ಅಧಿಕ ಮಳೆಯಿಂದ ಆರು ದಿನದಿಂದ ವಿದ್ಯುತ್ ಕಾಣದ ಮಲೆನಾಡು ಜನತೆ
ಚಿಕ್ಕಮಗಳೂರು, ಜುಲೈ.18: ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಲೇ ಇದ್ದು, ಗಾಳಿ, ಮಳೆಯ ಆರ್ಭಟಕ್ಕೆ ಮಲೆನಾಡು ತತ್ತರಗೊಂಡಿದೆ. ಭಾರಿ ಗಾಳಿ- ಮಳೆಗೆ ಭೂಮಿ ಕುಸಿತಗೊಂಡಿದೆ.
ಬಾಳೆಹೊನ್ನೂರಿನ ಮೇಲ್ಪಾಲ್ ಗ್ರಾಮದಲ್ಲಿ ಭೂ ಕುಸಿತದಿಂದ ಸುಧಾಕರಗೆ ಸೇರಿದ ಬಾವಿ - ತೋಟಕ್ಕೆ ಹಾನಿಯಾಗಿದೆ. ಸತತ ಮಳೆಯಿಂದ ಕರ್ಕೇಶ್ವರ, ಬಾಳೆಹಿತ್ಲು ಗ್ರಾಮದಲ್ಲಿ ವಿದ್ಯುತ್ ಸ್ಥಗಿತಗೊಂಡಿದೆ.
ಕರ್ನಾಟಕ ಕರಾವಳಿಯಲ್ಲಿ ವರುಣನ ಅಬ್ಬರಕ್ಕಿಲ್ಲ ಬಿಡುವು!
ಬಿಡುವು ಕೊಡದೆ ಸುರಿಯುತ್ತಿರುವ ಮಳೆಗೆ ಕಳೆದ ಆರು ದಿನಗಳಿಂದ ಗ್ರಾಮಸ್ಥರು ವಿದ್ಯುತ್ ಕಾಣದಂತಾಗಿದ್ದು, ಸ್ಥಳೀಯರು ಮೊಬೈಲ್ ಟವರ್ ಜನರೇಟರ್ ಗೆ ಮೋರೆ ಹೋಗಿದ್ದಾರೆ. ಒಬೊಬ್ಬರಾಗಿ ಗ್ರಾಮಸ್ಥರು ತಮ್ಮ ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.
ಶೃಂಗೇರಿ, ಕೊಪ್ಪ, ಕೊಟ್ಟಿಗೆಹಾರ ಬಣಕಲ್, ಬಸ್ರಿಕಟ್ಟೆಯಲ್ಲಿ ಈ ಬಾರಿ ಅಧಿಕ ಮಳೆಯಾಗಿದ್ದು, ನಿನ್ನೆ ಮಂಗಳವಾರ ಕೊಟ್ಟಿಗೆಹಾರದಲ್ಲಿ ಅಧಿಕ ಮಳೆ ಸುರಿದಿದೆ. ಅಷ್ಟೇ ಅಲ್ಲ, ಶೃಂಗೇರಿ, ಕೊಪ್ಪ,ಮೂಡಿಗೆರೆ ತಾಲೂಕಿನ ಗ್ರಾಮಗಳಲ್ಲಿಯೂ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ನಿರಂತರವಾಗಿ ಸುರಿಯುತ್ತಿರೋ ಮಳೆಯಿಂದ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೆ, ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಆರನೇ ಬಾರಿ ಮುಳುಗಿ ದಾಖಲೆ ನಿರ್ಮಿಸಿದೆ. ಇನ್ನು ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ.
ಇದರೊಂದಿಗೆ 30 ವರ್ಷಗಳ ನಂತರ ಹೆಬ್ಬಾಳೆ ಸೇತುವೆ 24 ಗಂಟೆ ಕಾಲ ಮುಳುಗಡೆಯಾಗಿ ಇತಿಹಾಸ ಸೃಷ್ಟಿಸಿದೆ.