'ಹಿಂದಿ ದಿವಸ್' ಹಿಂದೆ ಎದ್ದ ಅಪಸ್ವರ, ಹೇರಿಕೆ ವಿರುದ್ಧದ ದನಿ
ಬೆಂಗಳೂರು, ಸೆಪ್ಟೆಂಬರ್ 14: ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ 'ಹಿಂದಿ ದಿವಸ್' ಆಚರಣೆ ಮಾಡಲಾಗುತ್ತಿದೆ. ಅದಕ್ಕೆ ಕರ್ನಾಟಕ ಗ್ರಾಹಕರ ಕೂಟ ಸೇರಿದಂತೆ ಹಲವು ಸಂಘಟನೆಗಳು ಹಾಗೂ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಸಂವಿಧಾನದ 343-351 ತಿದ್ದುಪಡಿ ಮಾಡಿ ಎಲ್ಲಾ ಭಾಷೆಗಳಿಗೆ ಸಮಾನ ಸ್ಥಾನ ನೀಡುವುದು, 1949 ರಿಂದ ನಡೆಯುತ್ತಿರುವ ಭಾಷಾ ಅಸಮಾನತೆಗೆ/ದಬ್ಬಾಳಿಗೆ ಇದೊಂದೇ ಪರಿಹಾರ ಎಂದು ಕನ್ನಡ ಗ್ರಾಹಕರ ಕೂಟದ ಅರುಣ್ ಜಾವಗಲ್ ಅವರ ಅಭಿಪ್ರಾಯವಾಗಿದೆ.
'ಹಿಂದಿ ದಿವಸ್' ರದ್ದತಿಗೆ ಆಗ್ರಹಿಸಿ ಬೆಂಗಳೂರಲ್ಲಿ ಹಕ್ಕೊತ್ತಾಯದ ಮೆರವಣಿಗೆ
ಇಂದಿನ ತಂತ್ರಜ್ಞಾನವನ್ನು ಬಳಸಿ, ಹೆಚ್ಚು ಹೆಚ್ಚು ಭಾಷೆಗಳಲ್ಲಿ ಆಡಳಿತ ನಡೆಸೋದು ಸುಲಭವಾಗಿದೆ. ಜನರಿಗೆ ಅವರ ಭಾಷೆಯಲ್ಲಿ ಆಡಳಿತ ನೀಡಿದರೆ ಸರಕಾರದ ಯೋಜನೆಗಳು ತಲುಪಲು ಸುಲಭವಾಗುತ್ತೆ, ಭಾಷಾ ಸಮಾನತೆಯಿಂದ ದೇಶದ ಒಗ್ಗಟ್ಟು ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಿಂದಿ ದಿವಸ್ ವಿರುದ್ಧವಾಗಿ ಕರಾಳ ದಿನವನ್ನಾಗಿ ಆಚರಿಸುತ್ತಿದ್ದು, ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆಯನ್ನೂ ಕೂಡ ಹಮ್ಮಿಕೊಂಡಿದ್ದರು. ಅದರ ಜೊತೆಗೆ ಟ್ವಿಟ್ಟರ್ ಅಭಿಯಾನ ಕೂಡ ನಡೆಸಿದ್ದಾರೆ.
ಕನ್ನಡ ಭಾಷಾ ದಿನ ಯಾವಾಗ ಆಚರಿಸುತ್ತೀರಿ? ಕುಮಾರಸ್ವಾಮಿ ಪ್ರಶ್ನೆ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇತ್ತೀಚೆಗೆ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದರು. ಇದೀಗ ಇಂದು ಮತ್ತೆ ಅಂತಹದ್ದೇ ಆರೋಪವನ್ನು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ವಿರುದ್ಧ ಮಾಡಿದ್ದಾರೆ.
ಇಂದು ದೇಶಾದ್ಯಂತ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿದೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡವೂ ಭಾಗವಾಗಿರುವುದರಿಂದ ಕನ್ನಡ ಭಾಷಾ ದಿನವನ್ನು ದೇಶಾದ್ಯಂತ ಯಾವಾಗ ಆಚರಿಸುತ್ತೀರಿ ಮೋದಿಯವರೇ ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ ಐಬಿಪಿಎಸ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಾಸ್ ತರಲಾಗಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು
ಪ್ರತಿಯೊಂದು ವಿಚಾರಕ್ಕೂ ಹೋರಾಟ ಮಾಡಿಯೇ ಕನ್ನಡಿಗರು ಪಡೆದುಕೊಳ್ಳಬೇಕೇ?
ಪ್ರತಿಯೊಂದು ವಿಚಾರಕ್ಕೂ ಕನ್ನಡಿಗರು ಹೋರಾಟ ನಡೆಸೇ ಪಡೆದುಕೊಳ್ಳಬೇಕೇ? RRB Mainsನಲ್ಲಿ ಕನ್ನಡದಲ್ಲಿ ಪರೀಕ್ಷೆ ಕೊಟ್ರು, ಈಗ Prilims ಗೆ ಹೋರಾಟ ಮಾಡಬೇಕು, ನಾಳೆ NationalisedBank ಪರೀಕ್ಷೆಗೆ ಮಾಡಬೇಕು, ನಾಡಿದ್ದು SSCಪರೀಕ್ಷೆಯನ್ನು ಕನ್ನಡದಲ್ಲಿ ನೀಡಿ ಅಂತ ಹೋರಾಟ ಮಾಡಬೇಕು, ಜೀವನ ಪೂರ್ತಿ ಹೋರಾಟವೇ ಎಂದು ಅರುಣ್ ಜಾವ್ಗಲ್ ಎಂಪಿ ತೇಜಸ್ವಿಸೂರ್ಯ ಅವರನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಒಂದು ದೇಶ, ಒಂದೇ ಭಾಷೆ: ಅಮಿತ್ ಶಾ ವಿವಾದ
ಒಂದು ದೇಶ, ಒಂದೇ ಭಾಷೆ ಎಂದು ವಿವಾದ ಸೃಷ್ಟಿಸಿದ ಅಮಿತ್ ಶಾ
ಅಮಿತ್ ಶಾ ಅವರು ಹಿಂದಿ ದಿವಸ್ ಕುರಿತು ಟ್ವೀಟ್ ಮಾಡಿದ್ದು, ವಿಧತೆಯಲ್ಲಿ ಏಕತೆಯ ಹೆಮ್ಮೆ ಹೊಂದಿರುವ ಭಾರತದ ಬಹುತ್ವ ಸಂಸ್ಕೃತಿಗೆ ಧಕ್ಕೆ ತರುವಂತೆ ಅಮಿತ್ ಶಾ ಅವರು ಒಂದು ದೇಶ, ಒಂದೇ ಭಾಷೆಯ ಬಗ್ಗೆ ಒಲವು ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಹಿಂದಿ ದಿವಸ. ನಮ್ಮ ಮಾತೃಭಾಷೆಯ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಬಾಪು ಹಾಗೂ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಕನಸನ್ನು ನನಸಾಗಿಸಲು ಹಿಂದಿಯನ್ನು ಒಂದೇ ಭಾಷೆಯನ್ನು ಬಳಸಬೇಕು' ಎಂದು ಅಮಿತ್ ಶಾ ಹೇಳಿದ್ದಾರೆ.
ಹಿಂದಿ ಹೇರಿಕೆ ವಿರೋಧದ ಧ್ವನಿ
ನಮ್ಮ ದೇಶವನ್ನು ಭಾಷಾವಾರು ವಿಂಗಡಣೆ ಮಾಡಲಾಗಿದೆ. ಪ್ರತಿಯೊಂದು ರಾಜ್ಯಕ್ಕೂ ಅದರದ್ದೇ ಆದ ಭಾಷೆ ಇದೆ. ಹೀಗಿರುವಾಗ ಇನ್ನೊಂದು ಭಾಷೆಯನ್ನು ಹೇರುವುದು ಸರಿಯಲ್ಲ ಎಂಬುದೇ ಹಿಂದಿ ಹೇರಿಕೆ ವಿರುದ್ಧ ಎದ್ದಿರುವ ಧ್ವನಿಯಾಗಿದೆ. ಸಂವಿಧಾನದ ವಿಧಿ 343-351ರ ವರೆಗಿನ ವಿಧಿಗಳು ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನವನ್ನು ನೀಡಿದೆ. ಇದರಿಂದಾಗಿ ಕರ್ನಾಟಕ/ಕನ್ನಡಕ್ಕೆ ಬೇಕಾಗಿರುವ ಫಂಡ್ ಸಿಗುವುದಿಲ್ಲ ಎಂಬುದು ವಾದವಾಗಿದೆ.