ಯಡಿಯೂರಪ್ಪನವರೇ ನೀವು ನನಗಿಂತ ಜ್ಯೂನಿಯರ್, ನನ್ನನ್ನು ಹೆದರಿಸಬೇಡಿ
ಬೆಂಗಳೂರು, ನ 18: ಡಿಸೆಂಬರ್ 5ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ಪೂರ್ವಭಾವಿಯಾಗಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ಮುಖಂಡರು ಗರಂ ಆಗಿದ್ದಾರೆ.
"ವಿಧಾನಸಭೆಯಲ್ಲಿ ನೀವು (ಯಡಿಯೂರಪ್ಪ) ನನಗಿಂತ ಜ್ಯೂನಿಯರ್, ನನ್ನನ್ನು ಬೆದರಿಸುವ ಕೆಲಸವನ್ನು ಮಾಡಬೇಡಿ. ಯಾರು ಏನೇ ಕಠಿಣ ಕ್ರಮ ತೆಗೆದುಕೊಳ್ಳಲಿ, ನಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ"ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಖಂಡಿಸಿ ಕರ್ನಾಟಕ ಬಂದ್ ಕರೆ
"ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರೂ, ಮರಾಠಾ ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಮುಂದಾಗಿದ್ದೇ ಆದಲ್ಲಿ, ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ"ಎನ್ನುವ ಎಚ್ಚರಿಕೆಯನ್ನು ವಾಟಾಳ್ ನೀಡಿದ್ದಾರೆ.
"ಡಿಸೆಂಬರ್ ಐದರ ಕರ್ನಾಟಕ ಬಂದ್ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ. ಕರ್ನಾಟಕದ ಜನ ನಿಮ್ಮ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ಅದೇನು ಕ್ರಮ ತೆಗೆದುಕೊಳ್ಳುತ್ತೀರಾ ಯಡಿಯೂರಪ್ಪನವರೇ"ಎಂದು ವಾಟಾಳ್, ಸರಕಾರಕ್ಕೆ ಸವಾಲು ಎಸೆದಿದ್ದಾರೆ.
"ಕರ್ನಾಟಕದಲ್ಲಿ ವಿರೋಧ ಪಕ್ಷ ಎನ್ನುವುದೇ ಇಲ್ಲ. ಮರಾಠಿಗರನ್ನು ಎದುರು ಹಾಕಿಕೊಂಡರೆ, ವೋಟ್ ಸಿಗುವುದಿಲ್ಲ ಎನ್ನುವ ಭಯ ಕಾಂಗ್ರೆಸ್ ನವರಿಗೆ"ಎಂದು ವಾಟಾಳ್ ನಾಗರಾಜ್, ಕಾಂಗ್ರೆಸ್ ಪಕ್ಷವನ್ನೂ ಟೀಕಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಎದುರಾಗುವ ಸಾಧ್ಯತೆ ಇರುವುದರಿಂದ, ಮರಾಠಾ ಪ್ರಾಧಿಕಾರ ರಚಿಸಲು ಯಡಿಯೂರಪ್ಪ ಸರಕಾರ ಮುಂದಾಗಿದೆ ಎಂದು ಕನ್ನಡಪರ ಸಂಘಟನೆಗಳು ಆರೋಪಿಸಿವೆ.