ದಿಢೀರ್ ದೆಹಲಿಗೆ ತೆರಳಿದ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಶಾಸಕ ರೇಣುಕಾಚಾರ್ಯ!
ಬೆಂಗಳೂರು, ಜು. 20: ಮಹತ್ವದ ಬೆಳವಣಿಗೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಯಡಿಯೂರಪ್ಪ ಅವರ ಆಪ್ತ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ದೆಹಲಿಗೆ ತೆರಳಿದ್ದಾರೆ. ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದು, ಅದಕ್ಕೂ ಮೊದಲು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ದಿಢೀರ್ ಎಂದು ಏಕಾಂಗಿಯಾಗಿಯೇ ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ, "ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬೇಡ. ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬದಲಾವಣೆಗೆ ಮುಂದಾದರೆ, ವೀರಶೈವ ಲಿಂಗಾಯತ ಸಮುದಾಯದ ಅವಕೃಪೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿ ಡಿಸೆಂಬರ್ವರೆಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಮಯವಕಾಶ ಕೊಡಿ" ಎಂದು ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಲಾಗುತ್ತಿದೆ ಎಂಬ ಸುದ್ದಿ ಖಚಿತಗೊಳ್ಳುತ್ತಿದ್ದಂತೆಯೆ ಪಕ್ಷಾತೀತವಾಗಿ ವೀರಶೈವ ಲಿಂಗಾಯತ ಸಮುದಾಯದ ಸಮುದಾಯದ ನಾಯಕರು ಹಾಗೂ ಮಠಾಧೀಶರು ಅವರ ಯಡಿಯೂರಪ್ಪ ಅವರ ನಿಂತಿದ್ದಾರೆ. ಈ ಸಂದರ್ಭದಲ್ಲಿ ಬದಲಾವಣೆ ಮಾಡುವ ಬದಲು ಡಿಸೆಂಬರ್ವರೆಗೆ ಅವರಿಗೆ ಸಮಯ ಕೊಡಬೇಕು ಎಂದು ಮನವಿ ಮಾಡಲು ತೆರಳಿದ್ದಾರೆ ಎನ್ನಲಾಗಿದೆ.
ಇದೇ ಜುಲೈ 26ಕ್ಕೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು 2 ವರ್ಷ ತುಂಬುತ್ತದೆ. ಅಂದೆ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರು ಕೆಳಗಿಳಿಯುತ್ತಾರೆ ಎಂಬ ಮಾತುಗಳು ಜೋರಾಗಿ ಚರ್ಚೆ ಆಗುತ್ತಿವೆ. ಹೀಗಾಗಿ ಕೆಲ ತಿಂಗಳುಗಳ ಕಾಲ ಯಡಿಯೂರಪ್ಪ ಅವರಿಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ರೇಣುಕಾಚಾರ್ಯ ಅವರು ಮನವಿಮಾಡಿಲಿದ್ದಾರೆ ಎಂದು ತಿಳಿದು ಬಂದಿದೆ.
ವಿವಿಧ ಮಠಾಧೀಶರು ಹಾಗೂ ವಿರೋಧ ಪಕ್ಷಗಳಲ್ಲಿನ ಲಿಂಗಾಯತ ಸಮುದಾಯದ ನಾಯಕರೂ ಕೂಡ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂದು ಬಹಿರಂಗವಾಗಿ ಒತ್ತಾಯಿಸಿದ್ದಾರೆ. ಈ ಮಾಹಿತಿಯನ್ನೂ ಹೈಕಮಾಂಡ್ ಗಮನಕ್ಕೆ ತರಲು ಶಾಸಕ ರೇಣುಕಾಚಾರ್ಯ ಅವರು ಪ್ರಯತ್ನ ನಡೆಸಲಿದ್ದಾರೆ.