ಚಿತ್ರಸುದ್ದಿ : ಮಳೆ ಮಾರುವ ಹುಡುಗ ಲೋಕಾರ್ಪಣೆ
ಕುಮಟಾ, ಸೆ.2: ಸ್ವಸ್ತಿ ಪ್ರಕಾಶನ ಸಂಸ್ಥೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಥಾಸಂಕಲನ ಸ್ಪರ್ಧೆ 2014 ರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಬಹುಮಾನಿತ ಕೃತಿ ಕರ್ಕಿ ಕೃಷ್ಣಮೂರ್ತಿ ಯವರ "ಮಳೆ ಮಾರುವ ಹುಡುಗ" ಪುಸ್ತಕ ಅನಾವರಣ ಕಾರ್ಯಕ್ರಮ ಆ.31ರಂದು ನಾದಶ್ರೀ ಸಭಾಭವನದಲ್ಲಿ ಸಾಂಗವಾಗಿ ನೆರವೇರಿತು.
ಕಥಾಸಂಕಲನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವಿಜೇತ ಕರ್ಕಿ ಕೃಷ್ಣಮೂರ್ತಿ ಯವರ "ಮಳೆ ಮಾರುವ ಹುಡುಗ" ಕೃತಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪ್ರಸಿದ್ದ ಕಥೆಗಾರರಾದ ಡಾ. ಶ್ರೀಧರ್ ಬಳಗಾರ್ ಅವರು ಅಧ್ಯಕ್ಷರಾಗಿದ್ದರು.
ಮಂಗಳೂರು ಆಕಾಶವಾಣಿ ನಿರ್ದೇಶಕರಾದ ಡಾ.ವಸಂತ ಕುಮಾರ್ ಪೆರ್ಲ ಹಾಗೂ ಪ್ರಸಿದ್ಧ ಕಾದಂಬರಿಕಾರರಾದ ಕರಣಂ ಪವನ್ ಪ್ರಸಾದ್ ಉಪಸ್ಥಿತರಿದ್ದರು. ಕಾರ್ಯಕ್ರಮ ಕುಮಾರಿ ಸುಷ್ಮಾ, ಕುಮಾರಿ ಶ್ವೇತಾ ಹಾಗೂ ಕುಮಾರಿ ಅನುಷಾ ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸ್ವಸ್ತಿ ಪ್ರಕಾಶನ ದ ಶ್ರೀಮತಿ ಪ್ರಿಯಾ ಕಲ್ಲಬ್ಬೆ ಎಲ್ಲರನ್ನೂ ಸ್ವಾಗತಿಸಿದರು.
ಕಥಾ ಸಾಹಿತ್ಯಕ್ಕೆ ಇದೊಂದು ಉತ್ತಮ ಕೊಡುಗೆ
ವಿನಾಯಕ್ ಭಾಗ್ವತ್ ಸ್ವಸ್ತಿ ಪ್ರಕಾಶನದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು, ಸಂಜಯ್ ಭಟ್ ಬೆಣ್ಣೆ "ಮಳೆ ಮಾರುವ ಹುಡುಗ" ಕೃತಿಯನ್ನು ಪರಿಚಯಿಸಿದರು. ಕೃತಿಯ ಲೇಖಕರಾದ ಕರ್ಕಿ ಕೃಷ್ಣಮೂರ್ತಿ ಯವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಳೆ ಮಾರುವ ಹುಡುಗ ನ ಬಗ್ಗೆ ಅತಿಥಿಗಳು ವಿಮರ್ಶಾತ್ಮಕ ಮಾತುಗಳನ್ನಾಡಿದರು. ಕನ್ನಡ ಕಥಾ ಸಾಹಿತ್ಯಕ್ಕೆ ಇದೊಂದು ಉತ್ತಮ ಕೊಡುಗೆ ಎಂಬ ನುಡಿಗಳು ಮೂಡಿ ಬಂದವು.ಕಥೆಗಳ ಜೊತೆಗಿನ ಅನುಭವ ಹಂಚಿಕೊಂಡರು
ಲೇಖಕರಾದ ಕೃಷ್ಣಮೂರ್ತಿಯವರು ತಮ್ಮ ಸಾಹಿತ್ಯ ಪ್ರಯಾಣದಲ್ಲಿ ಕಥೆಗಳ ಜೊತೆಗಿನ ಅನುಭವ ಹಂಚಿಕೊಂಡರು. ಕೊನೆಯಲ್ಲಿ ಶ್ರೀಮತಿ ಸುಧಾ ಎಂ ಅವರು ಎಲ್ಲರನ್ನೂ ವಂದಿಸಿದರು. ರಾಘವೇಂದ್ರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಶಿರಸಿ, ಹುಬ್ಬಳ್ಳಿ, ಬೆಂಗಳೂರು, ಗೋವಾ ಹೀಗೆ ದೂರದೂರದಿಂದ ಬಂದ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಸಡಗರದಿಂದ ಭಾಗವಹಿಸಿದರು.
ಸ್ವಸ್ತಿ ಪ್ರಕಾಶನ "ಕಥಾಸಂಕಲನ" ಪ್ರಶಸ್ತಿ
ಕಳೆದ ಮಾರ್ಚ್ ತಿಂಗಳಿನಲ್ಲಿ "ಸ್ವಸ್ತಿ ಪ್ರಕಾಶನ 2014 ನೇ ಸಾಲಿನ "ಕಥಾಸಂಕಲನ" ಪ್ರಶಸ್ತಿಗಾಗಿ ಅರ್ಹರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಿತ್ತು. ರಾಜ್ಯಾದ್ಯಂತ ಸುಮಾರು 20 ಕಥಾಸಂಕಲನಗಳು ಆಗಮಿಸಿದ್ದು, ಅವುಗಳಲ್ಲಿ 6 ಕಥಾಸಂಕಲನಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿತ್ತು.
ಖ್ಯಾತ ಕಥೆಗಾರ, ಸಂವೇದನಾಶೀಲ ಬರಹಗಾರರೂ ಆದ ಡಾ. ಶ್ರೀಧರ್ ಬಳಗಾರ್ ಸ್ಪರ್ಧೆಯ ತೀರ್ಪುಗಾರರಾಗಿದ್ದರು. 2014ನೇ ಸಾಲಿಗೆ ಪ್ರಶಸ್ತಿಗಾಗಿ ಕರ್ಕಿ ಕೃಷ್ಣಮೂರ್ತಿಯವರ 'ಮಳೆ ಮಾರುವ ಹುಡುಗ ಕಥಾಸಂಕಲವನ್ನು ಆಯ್ಕೆ ಮಾಡಿದ್ದರು.ಕರ್ಕಿ ಕೃಷ್ಣಮೂರ್ತಿ ಅವರಿಗೆ ಅಭಿನಂದನೆ
ಪ್ರಶಸ್ತಿ ವಿಜೇತ ಕರ್ಕಿ ಕೃಷ್ಣಮೂರ್ತಿ ಅವರಿಗೆ ಐದು ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಕೊಟ್ಟು ಅಭಿನಂದಿಸಲಾಗುತ್ತದೆ ಮತ್ತು ಕಥಾ ಸಂಕಲನವನ್ನು ಸ್ವಸ್ತಿ ಪ್ರಕಾಶನವು ಪ್ರಕಟಿಸುತ್ತದೆ. ಪ್ರಶಸ್ತಿಯ ಮೊತ್ತದ ಜೊತೆ 25 ಪುಸ್ತಕಗಳನ್ನು ಅವರು ಪಡೆದಿದ್ದಾರೆ.