆಯೋಗದಲ್ಲಿ ದೂರು ದಾಖಲಾಗಿದೆ.
ವಕೀಲ, ಮಾಹಿತಿ ಹಕ್ಕು ಕಾರ್ಯಕರ್ತ ಟಿ. ನರಸಿಂಹಮೂರ್ತಿ ಅವರು ನೀಡಿದ ದೂರಿನ ಮೇರೆಗೆ ಕೇಂದ್ರ ಜಾಗೃತ ಆಯೋಗ ಏ. 4 ರಂದೇ ದೂರನ್ನು(ದೂರಿನ ನಂಬರ್ 196812/2022) ಅಂಗೀಕರಿಸಿದೆ. ಗಾಲಿ ಜನಾರ್ಧನರೆಡ್ಡಿ ಅದ್ಧೂರಿ ಮದುಗೆ ವ್ಯಯಿಸಿದ ಕೋಟಿ ಕೋಟಿ ವೆಚ್ಚದ ಬಗ್ಗೆ ತನಿಖೆ ಮಾಡದೇ ನಿರ್ಲಕ್ಷ ವಹಿಸಿದ ಅರೋಪಕ್ಕೆ ಸಂಬಂಧಿಸಿದಂತೆ ಕೆ.ಅರ್. ಸುಭಾಷ್ ಮೇಲೆ ದೂರು ನೀಡಲಾಗಿದೆ.
ಈ ಕುರಿತು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ದೂರುದಾರ, ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಜೈಲಿನಲ್ಲಿ 40 ತಿಂಗಳು ಇದ್ದರು. ಅವರ ಎಲ್ಲಾ ಬ್ಯಾಂಕ್ ಖಾತೆಗಳು ಜಪ್ತಿಯಾಗಿವೆ. ಇಷ್ಟಾಗಿಯೂ ಕೋಟಿ ಕೋಟಿ ವೆಚ್ಚ ಮಾಡಿ 2016 ರಲ್ಲಿ ಅರಮನೆ ಮೈದಾನದಲ್ಲಿ ಮದುವೆ ಮಾಡಿದರು. ಜೈಲಿನಲ್ಲಿದ್ದ ವ್ಯಕ್ತಿಯ ಈ ಆದಾಯದ ಮೂಲದ ಬಗ್ಗೆ ತನಿಖೆ ನಡೆಸಿ ಎಂದು ನಾನು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದೆ. ಆದಾಯ ತೆರಿಗೆ ಇಲಾಖೆಯ ಅಂದಿನ ಹೆಚ್ಚವರಿ ನಿರ್ದೇಶಕರಾಗಿದ್ದ ಬಾಲಕೃಷ್ಣ ಅವರು ನನ್ನ ದೂರು ಸ್ವೀಕರಿಸಿದ್ದರು ಎಂದು ವಿವರಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ವಿರುದ್ಧ ದೂರು :
ನನ್ನ ದೂರಿನ ಮೇರೆಗೆ ತನಿಖೆ ಮಾಡುವ ಭರವಸೆ ನೀಡಿ ದೂರಿನ ನಂಬರ್ ಕೂಡ ನೀಡಿದ್ದರು. ಬಾಲಕೃಷ್ಣ ವರ್ಗಾವಣೆ ಬಳಿಕ ಸುಭಾಷ್ ಹೆಚ್ಚುವರಿ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಇವರು ದೂರಿನ ಬಗ್ಗೆ ತನಿಖೆ ನಡೆಸದೇ ಕರ್ತವ್ಯಲೋಪ ಎಸಗಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಸಿದರೂ ನನ್ನ ದೂರಿಗೆ ಸ್ಪಂದಿಸಲಿಲ್ಲ. ದೂರಿನ ಬಗ್ಗೆ ಕ್ರಮ ಕೈಗೊಂಡ ಬಗ್ಗೆ ವರದಿಯನ್ನೂ ನೀಡಲಿಲ್ಲ. ಹೀಗಾಗಿ ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಜಾಗೃತ ಅಯೋಗಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ದೂರು ಸ್ವೀಕರಿಸಿ ನಿರ್ಲಕ್ಷ್ಯ ವಹಿಸಿತೇ ಆದಾಯ ತೆರಿಗೆ ಇಲಾಖೆ:
ಗಾಲಿ ಜನಾರ್ಧರೆಡ್ಡಿ ಅದ್ಧೂರಿ ಮದುವೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಕುರಿತು ನಾನು ನವೆಂಬರ್ 30 2016 ರಂದು ಸಲ್ಲಿಸಿದ ದೂರನ್ನು ಸ್ವೀಕರಿಸಿದ್ದ ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ನಿರ್ದೇಶಕ ಬಾಲಕೃಷ್ಣ ಅವರು ನನ್ನ ದೂರಿನ ಬಗ್ಗೆ ಆದಾಯ ತೆರಿಗೆ ಇಲಾಖೆಯ ಪ್ರಧಾನ ನಿರ್ದೇಶಕ ಕಿಶೋರ್ ಕುಮಾರ್ ಅವರ ಬಳಿ ಚರ್ಚಿಸಿದ್ದರು. ನನ್ನ ದೂರಿನ ತನಿಖಾ ಪ್ರಗತಿ ಬಗ್ಗೆ 2018 ರಲ್ಲಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿದಾಗ ವರ್ಷಾಂತ್ಯದಲ್ಲಿ ದೂರು ತನಿಖೆ ಮುಗಿಸುವುದಾಗಿ ಹೇಳಿ ದೂರಿನ ನಂಬರ್ 161134632Y ಕೊಟ್ಟಿದ್ದರು. ಆ ಬಳಿಕ 2019 ಡಿಸೆಂಬರ್ 31 ರೊಳಗೆ ತನಿಖೆ ಮುಗಿಸುವುದಾಗಿ ಹೇಳಿದ್ದರು.
