ಗುರು ಡಿಕೆಶಿ ಮಾತಿಗೆ ಗಪ್ ಚುಪ್ ಎನ್ನದೇ ಕಣದಿಂದ ಹಿಂದೆ ಸರಿದ ಯುವ ಘಟಕ ಅಧ್ಯಕ್ಷ ಸ್ಥಾನದ ಅಭ್ಯರ್ಥಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಅಥವಾ ರಾಜಕೀಯವಾಗಿ ಅವರ ನೆರಳಿನಿಂದ ಮೇಲೆ ಬಂದವರು, ಅವರ ಮಾತಿಗೆ ತುಟಿ ಪಿಟಿಕ್ ಅನ್ನದೇ ಓಕೆ ಎನ್ನುವ ಮುಖಂಡರ ಉದಾಹರಣೆ ಬಹಳಷ್ಟಿದೆ. ಆ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಡಿಕೆಶಿಯವರು ಕೆಪಿಸಿಸಿ ಘಟಕದ ಬಾಸ್ ಆದ ಮೇಲೆ ಪಕ್ಷದ ಸಂಘಟನೆಯ ವಿಚಾರದಲ್ಲಿ ಹಲವು ಬದಲಾವಣೆಯನ್ನು ತರಲು ಮುಂದಾಗಿರುವುದು ಗೊತ್ತಿರುವ ವಿಚಾರ. ಹಲವು ಘಟಕಗಳನ್ನು ಈಗಾಗಲೇ ವಿಸರ್ಜಿಸಿರುವ ಡಿಕೆಶಿ, ಮಹತ್ವದ ಹೆಜ್ಜೆಯನ್ನೂ ಇಡುತ್ತಿದ್ದಾರೆ.
ಕೇಂದ್ರ ತನಿಖಾ ದಳದ ವಿಚಾರಣೆಯ ಹಿನ್ನಡೆ ಇಲ್ಲದೇ ಇದ್ದ ಪಕ್ಷದಲ್ಲಿ ಕೆಪಿಸಿಸಿಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ಡಿಕೆಶಿ ಮುಂದಾಗಿದ್ದರು. ಇದರ ಜೊತೆಗೆ, ಪಕ್ಷದಲ್ಲಿ ಇದೆ ಎನ್ನಲಾಗುತ್ತಿರುವ ಬಣ ರಾಜಕೀಯದಿಂದಾಗಿ ಡಿಕೆಶಿ ತಾವು ಬಯಸಿದ ರೀತಿಯಲ್ಲಿ ಪಕ್ಷ ಸಂಘಟನೆಯನ್ನು ಮಾಡಲಾಗುತ್ತಿಲ್ಲ.
ಅದ್ಯಾಕೋ, ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಈ ಬಾರಿ ಇನ್ನಿಲ್ಲದ ಪೈಪೋಟಿ ಏರ್ಪಟಿತ್ತು. ಸುಮಾರು ಆರುವರೆ ಲಕ್ಷ ಮತದಾರರು ಮುಂದಿನ ಯುವ ಘಟಕದ ಅಧ್ಯಕ್ಷರು ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ. ಆ ಸ್ಪರ್ಧೆಯ ಕಣದಲ್ಲಿ ಡಿಕೆಶಿಯವರ ಶಿಷ್ಯರೂ ಒಬ್ಬ. ಆದರೆ, ಅವರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ..
ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನ
ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಗಿತ್ತು. ಮೂರು ಹಂತದಲ್ಲಿ ಈ ಚುನಾವಣೆ ನಡೆಯುವ ಮೊದಲ ಎರಡು ಭಾಗ ಈಗಾಗಲೇ ಮುಗಿದಿದೆ. ಕೊನೆಯ ಹಂತದ ಚುನಾವಣೆ, ಮಂಗಳವಾರ (ಜ 12) ನಡೆಯಲಿದೆ. ಎರಡು ಮತ್ತು ಮೂರನೇ ಹಂತದ ಚುನಾವಣೆ ಮೊಬೈಲ್ ಆಪ್ ಮೂಲಕ ನಡೆಯುತ್ತದೆ. ಆದರೆ , ಈ ಆಪ್ ಹ್ಯಾಕ್ ಆಗಿರುವುದು ಮತ್ತು ಡಿಕೆಶಿಯ ಶಿಷ್ಯ ಕಣದಿಂದ ಹಿಂದಕ್ಕೆ ಸರಿದಿರುವುದರಿಂದ, ಪಕ್ಷದಲ್ಲಿ ಹಲವು ಗೊಂದಲಕ್ಕೆ ಕಾರಣವಾಗಿದೆ.
