ಯಡಿಯೂರಪ್ಪನವರ ಎರಡು ಹೇಳಿಕೆಗೆ ಥಂಡಾ ಬಡಿದು ಕುಂತ ಬಿಜೆಪಿ ಮುಖಂಡರು
"ರಾಜಕೀಯ ಸಂಧ್ಯಾ ಜೀವನದಲ್ಲಿರುವ ಯಡಿಯೂರಪ್ಪನವರು, ತಮಗೆ ಈಗ ಸಿಕ್ಕ ಮುಖ್ಯಮಂತ್ರಿ ಹುದ್ದೆಯನ್ನು, ರೈತರ ಮತ್ತು ಬಡವರ ಶ್ರೇಯೋಭಿವೃದ್ದಿಗಾಗಿ ಬಳಸಿಕೊಂಡು, ಜನ ಮೆಚ್ಚುವ ಆಡಳಿತವನ್ನು ನೀಡಲಿ" ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಿಂದೆ ಹೇಳಿದ್ದರು.
ಜುಲೈ 26, 2019ರಿಂದ ನಾಲ್ಕನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೇರಿದ ದಿನದಿಂದ ಇಂದಿನವರೆಗೆ, ಸಿಎಂ ಹುದ್ದೆ ಯಡಿಯೂರಪ್ಪನವರಿಗೆ ತಂತಿಯ ಮೇಲಿನ ನಡಿಗೆಯಾಗಿದೆ ಎಂದೇ ವ್ಯಾಖ್ಯಾನಿಸಬಹುದು. ರಾಜ್ಯ ಕಂಡು ಕೇಳರಿಯದ ನೆರೆ ಪ್ರವಾಹದಿಂದ ಹಿಡಿದು, ಈಗಿನ ಕೊರೊನಾ ಹಾವಳಿಯ ವರೆಗೆ, ಒಂದೊಂದು ವಿದ್ಯಮಾನವೂ ಬಿಎಸ್ವೈಗೆ ಅಗ್ನಿಪರೀಕ್ಷೆಯೇ ಆಗಿತ್ತು.
ಸಿಎಂ ಯಡಿಯೂರಪ್ಪ ಅವರು ಸತ್ಯದ ಪರ ನಿಂತಿದ್ದಾರೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
ಪ್ರಾಕೃತಿಕ ವಿಕೋಪದ ನಡುವೆ, ದೆಹಲಿ ಬಾಸ್ ಗಳ ಅಸಹಕಾರದಿಂದಾಗಿ, ಸಿಎಂ ಕಚೇರಿಯಿಂದ ಒಂದು ಫೈಲೂ ಮುಂದಕ್ಕೆ ಹೋಗುತ್ತಿಲ್ಲ ಎನ್ನುವ ಮಾತಿನ ನಡುವೆಯೂ, ಯಡಿಯೂರಪ್ಪ, ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಬಂದಿದ್ದರು. ಬರಬರುತ್ತಾ, ವರಿಷ್ಠರಿಗೂ ಯಡಿಯೂರಪ್ಪನವರ ಮಹತ್ವದ ಅರಿವಾಗಲಾರಂಭಿಸಿತು.
'ಕೊರೊನಾ ಮಾನವ ನಿರ್ಮಿತವಲ್ಲ': ಪುರಾವೆ ಇಲ್ಲದ ಆರೋಪ ಇದು
ಉತ್ತರ ಕರ್ನಾಟಕ ಪ್ರವಾಹ ಮತ್ತು ಕೊರೊನಾ ವಿಚಾರದಲ್ಲಿ, ತಮ್ಮ ರಾಜಕೀಯ ಅನುಭವವನ್ನೆಲ್ಲಾ ಧಾರೆ ಎರೆದು, ಬಿಎಸ್ವೈ ಸರಕಾರ ಮುನ್ನಡೆಸಿಕೊಂಡು ಹೋಗುತ್ತಿರುವ ಶೈಲಿಗೆ ವಿರೋಧಿಗಳು ಭೇಷ್ ಅಂದಿದ್ದರು, ಅನ್ನುತ್ತಿದ್ದಾರೆ ಕೂಡಾ. ಕೊರೊನಾ ಹಾವಳಿಯಿಂದ ಆರಂಭವಾಗಿ ಇದುವರೆಗೆ, ಯಡಿಯೂರಪ್ಪ ನೀಡಿದ ಎರಡು ಹೇಳಿಕೆ, ಸ್ವಪಕ್ಷೀಯರನ್ನೇ ಗಪ್ ಚುಪ್ ಗೊಳಿಸಿದೆ.
