ಮುಂದೆ ಏನಾಗುತ್ತೋ ಗೊತ್ತಿಲ್ಲ: ಏನಿದು ಡಿಕೆಶಿ ಹೇಳಿಕೆಯ ಹಿಂದಿನ ಗೂಢಾರ್ಥ?
ಡಿಕೆಶಿ ಸಹೋದರರು ಇನ್ನೇನು ಬಂಧನಕ್ಕೊಳಗಾಗುತ್ತಾರೆನ್ನುವ ಸುದ್ದಿ, ಆನಂತರ ಆ ವಿಷಯ ಅಲ್ಲೇ ತಣ್ಣಗಾದ ಉದಾಹರಣೆಗಳಿವೆ. ನಾವೇನು ತಪ್ಪು ಮಾಡಿಲ್ಲ ಎಂದು ಹೇಳುವ ಸಹೋದರರು, ಇದ್ದಕ್ಕಿದ್ದಂತೇ ಪತ್ರಿಕಾಗೋಷ್ಠಿಯನ್ನು ಶನಿವಾರ (ಸೆ 8) ಕರೆದಿರುವುದು, ಈ ಬಾರಿ ವಿಷಯ ಗಂಭೀರವಾಗಿ ಇರಬಹುದೇನೋ ಎಂದು ಅನಿಸದೇ ಇರದು..
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ದೇಶದಲ್ಲಿ ಬರೀ ದ್ವೇಷದ ರಾಜಕಾರಣ ತುಂಬಿದೆ ಎಂದು ಹೇಳಿರುವ ಡಿ ಕೆ ಸುರೇಶ್, ನೇರವಾಗಿ ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯ ಬಿಜೆಪಿ ಘಟಕದಿಂದ ಆಗುತ್ತಿರುವ ತೂಂದರೆಯನ್ನು ವಿವರಿಸುತ್ತೇನೆ ಎಂದು ಹೇಳಿರುವುದು ಸಹೋದರರ ಬಂಧನದ ವಿಚಾರ ಬೇರೆ ಮಜಲಿಗೆ ಹೋಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆಯಾ ಎಂದು ಪ್ರಶ್ನಿಸುವಂತಾಗಿದೆ.
ಬಂಧನ ಭೀತಿ: ಡಿ.ಕೆ.ಶಿವಕುಮಾರ್ ಮನೆಯಲ್ಲಿ ಬಿರುಸಿನ ಚಟುವಟಿಕೆ
ಶನಿವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಡಿ ಕೆ ಸುರೇಶ್, ನಮ್ಮನ್ನು ಬಿಜೆಪಿಗೆ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ. ನಾವಂತೂ, ಬಿಜೆಪಿ ಸೇರುವುದಿಲ್ಲ, ಮುಂದೆ ಇನ್ನೇನು ಆಗುತ್ತೋ ಗೊತ್ತಿಲ್ಲ ಎನ್ನುವ ಮಾತನ್ನು ಹೇಳಿರುವುದು ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ ಎನ್ನುವ ಮಾತನ್ನು ಹಲವು ಬಾರಿ ಹೇಳಿರುವ ಸಚಿವ ಡಿ ಕೆ ಶಿವಕುಮಾರ್, ಕೆಲವು ಬಿಜೆಪಿ ಮುಖಂಡರ ಜೊತೆಗೆ ಕಾಂಗ್ರೆಸ್ ನಾಯಕರಿಗಿಂತ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎನ್ನುವುದು ಗೌಪ್ಯವಾಗಿ ಉಳಿದಿಲ್ಲ. ಅದರಲ್ಲೂ ಪ್ರಮುಖವಾಗಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಯಡಿಯೂರಪ್ಪನವರ ಜೊತೆ.
