ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾನಂತೂ ಸುಮ್ಮನಿರಲ್ಲ: ಶಾಸಕ ರೇಣುಕಾಚಾರ್ಯ!
ಬೆಂಗಳೂರು, ನ. 19: ಉಪ ಚುನಾವಣೆಯ ಬೆನ್ನಲ್ಲಿಯೆ ರಾಜ್ಯ ಬಿಜೆಪಿಯಲ್ಲಿ ಬಹಳಷ್ಟು ಬೆಳವಣಿಗೆಗಳು ಆಗುತ್ತಿವೆ. ಸಂಪುಟ ವಿಸ್ತರಣೆ ಕುರಿತಂತೆ ಒತ್ತಗಳು ಹೆಚ್ಚಾಗುತ್ತಿವೆ. ಮತ್ತೊಂದೆಡೆ ಹೈಕಮಾಂಡ್ ನಿರ್ಧಾರದ ಮೇಲೆ ಹಾಲಿ ಮಂತ್ರಿಗಳ ಭವಿಷ್ಯ ನಿಂತಿದೆ. ಸಂಪುಟ ವಿಸ್ತರಣೆಯೊ? ಸಂಪುಟ ಪುನಾರಚನೆಯೊ? ಎಂಬುದು ನನಗೆ ತಿಳಿದಿಲ್ಲ ಎಂಬ ಸಿಎಂ ಯಡಿಯೂರಪ್ಪ ಅವರ ಹೇಳಿಕೆ ಹಾಲಿ ಮಂತ್ರಿಗಳ ಎದೆಯ ಬಡಿತ ಹೆಚ್ಚಾಗುವಂತೆ ಮಾಡಿದೆ.
ಸಂಪುಟ ಪುನಾರಚನೆ ಆದಲ್ಲಿ, ಎರಡ್ಮೂರು ಮಂತ್ರಿಗಳಿಗೆ ಖಂಡಿತವಾಗಿಯೂ ಕೋಕ್ ಕೊಡುವ ಸಾಧ್ಯತೆಗಳಿವೆ. ಕಳಪೆ ಸಾಧನೆ ಮಾಡಿರುವವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎಂಬ ಮಾತಿಗಳು ಬಿಜೆಪಿ ವಲಯದಲ್ಲಿಯೇ ಕೇಳಿ ಬಂದಿವೆ. ಜೊತೆಗೆ ಮಂತ್ರಿಸ್ಥಾನದ ಆಕಾಂಕ್ಷಿಗಳು ತಮ್ಮ ಪ್ರಯತ್ನವನ್ನು ತೀವ್ರಗೊಳಿಸಿದ್ದಾರೆ. ಈ ಮಧ್ಯೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಲವರು ರಾಜ್ಯ ಬಿಜೆಪಿ ಕಚೇರಿಯಲ್ಲಿ ಭೇಟಿ ಮಾಡಿದ್ದಾರೆ. ಆ ಬಳಿಕ ರೇಣುಕಾಚಾರ್ಯ ನೀಡಿರುವ ಹೇಳಿಕೆ ಬಿಜೆಪಿಯಲ್ಲಿ ಸಂಚಲವನ್ನುಂಟು ಮಾಡಿದೆ.
ಸಂಪುಟ ವಿಳಂಬ: ಕಟೀಲ್ ಭೇಟಿ
ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಮಂತ್ರಿಸ್ಥಾನದ ಆಕಾಂಕ್ಷಿ ಶಾಸಕರು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಿ ಒತ್ತಡ ಹಾಕಿದ್ದಾರೆ. ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಟೀಲ್ ಅವರನ್ನು ಮಂತ್ರಿಸ್ಥಾನದ ಆಕಾಂಕ್ಷಿಗಳಾದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಶಂಕರ್ ಪಾಟೀಲ್ ಮುನೇನಕೊಪ್ಪ, ಲಿಂಗಣ್ಣ ಭೇಟಿ ಮಾಡಿ ಚರ್ಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ನಾನಂತೂ ಸುಮ್ಮನಿರಲ್ಲ!
ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿರುವ ರೇಣುಕಾಚಾರ್ಯ ಅವರು, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.
ಶಾಸಕ ರೇಣುಕಾಚಾರ್ಯ ಅವರು, ರಾಮ ರಾಮ ಅಂತಾ ಒಬ್ಬರ ಹೆಸರನ್ನು ನಾನು ಜಪ ಮಾಡಲ್ಲ. ಅವರ ಹೆಸರು ಕೂಡ ಹೇಳಲ್ಲ. ಆದರೆ ಅವರಿಗೆ ಮಂತ್ರಿ ಸ್ಥಾನ ಕೊಟ್ರೆ ನಾವಂತೂ ಸುಮ್ಮನೆ ಇರಲ್ಲ ಎಂದು ಹೆಸರು ಪ್ರಸ್ತಾಪ ಮಾಡದೆ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಕಿಡಿ ಕಾರಿದ್ದಾರೆ.
ವಾಸ್ತವಾಂಶ ತಿಳಿಸಿದ್ದೇವೆ
ಇರುವ ವಾಸ್ತವಾಂಶವನ್ನು ತಿಳಿಸುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ಯಾರನ್ನು ಸೇರಿಸಬೇಕು ಕೈಬಿಡಬೇಕು ಅನ್ನೋದು ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಕಟೀಲ್ ಹಾಗೂ ಹೈಕಮಾಂಡ್ಗೆ ಬಿಟ್ಟ ನಿರ್ಧಾರ.
ಸರ್ಕಾರ ಬಂದು ಒಂದೂವರೆ ವರ್ಷ ಆಗಿದೆ. ಕೆಲವು ಸಚಿವರನ್ನು ಸಂಪುಟದಿಂದ ಕೈ ಬಿಡಬೇಕಾಗುತ್ತದೆ. ಕೈಬಿಡಬೇಕು ಎಂಬುದು ಇದು ಬಹಳಷ್ಟು ಶಾಸಕರ ಅಭಿಪ್ರಾಯ. ಮೂರ್ನಾಲ್ಕು ಬಾರಿ ಗೆದ್ದವರನ್ನು ಮಂತ್ರಿ ಮಾಡಬೇಕಾಗುತ್ತದೆ ಎಂದು ಹೇಳಿಕೆ ಕೊಡುವ ಮೂಲಕ ತಮಗೆ ಮಂತ್ರಿ ಸ್ಥಾನ ಕೊಡಬೇಕು ಎಂಬ ಒತ್ತಾಯವನ್ನು ರೇಣುಕಾಚಾರ್ಯ ಮಾಡಿದ್ದಾರೆ.
ಇದನ್ನೇ ಅವರಿಗೆ ಹೇಳಿದ್ದೇವೆ
ಇದೇ ವಿಷಯವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹೇಳಿದ್ದೇವೆ. ಈ ವಿಚಾರವನ್ನು ನಾವು ಸಿಎಂ ಯಡಿಯೂರಪ್ಪ ಅವರಿಗೂ ಕೂಡಾ ಹೇಳುತ್ತೇವೆ. ಮುಂದಿನ ಉಪಚುನಾವಣೆ, ಗ್ರಾ.ಪಂ., ಜಿ.ಪಂ ಚುನಾವಣೆಯ ದೃಷ್ಟಿಯಿಂದ ತೀರ್ಮಾನ ಮಾಡಬೇಕು ಎಂದು ಹೇಳಿದ್ದೇವೆ.
ನನಗೇ ಸಚಿವ ಸ್ಥಾನ ಕೊಡಬೇಕು ಅಂತಾ ಹೇಳುತ್ತಿಲ್ಲ. ಗೆದ್ದಿರುವ ಶಾಸಕರಿಗೆ ಕೊಡಬೇಕು. ನಮ್ಮ ಜಿಲ್ಲೆ, ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಅಂತಾ ಕೇಳಿದ್ದೇನೆ ಎಂದು ರೇಣುಕಾಚಾರ್ಯ ಅವರು ಹೇಳಿಕೆ ನೀಡಿದ್ದಾರೆ.