ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಯಡಿಯೂರಪ್ಪಗೆ ಶುರುವಾಯ್ತು ಸಂಕಷ್ಟ!
ಬೆಂಗಳೂರು, ಜ. 15: ಮುರುಗೇಶ್ ನಿರಾಣಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಂಕಷ್ಟವನ್ನು ತಂದಿಟ್ಟಿದೆ. ಸಂಪುಟ ವಿಸ್ತರಣೆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ಆಪ್ತ ಶಾಸಕರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನಾಳೆಯಿಂದ ಎರಡು ದಿನಗಳ ಕಾಲ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅಮಿತ್ ಶಾ ಅವರ ರಾಜ್ಯ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಬಿಜೆಪಿಯ ಹಲವು ಶಾಸಕರು ಹೈಕಮಾಂಡ್ಗೆ ದೂರು ಕೊಡಲು ತೀರ್ಮಾನ ಮಾಡಿದ್ದಾರೆ.
ನನ್ನ ಇತಿಮಿಯಲ್ಲಿ ಸಂಪುಟ ವಿಸ್ತರಣೆ ಮಾಡಿದ್ದೇನೆ. ನಿಮಗೆ ಅಸಮಾಧಾನವಾಗಿದ್ದರೆ ಹೋಗಿ ಹೈಕಮಾಂಡ್ಗೆ ದೂರು ಕೊಡಿ ಎಂದು ಸಿಎಂ ಯಡಿಯೂರಪ್ಪ ಖಡಕ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ವಿರುದ್ಧ ಹೈಕಮಾಂಡ್ಗೆ ದೂರು ಕೊಟ್ಟರೂ ಉಪಯೋಗವಿಲ್ಲ ಎಂಬ ತೀರ್ಮಾನಕ್ಕೆ ಅಸಮಾಧಾನಿತ ಶಾಸಕರು ಬಂದಂತಿದೆ.
ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡು ದಿನಗಳ ಪ್ರವಾಸ: ಇಲ್ಲಿದೆ ಸಂಪೂರ್ಣ ವಿವರ
ಈ ಮಧ್ಯೆ ಮುರುಗೇಶ್ ನಿರಾಣಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೊಸ ಸಂಕಷ್ಟವನ್ನು ತಂದಿದೆ. ಹೈಕಮಾಂಡ್ನಿಂದ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದರಿಂದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಯಡಿಯೂರಪ್ಪ ಅವರಿಗೆ ಈ ಸಂಕಷ್ಟದಿಂದ ಕಾನೂನಾತ್ಮಕವಾಗಿ ತೊಡಕುಗಳು ಎದುರಾಗುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ.
ಹಳೆ ಪ್ರಕರಣಕ್ಕೆ ಮರುಜೀವ?
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ದಾಖಲಾಗಿದ್ದ ದೂರಿಗೆ ಮರು ಜೀವ ಬಂದಿದೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ 2010-11ರಲ್ಲಿ ನಡೆದಿದ್ದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಬಳಿಕ ನಕಲಿ ದಾಖಲೆ ಸೃಷ್ಟಿಸಿ ಸಚಿವ ನಿರಾಣಿ ಭೂಕಬಳಿಕೆ ಮಾಡಿದ್ದಾರೆಂದು ಉದ್ಯಮಿ ಆಲಂ ಪಾಷಾ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು, ಜಿಮ್ನಲ್ಲಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡು ದೇವನಹಳ್ಳಿ ಬಳಿ 26 ಎಕರೆಯಲ್ಲಿ 6 ನೂರು ಕೋಟಿ ರೂ. ಹೌಸಿಂಗ್ ಪ್ರಾಜೆಕ್ಟ್ ಮಾಡಿದ್ದೆವು. ಆದರೆ ನಮಗೆ ಹಂಚಿಕೆಯಾಗಿದ್ದ ಭೂಮಿಯನ್ನು ಸಚಿವ ನಿರಾಣಿ ಅವರು ಕಬಳಿಕೆ ಮಾಡಿದ್ದಾರೆಂದು ಆಲಂ ಪಾಷಾ ಆರೋಪಿಸಿದ್ದಾರೆ.