ಸೋಮವಾರದಂದು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಬಂಧನ ಸಾಧ್ಯತೆ
ಗುಜರಾತ್ ರಾಜ್ಯಸಭೆ ಚುನಾವಣೆಯ ವೇಳೆ ಬಿಜೆಪಿಗೆ ಸೋಲುಣಿಸಿದ್ದಕ್ಕೆ ನಮ್ಮ ವಿರುದ್ದ ಪ್ರತೀಕಾರ ತೀರಿಸುತ್ತಿದ್ದಾರೆಂದು ಪ್ರತೀಬಾರಿ ಹೇಳುವ ಡಿಕೆಶಿ ಸಹೋದರರು, ಕಳೆದ ಹೋದ ಆ ಘಟನೆಯನ್ನು ಇಟ್ಟುಕೊಂಡು ಬಿಜೆಪಿಯವರು ಇನ್ನೂ ಹಗೆ ಸಾಧಿಸುತ್ತಿದ್ದಾರಾ ಎಂದು ತಿಳಿದುಕೊಳ್ಳಲು ವಿಶೇಷ ರಾಜಕೀಯ ಪಾಂಡಿತ್ಯದ ಅವಶ್ಯಕತೆ ಇದೆಯೇ? ಖಂಡಿತ ಇಲ್ಲ..
ರಾಜ್ಯ ರಾಜಕರಣದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಡಿಕೆಶಿ
ಡೈನಾಮಿಕ್ ಪೊಲಿಟಿಕ್ಸ್ ವಿಚಾರಕ್ಕೆ ಬಂದಾಗ ರಾಜ್ಯ ರಾಜಕಾರಣದಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ಡಿ ಕೆ ಶಿವಕುಮಾರ್ ಅವರ ಶಕ್ತಿ ಬಿಜೆಪಿಗೆ ಬೇಕಾಗಿರುವುದು ಅತ್ಯಂತ ಸ್ಪಷ್ಟ. ಅದರಲ್ಲೂ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಸುಲಭದ ಮಾತಲ್ಲ ಎನ್ನುವ ಈ ಸಮಯದಲ್ಲಿ, ಡಿಕೆಶಿ ಸಹೋದರರನ್ನು ಬಿಜೆಪಿಗೆ ಸೆಳೆಯುವುದಕ್ಕಾಗಿಯೇ ಐಟಿ/ಇಡಿ/ಸಿಬಿಐ ವಿಚಾರ ಮತ್ತೆಮತ್ತೆ ಸುದ್ದಿಯಾಗುತ್ತಿದೆಯಾ ಎನ್ನುವುದನ್ನು ಅರಿಯಲು ಸಹೋದರರಿಗೆ ಹೆಚ್ಚಿನ ಸಮಯ ಬೇಕಾಗಿಲ್ಲ.
ರಾಜ್ಯ ಬಿಜೆಪಿಗೆ ಕೇಂದ್ರದಿಂದ ನಿರ್ದೇಶನ
ಕುಮಾರಸ್ವಾಮಿಯವರ ಜೊತೆ ಸಾಫ್ಟ್ ಪೊಲಿಟಿಕ್ಸ್ ನಡೆಸಲು ರಾಜ್ಯ ಬಿಜೆಪಿಗೆ ಕೇಂದ್ರದಿಂದ ನಿರ್ದೇಶನವಿದೆ ಎನ್ನುವ ಸುದ್ದಿಯ ನಡುವೆ, ಕುಮಾರಸ್ವಾಮಿ ಸರಕಾರ ಉರುಳಿಸಲು ಅಮಿತ್ ಶಾ ನಿಜವಾಗಿಯೇ ಉತ್ಸುಕರಾಗಿದ್ದಾರಾ ಅಥವಾ, ಅವರ ಟಾರ್ಗೆಟ್ ಬರೀ ಡಿಕೆಶಿ ಸಹೋದರರಾ ಎನ್ನುವ ಹಲವು ಗೊಂದಲದ ಪ್ರಶ್ನೆಗಳು ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿರುವ ವೇಳೆ ಕಾಡದೇ ಇರದು.
ಸೆ. 10ರಂದು ಕುಮಾರಸ್ವಾಮಿ ನೇತೃತ್ವದ ನಿಯೋಗದಿಂದ ಮೋದಿ ಭೇಟಿ
ಸರ್ಕಾರ ಸಲ್ಲಿಸುವ ರಿಲೀಫ್ ಫಂಡ್ ಕುರಿತು ಚರ್ಚೆ
ಬಿಜೆಪಿ ನಾಯಕರೆಲ್ಲಾ ನಮ್ಮ ಸ್ನೇಹಿತರು, ಪ್ರಧಾನಿ ಮೋದಿ ಭೇಟಿ ಮಾಡಲು ನಮಗೆ ಅನುಮತಿ ಲಭಿಸಿದ್ದು, ಸರ್ಕಾರ ಸಲ್ಲಿಸುವ ರಿಲೀಫ್ ಫಂಡ್ ಕುರಿತು ಚರ್ಚೆ ನಡೆಸಲು ಅನುಮತಿ ಪಡೆದಿರುವುದಾಗಿ ಸಹೋದರನ ಗೋಷ್ಠಿಯ ನಂತರ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಬಂಧನದ ಭೀತಿಯಲ್ಲಿರುವ ಡಿಕೆಶಿ ಮತ್ತು ಪ್ರಧಾನಿ ಮೋದಿ ಜೊತೆ, ಬರೀ ಪರಿಹಾರಕ್ಕೆ ಸಂಬಂಧಪಟ್ಟ ಮಾತುಕತೆ ಮಾತ್ರ ನಡೆಯುತ್ತದೆ ಎನ್ನುವಷ್ಟು ನಮ್ಮ ರಾಜಕೀಯ ಪರಿಶುದ್ದವಾಗಿದೆಯಾ?
