ಹೀಗೆ ಬೆಳೆಸಬೇಕು ನೋಡಿ ಮಕ್ಕಳನ್ನಾ.. ಹ್ಯಾರೀಸ್ ಬೆನ್ನುತಟ್ಟಿದ್ದ ಪ್ರಕಾಶ್ ರೈ
Recommended Video
ಬೆಂಗಳೂರು ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ, ಕೇರಳ ಮೂಲದ ಎನ್ ಎ ಹ್ಯಾರೀಸ್ ಪುತ್ರ, ಬೆಂಗಳೂರು ನಗರ ಕಾಂಗ್ರೆಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ನಲಪಾಡ್ ನ ಗೂಂಡಾಗಿರಿ ಮತ್ತು ಪುಂಡಾಟಿಕೆ ಇಂದು ನಿನ್ನೆಯದಲ್ಲ. ಶಾಸಕನ ಪುತ್ರ ಎಂದೋ ಏನೋ, ಹೆಡೆಮುರಿ ಕಟ್ಟಬೇಕಾಗಿದ್ದ ಪೊಲೀಸರು ಸೈಲೆಂಟ್ ಆಗಿದ್ದರು ಎನ್ನುವ ಆಪಾದನೆಯಿತ್ತು.
ನಲಪ್ಪಾಡ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕಾಗಿ ಯುಬಿಸಿಟಿಯ ಫರ್ಜ್ ಕೆಫೆಯಲ್ಲಿ ವಿದ್ವತ್ ಎನ್ನುವ ಯುವಕನ ಮೇಲೆ ಪ್ರಜ್ಞೆ ತಪ್ಪುವಂತೆ ಹಲ್ಲೆ ನಡೆಸಿ ನಾಪತ್ತೆಯಾಗಿದ್ದಾರೆ, ಅದರಲ್ಲಿ ಕೆಲವರನ್ನು ಭಾನುವಾರ (ಫೆ 18) ಪೊಲೀಸರು ಬಂಧಿಸಿದ್ದಾರೆ. ಕೆಪಿಸಿಸಿ ಈತನನ್ನು ಪಕ್ಷದಿಂದ ಉಚ್ಚಾಟಿಸಿದೆ, ಗೃಹಸಚಿವರು ಖಡಕ್ ವಾರ್ನಿಂಗ್ ನೀಡಿದ್ದಾಗಿದೆ.
ನಲಪಾಡ್ ಗ್ಯಾಂಗ್ ದಾಳಿ ಕೇಸ್: ಇನ್ಸ್ ಪೆಕ್ಟರ್ ವಿಜಯ್ ಅಮಾನತು
ಖ್ಯಾತ ಚಿತ್ರನಟ ಪ್ರಕಾಶ್ ರೈ, ಜನವರಿ ತಿಂಗಳಲ್ಲಿ ಶಾಂತಿನಗರ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹ್ಯಾರೀಸ್ ಮತ್ತು ಆತನ ಪುತ್ರನನ್ನು ಫುಲ್ ಹೊಗಳಿದ್ದರು. "ಎಲ್ಲಾ ಅಪ್ಪಂದಿರು ಹ್ಯಾರೀಸ್ ನಂತೆ ಮಕ್ಕಳನ್ನು ಬೆಳೆಸಬೇಕೆಂದು" ಕಾರ್ಯಕ್ರಮದಲ್ಲಿ ಹೇಳಿದ್ದರು.
ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿರುವ ಬಗ್ಗೆ ಸಾಮಾಜಿಕ ತಾಣದಲ್ಲಿ ಸದ್ಯ ಭಾರೀ ಚರ್ಚೆ ನಡೆಯುತ್ತಿದೆ. 'ಅಪರಾಧಿಗಳು ಯಾರೇ ಆಗಿದ್ದರೂ ಅವರಿಗೆ ಕಾನೂನಿನ ಅನ್ವಯ ಶಿಕ್ಷೆಯಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ ಕೂಡಾ.
ಹ್ಯಾರೀಸ್ ಪುತ್ರನಿಂದ ಹಲ್ಲೆ : ಯಾರು, ಏನು ಹೇಳಿದರು?