ದೆಹಲಿಯ ತಬ್ಲಿಘಿ ವಿದ್ಯಮಾನ ದೇಶವನ್ನೇ ಬೆಚ್ಚಿಬೀಳಿಸಿತು
ಕೊರೊನಾ ದೇಶವನ್ನೆಲ್ಲಾ ಆವರಿಸಿಕೊಂಡ ನಂತರ, ಎಲ್ಲಡೆ ಲಾಕ್ ಡೌನ್ ಆಗಿತ್ತು. ಆಗ, ದೆಹಲಿಯ ತಬ್ಲಿಘಿ ವಿದ್ಯಮಾನ ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಆ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಾಪಸ್ ಹೋದವರು, ದೇಶದೆಲ್ಲಡೆ ಸಂಚಾರ ಮಾಡಿದ್ದರಿಂದ, ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಆರಂಭವಾಯಿತು. ಈ ವಿಚಾರವನ್ನು ಇಟ್ಟುಕೊಂಡು, ಬಿಜೆಪಿ ಮುಖಂಡರಿಂದ ಆದಿಯಾಗಿ, ಮುಸ್ಲಿಮರ ವಿರುದ್ದ ಭಾರೀ ವಿರೋಧ ವ್ಯಕ್ತವಾಗಲು ಆರಂಭವಾಯಿತು.
ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಹೇಳಿಕೆ
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಹೇಳಿಕೆ, ಬಿಜೆಪಿ ಮತ್ತು ಸಂಘ ಪರಿವಾರದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತು. ವಿಷಯಕ್ಕೆ ಇನ್ನಷ್ಟು ತುಪ್ಪ ಸುರಿಯೋಣ ಎಂದು ಕಾದಿದ್ದವರಿಗೆ ಭಾರೀ ನಿರಾಶೆ ಎದುರಾಯಿತು. "ಯಾರೋ ಕೆಲವರು ಮಾಡಿದ ದುಷ್ಕೃತ್ಯಕ್ಕೆ ಇಡೀ ಸಮುದಾಯವನ್ನು ಬ್ಲೇಮ್ ಮಾಡಬೇಡಿ. ಕೊರೊನಾ ಸೋಂಕಿಗೆ ಯಾವುದೇ ಜಾತಿಧರ್ಮವಿಲ್ಲ. ಈ ವಿಚಾರದಲ್ಲಿ ಅನಗತ್ಯ ಗೊಂದಲ ಉಂಟು ಮಾಡಿದರೆ, ಕ್ರಮ ತೆಗೆದುಕೊಳ್ಳುವುದಾಗಿ " ಬಿಎಸ್ವೈ ನೀಡಿದ ಹೇಳಿಕೆ, ವಿರೋಧ ಪಕ್ಷವನ್ನೇ ಹುಬ್ಬೇರಿಸುವಂತೆ ಮಾಡಿತು.
ದೇವೇಗೌಡರ ಕುಟುಂಬದ ಮದುವೆ
ಇದಾದ ನಂತರ ಮೊನ್ನೆ ನಡೆದ ದೇವೇಗೌಡರ ಕುಟುಂಬದ ಮದುವೆ. ಮಹೂರ್ತ, ಗಳಿಗೆಯನ್ನು ಬಹುವಾಗಿ ನಂಬುವ ಗೌಡ್ರ ಕುಟುಂಬ, ನಿಗದಿಯಾದ ದಿನದಲ್ಲೇ ನಿಖಿಲ್ ಕುಮಾರಸ್ವಾಮಿಯ ಮದುವೆಯನ್ನು ನೆರವೇರಿಸಿತು. ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಮದುವೆ ಕಾರ್ಯಕ್ರಮ, ಕೊರೊನಾ ಗ್ರೀನ್ ಝೋನ್ ಜಿಲ್ಲೆ ರಾಮನಗರದಲ್ಲಿ ನಡೆಯಿತು. ಡಿಸಿಎಂ ಅಶ್ವಥ್ ನಾರಾಯಣ, ಲಾಕ್ ಡೌನ್ ಉಲ್ಲಂಘನೆ ಮಾಡಿದ್ದಕ್ಕಾಗಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದರು.
ಸರಳವಾಗಿ ಮದುವೆ ನಡೆಸಿದ ಗೌಡ್ರ ಕುಟುಂಬಕ್ಕೆ ಅಭಿನಂದನೆ
ಈ ವಿಚಾರದಲ್ಲೂ ಯಡಿಯೂರಪ್ಪ ನೀಡಿದ ಹೇಳಿಕೆ ಬಿಜೆಪಿಯವರನ್ನು ಬೇಸ್ತು ಬೀಳಿಸಿತು. "ಮದುವೆ ನಡೆಸುವುದಕ್ಕೆ ಗೌಡ್ರ ಕುಟುಂಬ ಜಿಲ್ಲಾಡಳಿತದ ಅನುಮತಿಯನ್ನು ಪಡೆದಿತ್ತು. ಗೌಡ್ರದ್ದು ದೊಡ್ಡ ಕುಟುಂಬ, ಲಾಕ್ ಡೌನ್ ನಿಯಮದಂತೆ ಸರಳವಾಗಿ ಮದುವೆ ನಡೆಸಿದ ಗೌಡ್ರ ಕುಟುಂಬಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಬಿಎಸ್ವೈ ನೀಡಿದ ಹೇಳಿಕೆ, ಬಿಜೆಪಿಯವರನ್ನು ಸುಮ್ಮನಾಗಿಸಿತು.