ಕರಾವಳಿಯಲ್ಲಿ ಡಿಕೆಶಿಯ ಹುಡುಗ ಎಂದೇ ಕರೆಯಲ್ಪಡುವ ಮಿಥುನ್ ರೈ
ಕರಾವಳಿಯಲ್ಲಿ ಡಿಕೆಶಿಯ ಹುಡುಗ ಎಂದೇ ಕರೆಯಲ್ಪಡುವ ಮತ್ತು ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣಕನ್ನಡದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈ, ಕೊನೆಯ ಕ್ಷಣದಲ್ಲಿ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ಡಿಕೆಶಿ ಸೂಚನೆಯ ಹಿನ್ನಲೆಯಲ್ಲಿ ಮಿಥುನ್ ರೈ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕಣದಲ್ಲಿದ್ದ ಪ್ರಬಲ ಸ್ಪರ್ಧಿಗಳಲ್ಲಿ ರೈ ಮಂಚೂಣಿಯಲ್ಲಿದ್ದರು. ಆದರೆ, ನಡೆದಿದ್ದೇ ಬೇರೆ..
ಡಿಕೆಶಿ ಪ್ರತಿಕ್ರಿಯೆ
"ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಸ್ಥಾನ ಎನ್ನುವುದು ಬಹಳ ಮುಖ್ಯ. ಅವರನ್ನು ನಾವು ಕೇವಲ ಹೋರಾಟಕ್ಕೆ ಮೀಸಲು ಇಡಲು ಸಾಧ್ಯವಿಲ್ಲ. ಅವರೇ ಮುಂದಿನ ದಿನಗಳಲ್ಲಿ ಪಕ್ಷವನ್ನು ಮುನ್ನಡೆಸಬೇಕಾದವರು. ಆ ಹುಡುಗ (ಮಿಥುನ್ ರೈ) ನನ್ನ ಆಪ್ತ, ನನ್ನ ಹೆಸರನಿಂದ ನನ್ನದೇ ಪಕ್ಷದ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಆತನಿಗೆ ಜವಾಬ್ದಾರಿ ಹೆಚ್ಚಿದೆ, ಕಣದಿಂದ ಹಿಂದೆ ಸರಿ ಎಂದು ಹೇಳಿದ್ದೆ, ಮಾತಿಗೆ ಬೆಲೆಕೊಟ್ಟಿದ್ದಾನೆ"ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದಾರೆ. ಆದರೂ, ಮಿಥುನ್ ರೈ ಅವರ ಫೇಸ್ ಬುಕ್ ಪೋಸ್ಟ್ ಬೇರೆಯದನ್ನೇ ಹೇಳುತ್ತದೆ..
ಈ ಮಟ್ಟಿಗೆ ಬೆಳೆಯಲು ಕಾರಣ ಕೆಪಿಸಿಸಿ ಅಧ್ಯಕ್ಷರ ಜೊತೆಗಿನ ಒಡನಾಟ ಕಾರಣ
"ನಾನು ಇಂದು ಈ ಮಟ್ಟಿಗೆ ಬೆಳೆಯಲು ಕಾರಣ ಕೆಪಿಸಿಸಿ ಅಧ್ಯಕ್ಷರ ಜೊತೆಗಿನ ಒಡನಾಟ. ಯುವ ಘಟಕದ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರೆ ಅದನ್ನು ಸ್ವಾಗತಿಸುತ್ತಿದ್ದೆ. ಆದರೆ, ಹಾಗಾಗಲಿಲ್ಲ.. ನಮ್ಮ ಅಧ್ಯಕ್ಷರ (ಡಿಕೆಶಿ) ಮೇಲೆ ಆರೋಪ ಹೊರಿಸಲಾಗುತ್ತಿದೆ. ಹಾಗಾಗಿ, ಕಣದಿಂದ ಹಿಂದಕ್ಕೆ ಸರಿಯುವ ನಿರ್ಧಾರಕ್ಕೆ ಬಂದಿದ್ದೇನೆ" ಎಂದು ಮಿಥುನ್ ರೈ ಹೇಳುವ ಮೂಲಕ, ಕರ್ನಾಟಕ ಕಾಂಗ್ರೆಸ್ಸಿನಲ್ಲಿನ ಬಣ ರಾಜಕೀಯದ ಇನ್ನೊಂದು ಮಜಲನ್ನು ರೈ ತೆರೆದಿಟ್ಟಿದ್ದಾರೆ.