ಕ್ಷಮೆಯಾಚಿಸಿದ ರೈ: ಹ್ಯಾರೀಸ್ ಮತ್ತು ಅವರ ಪುತ್ರನನ್ನು ಹಾಡಿ ಹೊಗಳಿದ್ದ ಪ್ರಕಾಶ್ ರೈ, ಯಾರೇ ಆದರೂ ಈ ರೀತಿಯ ಕೃತ್ಯ ಎಸಗಿದರೆ ಅದನ್ನು ಸಮಾಜ ಒಪ್ಪುವುದಿಲ್ಲ. ಹ್ಯಾರೀಸ್ ಪುತ್ರನನ್ನು ಹೊಗಳಿದ್ದಕ್ಕೆ ಕ್ಷಮೆಯಾಚಿಸುತ್ತೇನೆ. ನನ್ನ ಫೌಂಡೇಶನ್ ಗೆ ಕೊಟ್ಟಿರುವ ದೇಣಿಗೆ ವಾಪಸ್ ಕೊಡುತ್ತೇನೆಂದು ಪ್ರಕಾಶ್ ರೈ ಹೇಳಿದ್ದಾರೆ.
ನಲಪ್ಪಾಡ್ ನ ಗೂಂಡಾಗಿರಿಯ ಬಗ್ಗೆ ಪ್ರಕಾಶ್ ರೈ ಅವರಿಗೆ ಗೊತ್ತಿಲ್ಲದಿರಬಹುದು ಆದರೆ, ಕಾರ್ಯಕ್ರಮಕ್ಕೆ ಬರುವ ಮುನ್ನ ಕೊಂಚ ಹೋಂವರ್ಕ್ ಮಾಡಿಕೊಂಡು ಬಂದಿದ್ದರೆ, ತನ್ನ ಹೇಳಿಕೆಯಿಂದ ತನಗೇ ಮುಜುಗರವಾಗುವುದನ್ನು ತಪ್ಪಿಸಿಕೊಳ್ಳಬಹುದಿತ್ತು. ಮುಂದೆ ಓದಿ..
ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಮನುಷ್ಯರಿಗೆ ನನ್ನ ನಮಸ್ಕಾರ
ವೇದಿಕೆಯ ಮೇಲಿರುವ ಮತ್ತು ನನ್ನ ಮುಂದಿರುವ ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಮನುಷ್ಯರಿಗೆ ನನ್ನ ನಮಸ್ಕಾರ ಎಂದು ಮಾತು ಆರಂಭಿಸಿದ್ದ ಪ್ರಕಾಶ್ ರೈ, ನಾನು ಕನ್ನಡದವನು, ತಮಿಳುನಾಡಿಗೆ ಹೋಗಿ ತಮಿಳು ಕಲಿತೆ. ಹಾಗೇ ನೀವು ಕರ್ನಾಟಕದಲ್ಲಿ ಇದ್ದು ಕನ್ನಡ ಕಲಿಯಬೇಕು ಎಂದು ತಮಿಳಿನಲ್ಲಿ ಹೇಳಿ, ನಂತರ ಕನ್ನಡದಲ್ಲಿ ಭಾಷಣ ಮುಂದುವರಿಸಿದರು. ಹ್ಯಾರೀಸ್ ಅವರ ಕಾರ್ಯಕ್ರಮ ಎಂದು ಇಲ್ಲಿಗೆ ಬಂದೆ ಎಂದು ಪ್ರಕಾಶ್ ರೈ ಹೇಳಿದರು.
ಶಾಸಕ ಹ್ಯಾರೀಸ್ ಮತ್ತು ಪುತ್ರ ಮೊಹಮ್ಮದ್ ನಲಪಾಡ್
ಸಂಕ್ರಾಂತಿ ಪ್ರಯುಕ್ತ ಶಾಂತಿನಗರ ಅಸೆಂಬ್ಲಿ ಕ್ಷೇತ್ರದ ಆಸ್ಟಿನ್ ಟೌನ್ ನಲ್ಲಿ ಜನವರಿ 27ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಭಾಗವಹಿಸಿದ್ದರು. ಶಾಸಕ ಹ್ಯಾರೀಸ್ ಮತ್ತು ಪುತ್ರ ಮೊಹಮ್ಮದ್ ನಲಪಾಡ್, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿದ್ದರು. ಮನುಷ್ಯ ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಅನ್ನೋದನ್ನು ಗುರುತಿಸುವುದು ಆ ಮನುಷ್ಯನಿಂದ ಎಷ್ಟು ಜನರಿಗೆ ಉಪಯೋಗವಾಯಿತು ಎನ್ನುವುದರಿಂದ. ಹಲವು ವರ್ಷಗಳಿಂದ ನೋಡುತ್ತಿರುವ ನಾನು, ಹ್ಯಾರೀಸ್ ಒಬ್ಬ ದೊಡ್ಡ ಮನುಷ್ಯ ಎಂದು ಈ ಕಾರ್ಯಕ್ರಮಕ್ಕೆ ಬಂದೆ ಎಂದು ಪ್ರಕಾಶ್ ಹೇಳಿದ್ದರು.
