ಕೊರಟಗೆರೆಯಲ್ಲಿ ಬಾಜಿ ಗೆಲ್ಲುತ್ತಾರಾ ಡಾ. ಪರಮೇಶ್ವರ್ ಜಿ?
Recommended Video
ಬೆಂಗಳೂರು, ಏಪ್ರಿಲ್ 12: 'ಕೊರಟಗೆರೆಯಲ್ಲಿ ಜಿ ಪರಮೇಶ್ವರ್ ಸೋಲು...!' 2013 ರ ವಿಧಾನಸಭಾ ಚುನಾವಣೆಯ ಶಾಕಿಂಗ್ ನ್ಯೂಸ್ ಅಂದ್ರೆ ಇದೇ! ಕಾಂಗ್ರೆಸ್ ನ ನಿಷ್ಠಾವಂತ ಸದಸ್ಯರಾಗಿದ್ದರೂ ಮುಖ್ಯಮಂತ್ರಿ ಸ್ಥಾನ ಅವರ ಕೈತಪ್ಪಿ ಹೋಗುವುದಕ್ಕೆ ಇದೇ ಕಾರಣ.
ಕೈ ಐಕಾನ್ ಸಿದ್ದರಾಮಯ್ಯರನ್ನು ಆತಂಕಕ್ಕೆ ದೂಡಿದೆ ಪರಮೇಶ್ವರ್ ಸೋಲು!
ಆದರೆ ಈ ಬಾರಿ ಕೊರಟಗೆರೆಯಲ್ಲೇ ಡಾ.ಪರಮೇಶ್ವರ್ ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತ. ಹಾಗೊಮ್ಮೆ ಕೊರಟಗೆರೆಯಲ್ಲಿ ನಿಂತರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕಳೆದ ಬಾರಿಯಂತೆ ಈ ಬಾರಿಯೂ ಶಾಕ್ ಅನುಭವಿಸುತ್ತಾರಾ..? ಅಥವಾ ಈ ಬಾರಿ ಸುಲಭವಾಗಿ ಗೆಲುವುದು ಸಾಧಿಸುತ್ತಾರಾ..?
'ಸಿದ್ದರಾಮಯ್ಯ, ಪರಮೇಶ್ವರ ನಡುವೆ ಭಿನ್ನಾಭಿಪ್ರಾಯವಿಲ್ಲ'
2013 ರ ಚುನಾವಣೆಯ ನಂತರ ಜೆಡಿಎಸ್ ಮೂಲದವರಾದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸ್ಥಾನ ನೀಡುವುದು ಸರಿಯೇ ಎಂಬ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಆದರೂ ಸಿದ್ದರಾಮಯ್ಯ ಅವರನ್ನು ಬಿಟ್ಟರೆ ಆ ಸ್ಥಾನಕ್ಕೆ ಸೂಕ್ತವೆನ್ನಿಸಿದ್ದ ಪರಮೇಶ್ವರ್ ಮಾತನಾಡಲಾರದಂತೆ ಸುಮ್ಮನೆ ಕೂರುವಂತೆ ಮಾಡಿದ್ದು ಇದೇ ಸೋಲು! ಆದರೆ ಈ ವರ್ಷ ಇದೇ ಸ್ಥಿತಿ ಪರುಕಳಿಸಲಾರದು ಎಂಬುದು ರಾಜಕೀಯ ಪಂಡಿತರ ಅಂಬೋಣ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಪರಮೇಶ್ವರ್ ಗೆ ಮುಖಭಂಗ
2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದಿದ್ದು ಕಾಂಗ್ರೆಸ್ ಗೆ ಲಾಭವಾಗಿತ್ತು. ಕಾಂಗ್ರೆಸ್ ಬಹುಮತ ಪಡೆದು ಗೆಲ್ಲುತ್ತದೆ ಎಂಬ ನಿರೀಕ್ಷೆಯೂ ಇತ್ತು. ಎಲ್ಲ ನಿರೀಕ್ಷೆಗಳೂ ಸತ್ಯವಾಯಿತು. ಆದರೆ ಕೊರಟಗೆರೆಯಲ್ಲಿ ಮಾತ್ರ ಅನೂಹ್ಯ ಫಲಿತಾಂಶ ಹೊರಬಂದಿತ್ತು. ಇಲ್ಲಿ ಪರಮೇಶ್ವರ್ ವಿರುದ್ಧ ಸ್ಪರ್ಧಿಸಿದ್ದ ಜೆಡಿಎಸ್ ನ ಸುಧಾಕರ್ ಲಾಲ್ ಪಿ ಆರ್. 72,229 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಪರಮೇಶ್ವರ್ ಪಡೆದ ಮತಗಳು 54,074. 2008 ರ ಚುನಾವಣೆಯಲ್ಲಿ ಇಲ್ಲಿ ಗೆದ್ದಿದ್ದ ಪರಮೇಶ್ವರ್ 49,276 ಮತ ಗಳಿಸಿದ್ದರು. ಆಗ ಅವರ ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ನ ಚಂದ್ರಯ್ಯ 37,719 ಮತಗಳನ್ನು ಪಡೆದಿದ್ದರು.
ಛೇ..ಛೇ... ಸಿಎಂ, ನನ್ನ ನಡುವೆ ಭಿನ್ನಾಭಿಪ್ರಾಯವಿಲ್ಲ: ಪರಂ
ಸಿದ್ದರಾಮಯ್ಯ ಕೈವಾಡ?
