ಕರ್ನಾಟಕದಲ್ಲಿ 15 ತಿಂಗಳಲ್ಲಿ 15 ಸಾವಿರ ನವಜಾತ ಶಿಶುಗಳ ಸಾವು
ಬೆಂಗಳೂರು, ಆಗಸ್ಟ್ 3: ಅಪೌಷ್ಠಿಕತೆ, ಅನಾರೋಗ್ಯ ಹಾಗೂ ಪೋಷಣೆಯ ನ್ಯೂನತೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕಳೆದ 15 ತಿಂಗಳ ಅವಧಿಯಲ್ಲಿ 15 ಸಾವಿರ ನವಜಾತ ಶಿಶುಗಳು ಸಾವನ್ನಪ್ಪಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
2017ರ ಏಪ್ರಿಲ್ 1 ರಿಂದ 2018ರ ಮಾರ್ಚ್ 31ರ ವರೆಗೆ 11,900 ಮಕ್ಕಳು ಸಾವನ್ನಪ್ಪಿದ್ದರೆ, ಈ ವರ್ಷದ ಏ.1ರಿಂದ ಜೂ.30ರವರೆಗೆ 2555 ನವಜಾತ ಶಿಶುಗಳು ಅಸುನೀಗಿವೆ. ಹೀಗೆ ಸರಣಿ ಶಿಶುಗಳ ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕಾಂಗರೂ ಮಾದರಿ ಯೋಜನೆ ಅನುಷ್ಠಾನಗೊಳಿಸಲು ಯತ್ನಿಸಿತ್ತಾದರೂ ಮೂಲಸೌಕರ್ಯ ಕೊರತೆಯಿಂದಾಗಿ ಶಿಶುಗಳ ಮಾರಣಹೋಮ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.
ಗರ್ಭಿಣಿಯರಲ್ಲಿ ಹೆಚ್ಚುತ್ತಿರುವ ಹೃದಯಾಘಾತ, ಏನು ಹೇಳತ್ತೆ ಅಧ್ಯಯನ?
ಈ ಅಂಶವನ್ನು ಸ್ವತಃ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಒಪ್ಪಿಕೊಂಡಿದೆ. ರಾಜ್ಯದ ರಾಜಧಾನಿ ಬೆಂಗಳೂರಿನ ಕೆಲವೇ ಕಿ.ಮೀ ಅಂತರದಲ್ಲಿರುವ ಹಾಸನದಲ್ಲಿ ನವಜಾತಶಿಶುಗಳು ಸಾವನ್ನಪ್ಪಿರುವ ಪ್ರಮಾಣ ಹೆಚ್ಚಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ 1 ಸಾವಿರಕ್ಕೂ ಹೆಚ್ಚು ನವಜಾತಶಿಶುಗಳು ಸಾವನ್ನಪ್ಪಿರುವುದು ಆತಂಕ್ಕೀಡು ಮಾಡಿದೆ.
ಜಾಗತಿಕ ಮಟ್ಟದ ಆಸ್ಪತ್ರೆಗಳು ಆರೋಗ್ಯ ಸಂಸ್ಥೆಗಳು, ಸರ್ಕಾರಿ ಒಡೆತನದ ಆರೋಗ್ಯ ಸಂಸ್ಥೆಳಲ್ಲಿ ಕೂಡ ನವಜಾತ ಶಿಶುಗಳು ಸೂಕ್ತ ಚಿಕಿತ್ಸೆ ಹಾಗೂ ಆರೋಗ್ಯ ಸೌಲಭ್ಯಗಳಿಲ್ಲದೆ ಸಾವನ್ನಪ್ಪುತ್ತಿರುವುದು ಸರ್ಕಾರವನ್ನು ಜಿಜ್ಞಾಸೆಗೀಡು ಮಾಡಿದೆ.
ಹಾಸನ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಮಾಣದ ಶಿಶುಗಳು ಸಾವನ್ನಪುತ್ತಿದ್ದರೆ, ದಾವಣಗೆರೆ, ಧಾರವಾಡ, ಮೈಸೂರು, ಬಿಬಿಎಂಪಿ ವ್ಯಾಪ್ತಿಗೊಳಪಟ್ಟ ಬೆಂಗಳೂರು ನಗರ ನಂತರದ ಸ್ಥಾನದಲ್ಲಿವೆ. ಈ ಜಿಲ್ಲೆಗಳಲ್ಲಿ ಪ್ರತಿ ಒಂದು ಸಾವಿರ ನವಜಾತ ಶಿಶುಗಳ ಪೈಕಿ 25 ಶಿಶುಗಳು ಸಾವನ್ನಪ್ಪುತ್ತಿವೆ.
ಹಿಂದುಳಿದ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಕೊಪ್ಪಳ, ಬೀದರ್ ಮತ್ತು ಕೋಲಾರ ಜಿಲ್ಲೆಗಳಲ್ಲಿ ಪ್ರತಿ ಸಾವಿರಕ್ಕೆ 13-19 ಮಕ್ಕಳು ಜೀವ ಬಿಡುತ್ತಿವೆ. ಕುತೂಹಲದ ಸಂಗತಿಯೆಂದರೆ, ಬಿಬಿಎಂಪಿ ವ್ಯಾಪ್ತಿ ಹೊರತುಪಡಿಸಿ ಬೆಂಗಳೂರು ನಗರಜಿಲ್ಲೆ ಶಿಶುಗಳ ಮರಣಪ್ರಮಾಣದಲ್ಲಿ ರಾಜ್ಯದಲ್ಲೇ ಕೊನೆ ಸ್ಥಾನದಲ್ಲಿದೆ.
ರಾಜ್ಯದಲ್ಲಿ ಹೆರಿಗೆಯಾದ ತಕ್ಷಣವೇ ವೈದ್ಯಕೀಯ ಕಾರಣಗಳಿಗಾಗಿ ಸಾವನ್ನಪ್ಪುವ ತಾಯಂದಿರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. 2004ರಿಂದ 2006 ಅವಧಿಯಲ್ಲಿ ಪ್ರತಿ ಒಂದು ಲಕ್ಷ ಹೆರಿಗೆ ಬಳಿಕ 213, 2007ರಿಂದ 2009ರ ಅವಧಿಯಲ್ಲಿ 178, 2011ರಿಂದ 2013ರ ಅವಧಿಯಲ್ಲಿ 133 ಹಾಗೂ 2014ರಿಂದ 2016ರ ಅವಧಿಯಲ್ಲಿ 108 ತಾಯಂದಿರು ಸಾವಿಗೀಡಾಗಿದ್ದಾರೆ. ಇಂದಿಗೂ ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಹೆರಿಗೆ ಪ್ರಕರಣಗಳಲ್ಲಿ 100 ತಾಯಂದಿರು ಜೀವ ಕಳೆದುಕೊಳ್ಳುತ್ತಿದ್ದಾರೆ.