ದೂರಿನ ಬಗ್ಗೆ ಮಾಹಿತಿ ನೀಡಲಿಲ್ಲ:
ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ನಿರ್ದೇಶಕ ( ತನಿಖೆ) ಬಾಲಕೃಷ್ಣ ಅವರ ಜಾಗಕ್ಕೆ ಕೆ.ಆರ್. ಸುಭಾಷ್ ವರ್ಗಾವಣೆಯಾಗಿದ್ದರು. ದಿನಾಂಕ 2019, ಡಿಸೆಂಬರ್ 05 ರಂದು ನಾನು ನನ್ನ ದೂರಿನ ಸ್ಥಿತಿ ಬಗ್ಗೆ ಕೇಳಿದಾಗ ಡಿ. 31, 2019 ರಂದು ಭೇಟಿ ಮಾಡಲು ಸೂಚಿಸಿದರು. ನಾನು 2020 ಜನವರಿಯಲ್ಲಿ ಸುಭಾಷ್ ಅವರನ್ನು ಭೇಟಿ ಮಾಡಲು ಹೋದಾಗ ನನ್ನ ಭೇಟಿಗೆ ಅವಕಾಶ ಕೊಡಲಿಲ್ಲ. ದಿನಾಂಕ 13, ಫೆ. 2020 ರಂದು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ನನ್ನ ದೂರಿನ ಸ್ಥಿತಿಗತಿ ಮತ್ತು ಕ್ರಮ ಕೈಗೊಂಡ ಬಗ್ಗೆ ವಿವರ ನೀಡುವಂತೆ ಕೋರಿದ್ದೆ. ನನ್ನ ಮಾಹಿತಿ ಹಕ್ಕು ಅರ್ಜಿಯನ್ನು ವಿನಾಕಾರಣ ವರ್ಗಾವಣೆ ಮಾಡಿ ಯಾವುದೇ ಮಾಹಿತಿ ನೀಡಲಿಲ್ಲ. ಆ ಬಳಿಕ ನನ್ನ ಭೇಟಿಗೆ ಅವಕಾಶ ನೀಡಲಿಲ್ಲ. ನಾನು ದೂರು ಕೊಟ್ಟು ಅರು ವರ್ಷವಾದರೂ ಯಾವುದೇ ಕ್ರಮ ಜರುಗಿಸದೇ ನಿರ್ಲಕ್ಷ್ಯ ವಹಿಸಿರುವ ಸುಭಾಷ್ ಕೆ.ಅರ್. ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ. ನರಸಿಂಹಮೂರ್ತಿ ಸಲ್ಲಿಸಿದ ದೂರನ್ನು ಕೇಂದ್ರ ಜಾಗೃತ ಆಯುಕ್ತರು ಸ್ವೀಕರಿಸಿದ್ದಾರೆ.
ಜೈಲಿನಿಂದ ಬಂದ ಬಳಿಕ ರೆಡ್ಡಿ ವೈಭವೋತ್ಸವ
ಅರಮನೆ ಮೈದಾನದಲ್ಲಿ 2016 ರಲ್ಲಿ ನಡೆದ ಗಾಲಿ ಜನಾರ್ಧನರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಮದುವೆಗೆ ವಿಜಯನಗರ ಸಾಮ್ರಾಜ್ಯವನ್ನೇ ಭೂಮಿಗೆ ಇಳಿಸಲಾಗಿತ್ತು. ವಿಜಯನಗರ ಅರಸನ ಪೋಷಾಕು ಧರಿಸಿ ರೆಡ್ಡಿ ಮಿಂಚಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮಗಳ ಮದುವೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿತ್ತು. ಬ್ರಹ್ಮಿಣಿ ಮದುವೆ ಕುರಿತು ಮಾಡಿದ್ದ ದುಬಾರಿ ಲಗ್ನ ಪತ್ರಿಕೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 40 ತಿಂಗಳು ಜೈಲಿನಲ್ಲಿದ್ದ ರೆಡ್ಡಿ ಬಿಡುಗಡೆಯಾದ ಬಳಿಕ ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸಿದ್ದರು.