ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದದ್ದು ತಪ್ಪು: ಆದರೆ..
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಮೊಟ್ಟೆ ಎಸೆದು, ಘೇರಾವ್ ಹಾಕಿದ ವಿದ್ಯಮಾನಕ್ಕೆ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗುತ್ತಿದೆ.
ಕೊಡಗು ಜಿಲ್ಲೆಯ ಗಡಿ ತಿತಿಮತಿಗೆ ಮಳೆಹಾನಿ ಪ್ರದೇಶ ವೀಕ್ಷಣೆಗೆ ಆಗಮಿಸಿದ್ದ ಸಿದ್ದರಾಮಯ್ಯ ಅವರು ಪ್ರತಿಭಟನೆಯ ಕಾವನ್ನು ಎದುರಿಸಿದರು. ಇದಾದ ನಂತರ ಕುಶಾಲ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲೂ ಇದೇ ಪರಿಸ್ಥಿತಿ ಎದುರಾಯಿತು.
Recommended Video
ಕೊಡಗು SP ಕಚೇರಿಗೆ ಆ.26ರಂದು 'ಕೈ' ಮುತ್ತಿಗೆ; ಸಿದ್ದರಾಮಯ್ಯ ಘೋಷಣೆ
ಟಿಪ್ಪು ಜಯಂತಿ ಆಚರಣೆ, ಕೊಡವರು ಗೋಮಾಂಸ ಭಕ್ಷಕರು ಎನ್ನುವ ಹಿಂದಿನ ಸಿದ್ದರಾಮಯ್ಯನವರ ಹೇಳಿಕೆಯೇ ಪ್ರತಿಭಟನಾಕಾರರ ಸಿಟ್ಟಿಗೆ ಕಾರಣವಾದ ಅಂಶ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು ಘಟನೆಯ ಬಗ್ಗೆ ವಿಷಾದ ವ್ಯಕ್ತ ಪಡಿಸಿದ್ದಾರೆ. ಬಿಜೆಪಿಯ ಕೆಲವು ನಾಯಕರು ಘಟನೆಯನ್ನು ವಿರೋಧಿಸಿ, ಆದರೆ.. ಎಂದು ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ.
|
ಬೊಮ್ಮಾಯಿ ಟ್ವೀಟ್ ಮಾಡಿ ಘಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ
"ಮಾನ್ಯ @siddaramaiah ಅವರು, ವಿರೋಧ ಪಕ್ಷದ ನಾಯಕರಾಗಿದ್ದು, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ತನ್ನದೇ ಆದ ಗೌರವ ಇರುತ್ತದೆ. ಯಾವುದೇ ವಿಷಯದ ಬಗ್ಗೆ ಬಿನ್ನಾಭಿಪ್ರಾಯವಿದ್ದರೆ ಅದನ್ನು ಬಲವಾದ ಅಭಿಪ್ರಾಯಗಳೊಂದಿಗೆ ವಿರೋಧಿಸಬೇಕು. ಯಾವುದೇ ದೈಹಿಕ ಕಾರ್ಯದಿಂದಲ್ಲ. ಇದನ್ನು ಎಲ್ಲರೂ ಪಾಲಿಸಬೇಕು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಘಟನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.
ಘಟನೆಯ ಬಗ್ಗೆ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ
ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಘಟನೆಯ ಬಗ್ಗೆ ಮಾತನಾಡಿ, "ಸಿದ್ದರಾಮಯ್ಯ ಸಾಹೇಬ್ರ ಕಾರಿನ ಮೇಲೆ ಮೊಟ್ಟೆ ಎಸೆದ ಘಟನೆಯನ್ನು ನಾನು ಖಂಡಿಸುತ್ತೇನೆ, ಇದು ಸರಿಯಾದ ಪ್ರತಿಭಟನೆಯ ದಾರಿಯಲ್ಲ. ಆದರೆ.. ಕೊಡಗಿನ ಜನರ ಸಿಟ್ಟನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಯಾರೂ ಒತ್ತಾಯಿಸದಿದ್ದರೂ, ಟಿಪ್ಪು ಜಯಂತಿ ಆಚರಿಸಲು ಆರಂಭಿಸಿದರು. ಕೊಡವರ ನರಮೇಧ ಮಾಡಿದ ಟಿಪ್ಪು ಬಗ್ಗೆ ಅಲ್ಲಿನ ಜನರಿಗೆ ಆಕ್ರೋಶವಿದೆ. ಹಾಗಾಗಿ, ಸಿದ್ದರಾಮಯ್ಯನವರು ಅಲ್ಲಿಗೆ ಹೋದಾಗ, ಜನರು ಪ್ರತಿಭಟನೆ ನಡೆಸಿದ್ದಾರೆ"ಎಂದು ಪರೋಕ್ಷವಾಗಿ ಪ್ರತಾಪ್ ಸಿಂಹ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ
ಇನ್ನು ವಿರಾಜಪೇಟೆಯ ಶಾಸಕ ಕೆ.ಜಿ.ಬೋಪಯ್ಯ ಮಾತನಾಡುತ್ತಾ, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಗೆ ಅವಕಾಶವಿದೆ. ಕೊಡಗಿನ ಜನರಿಗೆ ಸಿದ್ದರಾಮಯ್ಯನವರ ಮೇಲೆ ಸಿಟ್ಟಿದೆ, ಅದನ್ನು ವ್ಯಕ್ತ ಪಡಿಸಿದ್ದಾರೆ. ಟಿಪ್ಪು ಜಯಂತಿ, ಕೊಡವರ ಬಗ್ಗೆ ಕೆಟ್ಟದಾಗಿ ಈ ಹಿಂದೆ ಮಾತನಾಡಿದ್ದರು. ಮೊಟ್ಟೆ ಎಸೆದದ್ದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಕಾಂಗ್ರೆಸ್ಸಿನವರೇ ಮೊಟ್ಟೆ ಎಸೆದಿರಬಹುದಲ್ಲವೇ"ಎಂದು ಬೋಪಯ್ಯ ಘಟನೆಯನ್ನು ನೇರವಾಗಿ ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್
ಘಟನೆಯನ್ನು ತಮ್ಮದೇ ಆದ ರೀತಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸಮರ್ಥಿಸಿಕೊಂಡಿದ್ದಾರೆ. "ಬಿಜೆಪಿಯವರು ಮೊಟ್ಟೆ ಎಸೆದರು ಎಂದು ಯಾಕೆ ಹೇಳುತ್ತೀರಾ, ರಾಜ್ಯದ ಜನತೆ ಎಂದು ಹೇಳಿ. ಸಿದ್ದರಾಮಯ್ಯನವರು ಕೆಲವು ದಿನಗಳ ಹಿಂದೆ ಮುಸ್ಲಿಮರ ಏರಿಯಾದಲ್ಲಿ ವೀರ್ ಸಾವರ್ಕರ್ ಫೋಟೋ ಯಾಕೆ ಹಾಕೋಕೆ ಹೋಗ ಬೇಕಾಗಿತ್ತು ಎಂದು ಹೇಳಿದ್ದರು. ಈಗ, ಹಿಂದೂಗಳ ಏರಿಯಾಗೆ ಇವರು ಯಾಕೆ ಹೋದರು ಎಂದು ನಾವು ಕೇಳಬಹುದೇ"ಎಂದು ಜೀವರಾಜ್ ಹೇಳಿದ್ದಾರೆ.