ಚಿತ್ರಗಳಲ್ಲಿ: ಶ್ರವಣಬೆಳಗೊಳ ನುಡಿಹಬ್ಬದ ಹೈಲೈಟ್ಸ್
ಹಾಸನ, ಫೆ. 1: ಗೊಮ್ಮಟನಗರಿ ಶ್ರವಣಬೆಳಗೊಳದಲ್ಲಿ ಮೂರು ದಿನದ ನುಡಿಹಬ್ಬಕ್ಕೆ ಭಾನುವಾರ ಚಾಲನೆ ದೊರೆತಿದೆ. ಕನ್ನಡ ಮಾಧ್ಯಮ ಕಲಿಕೆಯ ಕೂಗು ಮೊದಲನೇ ದಿನವೇ ಎದ್ದಿದೆ. ಭಾಷೆ ಎದುರಿಸುತ್ತಿರುವ ಆತಂಕಗಳನ್ನು ಸಮ್ಮೇಳನಾಧ್ಯಕ್ಷ ಸಿದ್ದಲಿಂಗಯ್ಯ ಬಿಚ್ಚಿಟ್ಟಿದ್ದಾರೆ.
ಕನ್ನಡ ನಾಡು, ನುಡಿ ಉಳಿವಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡುವುದಾಗಿ ಮುಖ್ಯಮಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇವು ಸಮ್ಮೇಳನದ ವೇದಿಕೆ ಮೇಲಿನ ಭಾಷಣದ ಸುತ್ತಲ ಚಿತ್ರಣವಾದರೆ ಹೊರಗಿನ ಘಟನಾವಳಿಗಳ ಮೇಲೊಂದು ಝಲಕ್ ಇಲ್ಲಿದೆ.[ಭಾಷೆಗೆ ಆತಂಕ ತಂದಿರುವ ಆಂಗ್ಲ ಶಾಲೆಗಳು: ಸಿದ್ದಲಿಂಗಯ್ಯ]
ಡಿಸೋಜಾಗೆ ಪ್ರವೇಶ ನಿರಾಕರಣೆ
ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಾ.ಡಿಸೋಜಾ ಅವರಿಗೆ ಪೊಲೀಸರು ಪ್ರವೇಶ ನಿರಾಕರಿಸಿದರು. ಡಿಸೋಜ ಬಳಿ ಪೊಲೀಸರು ಗುರುತಿನ ಚೀಟಿ ಕೇಳಿದ್ದು ಗೊಂದಲಕ್ಕೆ ಕಾರಣವಾಯಿತು. ನಂತರ ಸ್ಥಳಕ್ಕೆ ಧಾವಿಸಿದ ಆಯೋಜಕರು ಪರಿಸ್ಥಿತಿ ತಿಳಿಗೊಳಿಸಿ ಡಿಸೋಜಾ ಅವರನ್ನು ವೇದಿಕೆಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿದರು.
ಹೆಚ್ಚಿನ ಅನುದಾನ ನೀಡಿ
ಕನ್ನಡ ಸಾಹಿತ್ಯ ಪರಿಷತ್ ಗೆ 100 ವರ್ಷ ತುಂಬಿದ್ದು, ನಾಡು ನುಡಿ ರಕ್ಷಣೆಗೆ ಸರ್ಕಾರ ನೀಡುತ್ತಿರುವ ಅನುದಾನ ಸಾಕಾಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ವಿಶೇಷ ಗಮನ ಹರಿಸಬೇಕು ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಖಾರವಾಗಿಯೇ ಹೇಳಿದರು.
ಊಟ ಉಪಚಾರ
ಈ ಬಾರಿ ಸಾಹಿತ್ಯಾಸಕ್ತರಿಗೆ ರಾಗಿ ಮುದ್ದೆ, ಸೊಪ್ಪಿನ ಸಾರು ಸವಿಯುವ ಅವಕಾಶ. ಜೊತೆಗೆ ಉತ್ತರ ಕರ್ನಾಟಕ ಶೈಲಿಯ ಜೋಳದ ರೊಟ್ಟಿ ಝುಣಕವನ್ನು ನೀಡಲಾಯಿತು. ಒಟ್ಟು ಒಟ್ಟು ಒಂಭತ್ತು ಕಡೆ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಕಲಾವಿದರಿಗೆ, ಸಾಹಿತಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಊಟ ಉಪಚಾರದ ವೇಳೆ ಯಾವುದೇ ಗೊಂದಲಗಳು ಉಂಟಾಗಲಿಲ್ಲ.
ಪುಸ್ತಕ ಅಂಗಡಿ ಮಾಲೀಕರ ಪ್ರತಿಭಟನೆ
ಮಧ್ಯಾಹ್ನ ಇದ್ದಕ್ಕಿದ್ದಂತೆ ಪುಸ್ತಕ ಅಂಗಡಿ ಮಾಲೀಕರು ಪ್ರತಿಭಟನೆ ಆರಂಭಿಸಿದರು. ಆಯೋಜಕರು ಪುಸ್ತಕ ಮಳಿಗೆಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿಲ್ಲ. ಕೇವಲ ಎದುರಿನ ಪುಸ್ತಕ ಮಳಿಗೆಗಳಿಗೆ ಮಾತ್ರ ಜನ ಬರುತ್ತಿದ್ದಾರೆ. ದೂರದಿಂದ ಪುಸ್ತಕ ಮಾರಾಟಕ್ಕೆ ಆಗಮಿಸಿರುವ ನಾವು ನಷ್ಟ ಅನುಭವಿಸುವಂತಾಗಿದೆ. ಜನರು ಓಡಾಡಲು ಒಂದೇ ಪಥ ನಿರ್ಮಿಸಿದ್ದು ಸಮಸ್ಯೆಯಾಗಿದೆ ಎಂದು ಮಾಲೀಕರು ಆರೋಪಿಸಿದ
ಜಾಮ್ ಜಾಮ್
ಸಾಹಿತ್ಯ ಸಮ್ಮೇಳನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿದ್ದು ಎಲ್ಲರ ಮೊಬೈಲ್ ಜಾಮ್ ಆಗಿತ್ತು. ಕರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮೊಬೈಲ್ ಇಂಟರ್ ನೆಟ್ ಸಹ ಬಂದ್ ಆಗಿದ್ದು ಹಲವರು ತೊಂದರೆಗೆ ಸಿಕ್ಕಿ ಹಾಕಿಕೊಳ್ಳುವಂತಾಯಿತು.