ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 2
ಹೀಗೆ ಹೇಳಿದ ನಂತರ ಖರೋಲಾ ತಕ್ಷಣವೇ ಹಿಂದಿ ನಾಮಫಲಕಗಳನ್ನು ಕಿತ್ತು ಹಾಕಿಸುವುದಾಗಿ ಭರವಸೆ ನೀಡಿದರು. ಕನ್ನಡದಲ್ಲೇ ವ್ಯವಹರಿಸಲು ಸಿಬ್ಬಂದಿಗೆ ಸೂಚಿಸುವುದಾಗಿಯೂ, ಕನ್ನಡ ಬಲ್ಲವರನ್ನೇ ನೇಮಕಾತಿ ಮಾಡಿಕೊಳ್ಳುವುದಾಗಿಯೂ ಆಶ್ವಾಸನೆ ನೀಡಿದರು. ನಮ್ಮ ಬೇಡಿಕೆಗೆ ಮಣಿದು ಹಿಂದಿ ನಾಮಫಲಕಗಳ ಮೇಲೆ ಪೇಪರ್ ಗಳನ್ನು ಮೆತ್ತಿಸಲಾಯಿತು. ಒಂದು ಹಂತಕ್ಕೆ ನಮ್ಮ ಮೆಟ್ರೋದಲ್ಲಿ ಹಿಂದಿಯನ್ನು ಪ್ರತಿಷ್ಠಾಪಿಸುವ ಯತ್ನ ವಿಫಲಗೊಂಡಂತಾಯಿತು.
ಆದರೆ ಸಮಸ್ಯೆ ಇಲ್ಲಿಗೆ ನಿಲ್ಲುವುದಿಲ್ಲ. ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಂತ ತಕ್ಷಣ ಇತರೆಡೆಗಳಲ್ಲಿ ಅದು ನಿಂತಂತಾಗುವುದಿಲ್ಲ. ಬಲವಂತದ ಹಿಂದಿ ಹೇರಿಕೆ ಕನ್ನಡ ನಾಡನ್ನು ಅದೃಶ್ಯವಾಗಿ ಕಾಡುತ್ತಿರುವ ಪೆಡಂಭೂತ. ಈ ಭೂತ ಒಮ್ಮೊಮ್ಮೆ ಒಂದೊಂದು ವೇಷ ತೊಟ್ಟುಕೊಂಡು ಬರುತ್ತದೆ. ಒಮ್ಮೆ ಮುಂದೆ, ಒಮ್ಮೆ ಹಿಂದೆ, ಮತ್ತೊಮ್ಮೆ ನಮ್ಮ ಎಡಬಲದಲ್ಲಿ ಪ್ರತ್ಯಕ್ಷವಾಗುತ್ತದೆ. ಇದರ ಬಣ್ಣಬಣ್ಣದ ವೇಷಗಳಿಗೆ ಒಮ್ಮೊಮ್ಮೆ ಕನ್ನಡಿಗರೇ ಮರುಳಾಗುವುದುಂಟು. (ನಮ್ಮ ಮೆಟ್ರೋದಲ್ಲಿ ಕನ್ನಡಿಗರಿಗೆ ಉದ್ಯೋಗ: ಗಡುವು)
'ಇಂಗ್ಲಿಷ್ ಮತ್ತು ಹಿಂದಿ ಕಡ್ಡಾಯ, ಮಿಕ್ಕಂತೆ ಆಯಾ ಪ್ರದೇಶದ ಭಾಷೆ ಬೇಕಿದ್ದರೆ ಬಳಸಬಹುದು' ಎಂಬ ನೀತಿಯನ್ನು ಆರಂಭಿಸಿದ ಕೇಂದ್ರ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ನಿಧಾನವಾಗಿ ಪ್ರಾದೇಶಿಕ ಭಾಷೆಗಳನ್ನು ಗುಡಿಸಿ ಹಾಕಿ ಕೇವಲ ಹಿಂದಿ ಮತ್ತು ಇಂಗ್ಲಿಷನ್ನು ಬಳಸತೊಡಗಿದವು.
ಒಂದು ಉದಾಹರಣೆಯನ್ನು ಗಮನಿಸಿ. ಈಗಿರುವ ತ್ರಿಭಾಷಾ ಸೂತ್ರದ ಅನ್ವಯವಾದರೂ ಕೇಂದ್ರ ಸರ್ಕಾರದ ಇಲಾಖೆಗಳು, ಅಧೀನ ಸಂಸ್ಥೆಗಳು ನಡೆದುಕೊಳ್ಳುತ್ತಿವೆಯೇ? ರೈಲ್ವೆ ಟಿಕೆಟುಗಳಲ್ಲಿ ಕನ್ನಡವಿದೆಯಾ? ಬ್ಯಾಂಕುಗಳು ಕೊಡುವ ಚೆಕ್ ಪುಸ್ತಕಗಳಲ್ಲಿ ಕನ್ನಡವಿದೆಯಾ? ಚಲನ್ ಗಳಲ್ಲಿ ಕನ್ನಡವಿದೆಯಾ? ಅಂಚೆ ಕಛೇರಿಗಳ ಅರ್ಜಿಗಳು ಕನ್ನಡದಲ್ಲಿದೆಯಾ?
ನಿಮ್ಮ ಉತ್ತರ 'ಇಲ್ಲ, ಇಲ್ಲ, ಇಲ್ಲ' ಎಂಬುದೇ ಆಗಿರುತ್ತದೆ. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡುವುದು ಹಾಗಿರಲಿ, ಕನ್ನಡದಲ್ಲಿ ಬರೆದ ಚೆಕ್ ಗಳನ್ನು ತಿರಸ್ಕರಿಸಲಾಗುತ್ತದೆ. ಇದು ಯಾವ ಸೀಮೆಯ ಭಾಷಾ ನೀತಿ?
ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ 'ಹಿಂದಿ ಸಪ್ತಾಹ', 'ಹಿಂದಿ ದಿವಸ್' ಇತ್ಯಾದಿ ಹೆಸರಿನ ಆಚರಣೆಗಳನ್ನು ನಡೆಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಹಿಂದಿಯನ್ನು ಬಲವಂತವಾಗಿ ಕಲಿಸುವ ಕೆಲಸ ಮಾಡುತ್ತದೆ. ಇದು ಯಾವ ಪುರುಷಾರ್ಥಕ್ಕೆ? ಒಂದು ಪ್ರದೇಶಕ್ಕೆ ಸಂಬಂಧವೇಪಡದ ಭಾಷೆಯನ್ನು ಬೇಕೆಂದೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಲಿಸುತ್ತಾರೆಂದರೆ ಅದರ ಹಿಂದೆ ಇರುವ ಹುನ್ನಾರವಾದರೂ ಏನು?