ಪ್ರಕರಣದ ಕುರಿತು ಆರೋಪಿಸಿರುವ ಅವರು, ಭೂಕಬಳಿಕೆ ಪ್ರಶ್ನಿಸಿ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದೆ. ಆದರೆ ರಾಜ್ಯಪಾಲರ ಅನುಮತಿಬೇಕೆಂದು ಪ್ರಕರಣ ವಜಾ ಆಗಿತ್ತು. ನಂತರ ಹೈಕೋರ್ಟ್ ಮೊರೆ ಹೋಗಿದ್ದೇವು. ಈಗ ಹೈಕೋರ್ಟ್ ತನಿಖೆಗೆ ಆದೇಶಿಸಿದೆ. ನ್ಯಾಯಮೂರ್ತಿ ಮೈಕಲ್ ಖುನ್ನ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಕಳೆದ ಜನವರಿ 5, 2021 ರಂದು ತನಿಖೆಗೆ ಆದೇಶ ಮಾಡಿದ್ದಾರೆಂದು ಆಲಂ ಪಾಷಾ ಹೇಳಿದ್ದಾರೆ.
ನ್ಯಾಯಾಂಗ ತನಿಖೆಗೆ ಆಗ್ರಹ
ಆದರೆ ಈಗ ಮುರುಗೇಶ್ ನಿರಾಣಿ ಅವರನ್ನು ಸಚಿವರನ್ನಾಗಿ ಮಾಡಲಾಗಿದೆ. ಮುಂದೆ ಅವರು ಗೃಹ ಇಲಾಖೆಯನ್ನೂ ವಹಿಸಿಕೊಳ್ಳಬಹುದು. ಆಗ ತನಿಖೆ ಮೇಲೆ ಪ್ರಭಾವ ಬೀರಬಹುದು. ಈಗಾಗಲೇ ಅವರು ನನಗೆ ಬೆದರಿಕೆ ಹಾಕಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಭೂಕಬಳಿಕೆ ಪ್ರಕರಣದ ಸೂತ್ರಧಾರ. ಹೀಗಾಗಿ ನಾವು ಮಾಡಿರುವ ಆರೋಪದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಆಲಂ ಪಾಷಾ ಆಗ್ರಹಿಸಿದ್ದಾರೆ.
26 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ
ಕಳೆದ 2010ರಲ್ಲಿ ನಡೆದಿದ್ದ ಜಿಮ್ನಲ್ಲಿ ನಾವು ಮಾಡಿಕೊಂಡಿದ್ದ ಒಪ್ಪದಂತೆ ಅಲ್ಲಿ ಭೂಮಿಯೇ ಇಲ್ಲ. ಆದರೂ ನಾವು ನಮ್ಮ ಪಾಸ್ ಫೇಸ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ 68 ಕೋಟಿ ರೂ. ಕಟ್ಟಬೇಕು. ನಮಗೆ ಮಂಜೂರಾಗಿದ್ದ 26 ಎಕರೆ ಭೂಮಿಯನ್ನು ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ಮಾರಾಟ ಮಾಡಿದ್ದಾರೆ. ಪ್ರಿಸಾಟ್ ಹೌಸಿಂಗ್ ಎಂಬ ಕಂಪನಿಗೆ ಮಾರಾಟ ಮಾಡಲಾಗಿದೆ. ಅದು ಮುರುಗೇಶ್ ನಿರಾಣಿ ಅವರಿಗೆ ಸೇರಿರುವ ಕಂಪನಿ ಎಂಬ ಗಂಭೀರ ಆರೋಪವನ್ನು ಆಲಂ ಪಾಷಾ ಅವರು ಮಾಡಿದ್ದಾರೆ.
ಸಿರಾಜಿನ್ ಪಾಶಾ-ಬಾಲರಾಜ್ ದೂರುಗಳು
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಶಿವಮೊಗ್ಗ ಮೂಲದ ವಕೀಲರಾದ ಸಿರಾಜಿನ್ ಪಾಷಾ ಹಾಗೂ ಬಾಲರಾಜ್ ಎಂಬುವರು ಡಿನೊಟಿಫೀಕೇಶನ್ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಆಗ ಕರ್ನಾಟಕದ ರಾಜ್ಯಪಾಲರಾಗಿದ್ದ ದಿ. ಹಂಸರಾಜ್ ಭಾರದ್ವಾಜ್ ಅವರು ತನಿಖೆಗೆ ಆದೇಶ ಅನುಮತಿ ನೀಡಿದ್ದರು. ಹೀಗಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಿದ್ದು ಇತಿಹಾಸ.
ಈಗ ಆಲಂ ಪಾಷಾ ಅವರು ಕಾನೂನು ಹೋರಾಟ ಮುಂದುವರೆಸುವುದಾಗಿ ಹೇಳಿದ್ದಾರೆ. ಹೀಗಾಗಿ ಮುರುಗೇಶ್ ನಿರಾಣಿ ಅವರೊಂದಿಗೆ ಸಿಎಂ ಯಡಿಯೂರಪ್ಪ ಅವರಿಗೂ ಕಾನೂನು ತೊಡಕು ಎದುರಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
Recommended Video