ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಏನಿದು ದೇವೇಗೌಡ್ರ ಅಪ್ರತಿಮ ತಂತ್ರಗಾರಿಕೆ!
"ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಗಳು, ನನ್ನ ಕಡುದ್ವೇಷಿಯೇನೂ ಅಲ್ಲ. ರಾಜಕೀಯದಲ್ಲಿ ಪರ್ಮನೆಂಟ್ ಆಗಿ ಯಾರೂ ಶತ್ರುಗಳಲ್ಲ" ಎನ್ನುವ ಹೇಳಿಕೆಯನ್ನು ಜೆಡಿಎಸ್ ವರಿಷ್ಠ ದೇವೇಗೌಡ್ರು ನೀಡುವ ಮೂಲಕ, ರಾಜ್ಯ ರಾಜಕೀಯದಲ್ಲಿ ಹೊಸ ಸಮೀಕರಣಕ್ಕೆ ನಾಂದಿ ಹಾಡಿದ್ದರು.
ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿಯ ಗುಸುಗುಸು ಸುದ್ದಿ ಚಾಲ್ತಿಯಲ್ಲಿದ್ದಾಗಲೇ, "ರಾಜ್ಯ ಎದುರಿಸುತ್ತಿರುವ ಭೀಕರ ಪ್ರವಾಹದ ವೇಳೆ ಇನ್ನೊಂದು ಚುನಾವಣೆ ಬೇಕಿಲ್ಲ. ಯಡಿಯೂರಪ್ಪನವರ ಸರಕಾರ ಪತನಗೊಳ್ಳಲು ಬಿಡುವುದಿಲ್ಲ" ಎಂದು ಕುಮಾರಸ್ವಾಮಿ ಹೇಳಿರುವುದು, ಗೌಡ್ರ ಹೇಳಿಕೆಗೆ ಇನ್ನಷ್ಟು ಬಲನೀಡಿತ್ತು.
ಉಪ ಚುನಾವಣೆ; ಅಖಾಡಕ್ಕಿಳಿದ ಎಚ್. ಡಿ. ದೇವೇಗೌಡರು
ಜೆಡಿಎಸ್ ಯಾವ ಕಾರಣಕ್ಕಾಗಿ ಬಿಜೆಪಿ ಬೆಂಬಲಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನುವುದರ ಬಗ್ಗೆ ಅವಲೋಕಿಸಿದಾಗ, ಜೆಡಿಎಸ್ ಪಕ್ಷದೊಳಗಿನ ಭಿನ್ನಮತ ಮತ್ತು ತಮ್ಮ ಶಾಸಕರ ಪಕ್ಷಾಂತರದ ಭಯ.
ಉಪಚುನಾವಣೆ: ರಾಜ್ಯದ ಇಬ್ಬರು ನಾಯಕರನ್ನು ಅಗ್ನಿಪರೀಕ್ಷೆಗೆ ದೂಡಿದ ಅಮಿತ್ ಶಾ
ಮಗ ನಿಖಿಲ್ ಸಿನಿಮಾ ಪ್ರಾಜೆಕ್ಟಿಗೆ ಸಂಬಂಧಿಸಿದಂತೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಕಳೆದ ಸೋಮವಾರ (ನ 4) ಅವರು ಲಂಡನ್ ಪ್ರವಾಸಕ್ಕೆ ತೆರಳಿದ್ದರು. ಈ ಅವಧಿಯಲ್ಲಿ ದೇವೇಗೌಡ್ರು ಖಡಕ್ ನಿರ್ಧಾರ ತೆಗೆದುಕೊಂಡು, ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ.
ಬಸವರಾಜ ಹೊರಟ್ಟಿ ಸೇರಿದಂತೆ, ಜೆಡಿಎಸ್ಸಿನ ಎಂಎಲ್ಸಿಗಳು
ಬಸವರಾಜ ಹೊರಟ್ಟಿ ಸೇರಿದಂತೆ, ಜೆಡಿಎಸ್ಸಿನ ಎಂಎಲ್ಸಿಗಳಿಗೆ ಪ್ರಮುಖವಾಗಿ ಅಸಮಾಧಾನ ಇರುವುದು ಕುಮಾರಸ್ವಾಮಿಯವರ ಮೇಲೆ. "ಅಧಿಕಾರದಲ್ಲಿದ್ದಾಗ ಅಥವಾ ಇಲ್ಲದಿದ್ದಾಗಲೂ, ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿದೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನಾಗಲಿ, ಹೊರಗಡೆಯಾಗಲಿ ಪ್ರಶ್ನೆ ಮಾಡಿಲ್ಲ" ಎಂದು ಹೊರಟ್ಟಿ ಹೇಳಿದ್ದರು. ಇವರ ವಿರೋಧ ಹೆಚ್ಚಾಗುತ್ತಿದ್ದಂತೆಯೇ, ದೇವೇಗೌಡ್ರು ಎಲ್ಲರನ್ನೂ ತಮ್ಮ ನಿವಾಸಕ್ಕೆ ಕರೆಸಿಕೊಂಡರು.
ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ದೇವೇಗೌಡ್ರು
ಎಂಎಲ್ಸಿಗಳನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಗೌಡ್ರು, ಅವರ ಅಸಮಾಧಾನವನ್ನು ಒಂದು ಹಂತಕ್ಕೆ ಸರಿದಾರಿಗೆ ತರುವಲ್ಲಿ ಯಶಸ್ವಿಯಾಗಿದ್ದರು. ಆದರೆ, "ಕಾಯಿಲೆ ಏನೂಂತಾ ಗೊತ್ತಾದರೆ, ಔಷಧಿ ಕೊಡಬಹುದು" ಎಂದು ಕುಮಾರಸ್ವಾಮಿ, ಎಂಎಲ್ಸಿಗಳ ಭೇಟಿಯ ಬಗ್ಗೆ ವ್ಯಂಗ್ಯವಾಡಿದ್ದರು. ಇದಕ್ಕೆ ಮತ್ತೆ ಬೇಸರಿಸಿಕೊಂಡ ಎಂಎಲ್ಸಿಗಳನ್ನು ಸಮಾಧಾನ ಪಡಿಸಿದ ಗೌಡ್ರು, ನವೆಂಬರ್ ಆರರಂದು ಸಭೆ ಕರೆಯುವುದಾಗಿ ಹೇಳಿದ್ದರು. ಆದರೆ, ಈ ಸಭೆ ನಡೆಯಲಿಲ್ಲ.
ಪುಟ್ಟಣ್ಣ ಉಚ್ಚಾಟನೆ
ಎಂಎಲ್ಸಿಗಳಲ್ಲಿ ಒಬ್ಬರಾಗಿದ್ದ ಪುಟ್ಟಣ್ಣ ಅವರನ್ನು ಪಕ್ಷವಿರೋಧಿ ಚಟುವಟಿಕೆ ನಡೆಸಿದ್ದಕ್ಕಾಗಿ, ದೇವೇಗೌಡ್ರು ಉಚ್ಚಾಟಿಸಿದ್ದರು. ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಗೌಡ್ರು ತೆಗೆದುಕೊಂಡ ನಿರ್ಧಾರ ಇದಾಗಿತ್ತು. "ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಜಾರಿಯಾಗುತ್ತದೆ" ಎಂದು ರಾಜ್ಯಾಧ್ಯಕ್ಷ ಎಚ್,ಕೆ,ಕುಮಾರಸ್ವಾಮಿ ಹೇಳಿದ್ದರು ಪುಟ್ಟಣ್ಣ, ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು.
ಮಹಾಲಕ್ಷ್ಮೀ ಲೇಔಟ್ ಅಸೆಂಬ್ಲಿ ಕ್ಷೇತ್ರದಲ್ಲಿ ದೇವೇಗೌಡ್ರು, ಬೃಹತ್ ಸಭೆ
ಈಗ, ಶನಿವಾರ (ನ 9) ಮಹಾಲಕ್ಷ್ಮೀ ಲೇಔಟ್ ಅಸೆಂಬ್ಲಿ ಕ್ಷೇತ್ರದಲ್ಲಿ ದೇವೇಗೌಡ್ರು, ಬೃಹತ್ ಸಭೆಯನ್ನು ಆಯೋಜಿಸಿದ್ದಾರೆ. ಅಲ್ಲಿನ ಜೆಡಿಎಸ್ ಶಾಸಕರಾಗಿದ್ದ ಗೋಪಾಲಯ್ಯ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 'ಸ್ವಾಭಿಮಾನಿ ಮತದಾರ' ಎನ್ನುವ ಹೆಸರಿನಲ್ಲಿ ಜೆಡಿಎಸ್ ಈ ಸಭೆ ಆಯೋಜಿಸಿದೆ. ದೇವೇಗೌಡ್ರ ಅಣತಿಯಂತೆ, ಈ ಸಭೆಯನ್ನು ಆಯೋಜಿಸಲಾಗುತ್ತಿದ್ದು, ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಗೌಡ್ರು ಘೋಷಿಸುವ ಸಾಧ್ಯತೆಯಿದೆ.
ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಏನಿದು ದೇವೇಗೌಡ್ರ ತಂತ್ರಗಾರಿಕೆ
"ಪಕ್ಷಬಿಟ್ಟು ಹೋಗುವವರು ಹೋಗಲಿ" ಎಂದು ಈಗಾಗಲೇ ಖಡಕ್ ಆಗಿ ಹೇಳಿಕೆ ನೀಡಿರುವ ಗೌಡ್ರು, ಪುಣ್ಣಣ್ಣಯ್ಯ ಅವರನ್ನು ಉಚ್ಚಾಟಿಸಿ ಸ್ಪಷ್ಟ ಸಂದೇಶವನ್ನು ಸಾರಿದ್ದಾರೆ. ಕುಮಾರಸ್ವಾಮಿ ಲಂಡನ್ ಪ್ರವಾಸದಿಂದ ಬರುವುದಕ್ಕೆ ಮುನ್ನ, ಒಂದು ಹಂತಕ್ಕೆ ಎಲ್ಲಾ ಬಂಡಾಯಕ್ಕೆ ತೇಪೆ ಹಚ್ಚುವ ಕೆಲಸವನ್ನು ದೇವೇಗೌಡ್ರು ಮಾಡುತ್ತಿದ್ದಾರೆ. ಇದು ಹೇಗೆ ಜೆಡಿಎಸ್ ಪಕ್ಷಕ್ಕೆ ವರ್ಕೌಟ್ ಆಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.