2013 ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ತಮಗೆ ತೀವ್ರ ಪೈಪೋಟಿ ನೀಡುತ್ತಿದ್ದ ಪರಮೇಶ್ವರ್ ಅವರನ್ನು ಸೋಲಿಸುವಲ್ಲಿ ಸಿದ್ದರಾಯ್ಯ ಅವರ ಕೈವಾಡವೂ ಇದೆ ಎಂದು ಅಂತೆ ಕಂತೆ ವದಂತಿಗಳು ಹಬ್ಬಿದ್ದವು. ಸಿದ್ದರಾಮಯ್ಯ ಮತ್ತು ಪರಮೇಶ್ವರ್ ನಡುವಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆ ಎಂಬುದಕ್ಕೆ ಪುಷ್ಠಿ ನೀಡುವಂಥ ಸಾಕಷ್ಟು ಘಟನೆಗಳು ನಡೆದಿದ್ದವು. 2013 ರಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್ ಪರ ಪ್ರಚಾರಕ್ಕೂ ಸಿದ್ದರಾಮಯ್ಯ ಹೋಗದಿದ್ದುದನ್ನೂ ಇಲ್ಲಿ ಸ್ಮರಿಸಬಹುದು. ಆದರೆ ಈ ಬಾರಿ ಹಾಗಿಲ್ಲ. ಸ್ವತಃ ಸಿದ್ದರಾಮಯ್ಯ ಅವರೇ ಕೊರಟಗೆರೆಯಲ್ಲಿ ಪ್ರಚಾರ ಕಾರ್ಯ ನಡೆಸಿದ್ದಾರೆ.
ಸುಲಭವಾಗಿ ಗೆಲ್ಲುತ್ತಾರಾ ಪರಮೇಶ್ವರ್?
2013 ರಲ್ಲಿ ಪರಮೇಶ್ವರ್ ವಿರುದ್ಧ ಬಿಜೆಪಿ ಅತ್ಯಂತ ದುರ್ಬಲ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆಗ ಕೆಜೆಪಿಯೂ ಅಸ್ತಿತ್ವದಲ್ಲಿದ್ದರಿಂದ ಬಿಜೆಪಿ-ಕೆಜೆಪಿ ಮತಗಳು ಒಡೆದಿದ್ದವು. ಆದ್ದರಿಂದ ಸುಧಾಕರ್ ಲಾಲ್ ಮತ್ತು ಪರಮೇಶ್ವರ್ ನಡುವಲ್ಲಿ ನೇರ ಪೈಪೋಟಿ ಏರ್ಪಟ್ಟಿತ್ತು. ಇದು ಪರಮೇಶ್ವರ್ ಅವರ ಸೋಲಿಗೆ ಒಂದು ಕಾರಣವೆನ್ನಿಸಿತ್ತು. ಆದರೆ ಈ ಬಾರಿ ಬಿಜೆಪಿಯೂ ಕೊರಟಗೆರೆಯಿಂದ ಬಲಾಢ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದರಿಂದಾಗಿ ಪರಮೇಶ್ವರ್ ಗೆ ಲಾಭವಾಗಬಹುದು. ಬಿಜೆಪಿಯು ಇಲ್ಲಿ ವೈ ಎಚ್ ಹುಚ್ಚಯ್ಯ ಅಥವಾ ಗಂಗಹನುಮಯ್ಯ ಅವರಿಗೆ ಟಿಕೇಟ್ ನೀಡುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಇಬ್ಬರೂ ಪ್ರಭಾವಿ ಅಭ್ಯರ್ಥಿಗಳೇ ಆಗಿರುವುದರಿಂದ ತೀವ್ರ ಪೈಪೋಟಿ ಏರ್ಪಡಬಹುದು. ಇದರಿಂದಾಗಿ ಜೆಡಿಎಸ್ ಗೆ ಗೆಲುವು ಕಷ್ಟ. ಈ ಲಾಭವನ್ನು ಪರಮೇಶ್ವರ್ ಪಡೆಯಬಹುದು.
ಪರಮೇಶ್ವರ್ ಮೇಲೆ ಅನುಕಂಪದ ಅಲೆ
ಪರಮೇಶ್ವರ್ 2013 ರಲ್ಲಿ ಸಿಎಂ ಪಟ್ಟ ಕಳೆದುಕೊಂಡಿದ್ದರ ಕುರಿತು ಈ ಭಾಗದ ಜನರಲ್ಲಿ ತೀವ್ರ ಬೇಸರವಿದೆ. ಅನುಕಂಪವಿದೆ. ಈ ಸಂದರ್ಭವನ್ನು ಪರಮೇಶ್ವರ್ ಬಳಸಿಕೊಳ್ಳಬಹುದು. ಅಲ್ಲದೆ ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಸಂಭಾವ್ಯರೂ ಆಗಿರುವುದರಿಂದ ತಮ್ಮ ಕ್ಷೇತ್ರದ ಅಭ್ಯರ್ಥಿ ಮುಖ್ಯಮಂತ್ರಿಯಾಗುವುದಾದರೆ ಅವರನ್ನು ಜನರು ಗೆಲ್ಲಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಕೊರಟಗೆರೆಯಲ್ಲಿ 60,000 ಪರಿಶಿಷ್ಠ ಜಾತಿ ಮತ್ತು 20000 ಪರಿಶಿಷ್ಠ ಪಂಗಡದ ಜನರಿದ್ದಾರೆ. 20000 ಲಿಂಗಾಯತ/ವೀರಶೈವ, 30,000 ಒಕ್ಕಲಿಗ, 12,000 ಮುಸ್ಲಿಂ ಮತ್ತು 14000 ಕುರುಬರಿದ್ದಾರೆ.