ಬಿಎಸ್ವೈ ಸಂಪುಟದಲ್ಲಿ, ಒಬ್ಬರು ಮಾಜಿ ಸಿಎಂ, ಇಬ್ಬರು ಮಾಜಿ ಡಿಸಿಎಂ
ಬೆಂಗಳೂರು, ಆ 21: ಅಳೆದುತೂಗಿ, ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ 25 ದಿನಗಳ ನಂತರ ಸಂಪುಟ ರಚನೆಯಾಗಿದೆ. ಪ್ರಾದೇಶಿಕ ಅಸಮತೋಲನ, ಪಕ್ಷ ನಿಷ್ಟರಿಗೆ ಸ್ಥಾನ ಲಭಿಸಿಲ್ಲ, ಐದಾರು ಬಾರಿ ಗೆದ್ದರೂ ಪ್ರಯೋಜನವಾಗಿಲ್ಲ ಎನ್ನುವ ಕೂಗು ಜೋರಾಗಿಯೇ ಕೇಳಿಸುತ್ತಿದೆ.
Recommended Video
ಅಸಮಾಧಾನಗೊಂಡವರನ್ನು ತಮ್ಮ ನಿವಾಸಕ್ಕೆ ಕರೆಸಿ, ಮುರಳೀಧರ ರಾವ್ ಸಮ್ಮುಖದಲ್ಲಿ ಯಡಿಯೂರಪ್ಪ ಸಂಧಾನ ಮಾಡುತ್ತಿದ್ದಾರೆ. ಮತ್ತೆ, ಐವರನ್ನು ಸದ್ಯದಲ್ಲೇ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ ಎನ್ನುವ ಭರವಸೆಯನ್ನು ನೀಡುತ್ತಿದ್ದಾರೆ. ನೂತನ ಸಂಪುಟದಲ್ಲಿ ಒಬ್ಬರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಮಾಜಿ ಉಪಮುಖ್ಯಮಂತ್ರಿಗಳಿದ್ದಾರೆ.
ಅಂದು ಅಮಿತ್ ಶಾ, ಇಂದು ಚಿದಂಬರಂ: ಎಲ್ಲರ ಕಾಲನ್ನೂ ಎಳೆಯುತ್ತೆ ಕಾಲ!
ಮಂಗಳವಾರ (ಆ 20) ಹದಿನೇಳು ಮುಖಂಡರು ಪ್ರಮಾಣವಚನ ಸ್ವೀಕರಿಸಿದ್ದರು, ಅದರಲ್ಲಿ ಹನ್ನೊಂದು ಮಂದಿ ಸೀನಿಯರ್ ಸಿಟಿಜನ್. ಸೋಮವಾರ ತಡರಾತ್ರಿ, ಅಮಿತ್ ಶಾ ಅವರಿಂದ ಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಹಾಗಾಗಿ, ತಡಮಾಡದೇ, ಮಂಗಳವಾರ ಎನ್ನುವುದನ್ನೂ ನೋಡದೇ, ಯಡಿಯೂರಪ್ಪ ಪ್ರಮಾಣವಚನ ನಡೆಸಿಬಿಟ್ಟರು.
2008ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಗೆದ್ದು ಅಧಿಕಾರಕ್ಕೆ ಬಂದಾಗ, ಆ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ರಾಜ್ಯ ಕಂಡಿತ್ತು. ಯಡಿಯೂರಪ್ಪ ನಂತರ ಸದಾನಂದ ಗೌಡ, ಇದಾದ ನಂತರ ಜಗದೀಶ್ ಶೆಟ್ಟರ್ 304ದಿನಕ್ಕೆ ಮುಖ್ಯಮಂತ್ರಿಯಾಗಿದ್ದರು. ಈಗ, ಜಗದೀಶ್ ಶೆಟ್ಟರ್, ಯಡಿಯೂರಪ್ಪನವರ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಯಡಿಯೂರಪ್ಪ ಆಂಡ್ ಟೀಂ: ಸಂಪುಟ ವಿಸ್ತರಣೆ ಸಂತಸದ ಚಿತ್ರಗಳು
ಇನ್ನು, ಸದಾನಂದ ಗೌಡ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಭಿನ್ನಮತವೂ ಬಿಜೆಪಿಯಲ್ಲಿ ಹೆಚ್ಚಾಗಲಾರಂಭಿಸಿತು. ಈ ನಡುವೆ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾರು. ಆ ವೇಳೆ, ಇಬ್ಬರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು.
ಶಿವಮೊಗ್ಗ ಕ್ಷೇತ್ರದ ಕೆ ಎಸ್ ಈಶ್ವರಪ್ಪ ಮತ್ತು ಬೆಂಗಳೂರು ಪದ್ಮನಾಭ ನಗರ ಕ್ಷೇತ್ರದ ಆರ್ ಅಶೋಕ್ ಇಬ್ಬರೂ ಉಪಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಇವರಿಬ್ಬರೂ, ಈಗಿನ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.