ನಾನು ಮತ್ತು ಯಡಿಯೂರಪ್ಪ ಸ್ನೇಹಿತರು
ಅವಿಶ್ವಾಸ ಗೊತ್ತುವಳಿಯ ವೇಳೆ ಡಿಕೆಶಿ, ನಾನು ಮತ್ತು ಯಡಿಯೂರಪ್ಪ ಸ್ನೇಹಿತರು ಎನ್ನುವ ತುಂಬಿದ ಅಸೆಂಬ್ಲಿಯಲ್ಲಿ ಹೇಳಿದ್ದು, ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ನೋಡಲು ಬಯಸುವ ನಾನು, ನಿಮಗೆ ಮೋಸ ಮಾಡುತ್ತೇನಾ ಎಂದು ಹೇಳಿರುವುದನ್ನು ನೋಡಿದರೆ, ಇವರಿಬ್ಬರು ರಾಜಕೀಯವಾಗಿ ಮಾತ್ರ ಬೇರೆ ಬೇರೆ....ಹಾಗಾಗಿ ಒಂದು ವೇಳೆ, ಆಪರೇಶನ್ ಕಮಲಕ್ಕೆ ಬಿಜೆಪಿ ಮುಂದಾಗಿ, ಯಡಿಯೂರಪ್ಪ ಮತ್ತೆ ಸಿಎಂ ಆಗುತ್ತಾರೆ ಎಂದಾದರೆ, ಡಿಕೆಶಿ ಕೈಜೋಡಿಸಬಹುದೇ ಎನ್ನುವುದು ರಾಜಕೀಯ ಲೆಕ್ಕಾಚಾರಕ್ಕಿಂತ ಮಿಗಿಲಾದದ್ದು.
ಡಿಕೆ ಸುರೇಶ್ ಬಿಡುಗಡೆ ಮಾಡಿದ್ದ ಬಿಎಸ್ ವೈ ಹೆಸರಿನ ಪತ್ರ ನಕಲಿ:ಬಿಜೆಪಿ
ನಾವಂತೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ, ಮುಂದೆ ಏನಾಗುತ್ತೋ ಗೊತ್ತಿಲ್ಲ
ನಮ್ಮನ್ನು ಬಿಜೆಪಿಗೆ ಸೆಳೆಯಲು ಇನ್ನಿಲ್ಲದ ಪ್ರಯತ್ನ ನಡೆಸಲಾಗುತ್ತಿದೆ, ನಾವಂತೂ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ, ಮುಂದೆ ಏನಾಗುತ್ತೋ ಗೊತ್ತಿಲ್ಲ ಎನ್ನುವ ಡಿ ಕೆ ಸುರೇಶ್ ಹೇಳಿಕೆ, ಸದ್ಯದ ರಾಜಕೀಯ ಕಾಲಘಟ್ಟದಲ್ಲಿ ಬೇರೆ ರೀತಿಯಾಗಿ ಅರ್ಥೈಸಲಾಗುತ್ತಿದೆ. ಹಾಗಾಗಿ, ಮುಂದಿನ ಕೆಲವು ದಿನಗಳಲ್ಲಿನ ರಾಜಕೀಯ ವಿದ್ಯಮಾನ, ರಾಜ್ಯ ರಾಜಕೀಯದಲ್ಲಿ ಹೊಸ ಭಾಷ್ಯ ಬರೆದರೆ ಆಶ್ಚರ್ಯ ಪಡಬೇಕಾಗಿಲ್ಲ.