ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರೇ ಸೂಪರ್ ಸಿಎಂ
Recommended Video
ಬೆಂಗಳೂರು, ಜೂನ್ 03: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಯಾರಾಗಲಿದ್ದಾರೆ? ಸೂಪರ್ ಸಿಎಂ ಎಂಬ ಕುತೂಹಲ ಇದ್ದೇ ಇದೆ. ಸಮನ್ವಯ ಸಮಿತಿಯ ಚುಕ್ಕಾಣಿ ಹಿಡಿದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸೂಪರ್ ಸಿಎಂ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಂಡು ಬಂದಿದೆ.
ಜೂನ್ 06ರಂದು ಮಧ್ಯಾಹ್ನ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆದಿದೆ. ಜೆಡಿಎಸ್ ಗೆ 12 ಹಾಗೂ ಕಾಂಗ್ರೆಸ್ ಗೆ 22 ಖಾತೆ ಎಂದು ಸದ್ಯಕ್ಕೆ ನಿರ್ಧಾರವಾಗಿದೆ. ಯಾರಿಗೆ ಯಾವ ಖಾತೆ ಸಿಗಲಿದೆ ಎಂಬುದು ಸದ್ಯದಲ್ಲೇ ನಿರ್ಧಾರವಾಗಲಿದೆ.
ಲೋಕಸಭೆ ಚುನಾವಣೆ 2019ಗೆ ಬಿಜೆಪಿ ಸಿದ್ಧತೆ ನಡೆಸಿರುವ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ತೃತೀಯರಂಗ ಮಹಾ ಮೈತ್ರಿಕೂಟ ಕೂಡಾ ಕರ್ನಾಟಕದ ಸರ್ಕಾರದ ಮೂಲಕ ಡೆಲ್ಲಿ ಸಿಂಹಾಸನ ಗಳಿಸುವ ತಂತ್ರಗಾರಿಕೆ ಮಾಡುತ್ತಿದೆ.
* ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಮುಂದಿನ ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಎಲ್ಲವೂ ಸಿದ್ದರಾಮಯ್ಯ ಅವರ ಪ್ರಭಾವದಂತೆ ನಡೆಯಲಿದೆ. ಈ ಸಮಿತಿಯಲ್ಲಿ ಡ್ಯಾನೀಶ್ ಅಲಿ, ಜಿ ಪರಮೇಶ್ವರ ಹಾಗೂ ಸಿಎಂ ಕುಮಾರಸ್ವಾಮಿ ಅವರು ಇದ್ದಾರೆ.
* ಮಂತ್ರಿ ಮಂಡಲ ವಿಸ್ತರಣೆ ಹಾಗೂ ಖಾತೆ ಹಂಚಿಕೆ ವಿಷಯದಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಯಾವುದೇ ರೀತಿಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಎಲ್ಲಾ ಜವಾಬ್ದಾರಿಯನ್ನು ಸಮನ್ವಯ ಸಮಿತಿ ಹೊತ್ತುಕೊಳ್ಳಲಿದೆ.
* ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವ ಯಾವುದೇ ಹೊಸ ಯೋಜನೆ ಬಗ್ಗೆ ನಿರ್ಧಾರ ಕೂಡಾ ಸಮನ್ವಯ ಸಮಿತಿ ತೆಗೆದುಕೊಳ್ಳಲಿದೆ. ರೈತರ ಸಾಲಮನ್ನಾ ಜಾರಿಗೊಂಡರೆ ಸರ್ಕಾರಕ್ಕೆ ಆಗಲಿರುವ 53 ಸಾವಿರ ಕೋಟಿ ರು ಗೂ ಅಧಿಕ ನಷ್ಟವನ್ನು ತುಂಬಿಸುವುದು ಹೇಗೆ? ಹಳೆ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದು, ಹೊಸ ಯೋಜನೆಗಳನ್ನು ಜಾರಿಗೊಳಿಸುವುದು ಎಲ್ಲವೂ ಸಿದ್ದರಾಮಯ್ಯ ಅವರ ನೇತೃತ್ವದ ಸಮಿತಿ ನಿರ್ಧರಿಸಲಿದೆ.