ಪ್ರಕಾಶ್ ರಾಜ್ ಫೌಂಡೇಶನ್ ಹೆಸರಿನಲ್ಲಿ ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ
ಚಿತ್ರದುರ್ಗದಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆಂಧ್ರದಲ್ಲಿ ಒಂದು ಊರನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ, ಆ ಊರಿನ ಮಕ್ಕಳಲ್ಲಿ ಫ್ಲೋರೈಡ್ ಸಮಸ್ಯೆಯಿದೆ. ಪ್ರಕಾಶ್ ರಾಜ್ ಫೌಂಡೇಶನ್ ಹೆಸರಿನಲ್ಲಿ ಕೆಲವು ಹಳ್ಳಿಗಳನ್ನು ದತ್ತು ತೆಗೆದುಕೊಳ್ಳುತ್ತಿದ್ದೇನೆ, ನೀವು ಸಹಾಯ ಮಾಡಬೇಕು ಎಂದು ಹ್ಯಾರೀಸ್ ಪುತ್ರನಲ್ಲಿ ಕೇಳಿಕೊಂಡೆ, ಆತ ನನಗೆ ಸಹಾಯ ಮಾಡಿದ. ಹೀಗೆ ಬೆಳೆಸಬೇಕು ನೋಡಿ..ಮಕ್ಕಳನ್ನಾ ಎಂದು ಪ್ರಕಾಶ್ , ಹ್ಯಾರೀಸ್ ಮತ್ತು ಅವರ ಪುತ್ರರತ್ನನಿಗೆ ಸರ್ಟಿಫಿಕೇಟ್ ನೀಡಿದ್ದರು.
ನಾನು ಭಯವಿಲ್ಲದ ಪ್ರಜೆಯಾಗಲು ಬಯಸುತ್ತೇನೆ
ನಾನು ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ, ನಾನು ಎಂಎಲ್ಎ, ಎಂಪಿ ಆಗುವುದಿಲ್ಲ. ನಾನು ಭಯವಿಲ್ಲದ ಪ್ರಜೆಯಾಗಲು ಬಯಸುತ್ತೇನೆ. ಒಂದು ಜಾತಿ ಭೂಮಿ ಮೇಲೆ ಇರಬಾರದೆಂದು ಎನ್ನುವ ಕೋಮುವಾದವನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಜನರ ಪ್ರೀತಿಯಿಂದ ಬೆಳೆದವನು ನಾನು, ಯಾರಿಗೂ ಹೆದರುವುದಿಲ್ಲ ಎಂದು ಪ್ರಕಾಶ್ ರೈ ಆ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಹ್ಯಾರೀಸ್ ಪುತ್ರ ಕಾಂಗ್ರೆಸ್ ನಿಂದ ಸಸ್ಪೆಂಡ್
ಹ್ಯಾರೀಸ್ ಪುತ್ರನ ಗೂಂಡಾಗಿರಿ ಈ ಹಿಂದೆ ಕೂಡಾ ಮೂರ್ನಾಲ್ಕು ಬಾರಿ ವರದಿಯಾಗಿತ್ತು. ಬೌರಿಂಗ್ ಇನ್ಸ್ಟಿಟ್ಯೂಟ್, ಶಾಂತಿನಗರದ ಪಬ್ ನಲ್ಲಿ ಗಲಾಟೆ ಮಾಡಿ, ಹಲ್ಲೆ ನಡೆಸಿದ್ದ ಬಗ್ಗೆಯೂ ವರದಿಯಾಗಿತ್ತು, ಆನಂತರ ಹಾಗೆಯೇ ಮುಚ್ಚಿಹೋಗಿತ್ತು. ಚುನಾವಣಾ ವೇಳೆ, ಪಕ್ಷಕ್ಕಾಗಬಹುದಾದ ಮುಜುಗರ ತಪ್ಪಿಸಲು ಕೆಪಿಸಿಸಿ ಈಗ ಹ್ಯಾರೀಸ್ ಪುತ್ರನನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದೆ.