ಹಿಂದಿ ಹೇರಿಕೆ. ಕರವೇ ನಾರಾಯಣ ಗೌಡ್ರ ಲೇಖನ - 1
ಮಲ್ಲೇಶ್ವರದಿಂದ ಪೀಣ್ಯವರೆಗಿನ 'ಹಸಿರು ಮಾರ್ಗ'ವನ್ನು ನಮ್ಮ ಮೆಟ್ರೋ ಆರಂಭಿಸಿದಾಗ ನಿಜಕ್ಕೂ ಕನ್ನಡಿಗರು ಆಘಾತಗೊಂಡರು. ಯಾಕೆಂದರೆ ಅಲ್ಲಿ ಕಂಡಿದ್ದು ಹಿಂದಿ ದರ್ಬಾರು. ಎಲ್ಲಿ ನೋಡಿದರೆ ಅಲ್ಲಿ ಹಿಂದಿ ಅಕ್ಷರಗಳ ನಾಮಫಲಕಗಳು, ಭದ್ರತಾ ಸಿಬ್ಬಂದಿಗಳ ಹಿಂದಿ ಮಾತುಗಳು. ಕನ್ನಡಿಗರು ಈ ಹಿಂದಿವಾಲಾಗಳೊಂದಿಗೆ ವ್ಯವಹರಿಸಲಾಗದೆ ಒದ್ದಾಡಿದ್ದೂ ಆಯ್ತು.
ಯಾಕೆ ಈ ಹಿಂದಿ ನಾಮಫಲಕಗಳು ಎಂದು ಪ್ರಶ್ನಿಸಿದರೆ ನಮ್ಮ ಮೆಟ್ರೋಗೆ ಸಂಬಂಧಿಸಿದ ಅಧಿಕಾರಿಗಳು ಹೇಳಿದ್ದು 'ನಮ್ಮ ಮೆಟ್ರೋಗೆ ಕೇಂದ್ರ ಸರ್ಕಾರವೂ ಹಣ ತೊಡಗಿಸಿದೆ, ಹೀಗಾಗಿ ಹಿಂದಿ ಬಳಕೆ ಕಡ್ಡಾಯ' ಎಂಬ ಮಾತನ್ನು. ಈ ಉತ್ತರ ಎರಡು ಬಹಳ ಮುಖ್ಯವಾದ ಪ್ರಶ್ನೆಗಳನ್ನು ಮೇಲೆತ್ತುತ್ತದೆ. ಕೇಂದ್ರ ಸರ್ಕಾರ ಹಣ ತೊಡಗಿಸಿದ ಮಾತ್ರಕ್ಕೆ ಹಿಂದಿಯನ್ನೇಕೆ ಬಳಸಬೇಕು. ಕೇಂದ್ರ ಸರ್ಕಾರ ಹಿಂದಿ ಭಾಷಿಕರಿಗೆ ಸೇರಿದ್ದೋ? ಕೇಂದ್ರ ಸರ್ಕಾರ ಹಿಂದಿಯನ್ನು ಬಿಟ್ಟುಕೊಟ್ಟು ಏನನ್ನೂ ಮಾಡಕೂಡದು ಎಂದೋ? (ಹಿಂದಿ ವಿರುದ್ಧ ಎಂಕೆ ಯುದ್ಧ, ಸಿದ್ದು ಏಕೆ ನಿಶ್ಶಬ್ದ)
ಇನ್ನು ಕೇಂದ್ರ ಸರ್ಕಾರದ ಹಣ ಬಳಸಲಾಗಿದೆ ಎಂದರೆ ಏನರ್ಥ? ಕೇಂದ್ರ ಸರ್ಕಾರ ಕೊಡುವ ಹಣ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ್ದಲ್ಲವೇ? ನಾವು ಕೇಂದ್ರಕ್ಕೆ ಕೊಡುವ ಸಾವಿರಾರು ಕೋಟಿ ರೂ ತೆರಿಗೆ ಹಣದಲ್ಲಿ ರಾಜ್ಯಕ್ಕೆ ಅನುದಾನವಾಗಿ ಬರುವ ಹಣವಾದರೂ ಎಷ್ಟು? ಶೇ 20? ಶೇ.10? ಅಥವಾ ಅದಕ್ಕೂ ಕಡಿಮೆಯಿರಬಹುದೇ? ಹೀಗಿರುವಾಗ ಕೇಂದ್ರ ಸರ್ಕಾರ ಎಲ್ಲೋ ಆಕಾಶದಿಂದ ದುಡ್ಡನ್ನು ಸೃಷ್ಟಿಸಿ ಕೊಡುತ್ತಿರುವ ಹಾಗೆ 'ಕೇಂದ್ರ ಸರ್ಕಾರದ ಹಣ' ಎಂದು ಹಣೆಪಟ್ಟಿ ಹಚ್ಚುವುದಾದರೂ ಯಾತಕ್ಕಾಗಿ? ಏನಿದರ ಹುನ್ನಾರ?
ಹಿಂದಿಯನ್ನು ಬಲವಂತವಾಗಿ ಕನ್ನಡಿಗರ ಮೇಲೆ ಹೇರುವ ಮೆಟ್ರೋ ಸಂಸ್ಥೆಯ ಹುನ್ನಾರವನ್ನು ವಿಫಲಗೊಳಿಸುವ ಉದ್ದೇಶದಿಂದ ಕರ್ನಾಟಕ ರಕ್ಷಣಾ ವೇದಿಕೆ ನಿರಂತರ ಹೋರಾಟಗಳನ್ನು ನಡೆಸಿತು. ಕಳೆದ ವಾರ ನಾವು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿಕೊಂಡಿದ್ದೆವು.
ಆಗ ನಾನು ನನ್ನ ಎಂದಿನ ಧಾಟಿಯಲ್ಲಿ ಹೇಳಿದೆ- "ಹಿಂದಿ ನಾಮಫಲಕಗಳು ಇರಕೂಡದು. ಅದರ ಅಗತ್ಯ ಕರ್ನಾಟಕದಲ್ಲಿ ಇಲ್ಲ. ನೀವು ತೆಗೆಯದೇ ಹೋದರೆ ನಾವೇ ಎಲ್ಲಾ ನಿಲ್ದಾಣಗಳಿಗೂ ನುಗ್ಗಿ ಕಿತ್ತು ಎಸೆಯಬೇಕಾಗುತ್ತದೆ. ಇಂಥ ನೂರಾರು ಕಾರ್ಯಾಚರಣೆಗಳನ್ನು ನಡೆಸಿದ ಅನುಭವ ನಮಗಿದೆ. ಕನ್ನಡದ ವಿಷಯಕ್ಕೆ ಬಂದಾಗ ಜೈಲು-ಪೊಲೀಸು ಇತ್ಯಾದಿಗಳಿಗೆ ನಾವು ಅಂಜುವವರೂ ಅಲ್ಲ. ನಿಮಗೆ ರೈಲು ಮಾರ್ಗ ಹಾಕಲು ಜಾಗ ಕೊಟ್ಟಿರುವುದು ಕನ್ನಡಿಗರು, ರೈಲಿನಲ್ಲಿ ಓಡಾಡುವವರೂ ಕನ್ನಡಿಗರು.
ಯೋಜನೆ ನಡೆದಿರುವುದು ನಮ್ಮ ತೆರಿಗೆ ಹಣದಲ್ಲಿ. ಇನ್ಯಾವುದೋ ಪರದೇಸಿ ಭಾಷೆಯನ್ನು ತಂದು ತುರುಕಲು ಯತ್ನಿಸಿದರೆ ಪರಿಸ್ಥಿತಿ ನೆಟ್ಟರಿಗೋದಿಲ್ಲ. ನಮ್ಮ ಆಗ್ರಹಕ್ಕೆ ಮಣಿಯದೇಹೋದಲ್ಲಿ ಇನ್ನು ಮುಂದೆ 'ನಮ್ಮ ಮೆಟ್ರೋ' ಯಾವುದೇ ಮಾರ್ಗವನ್ನು ಆರಂಭಿಸಲು ಅವಕಾಶ ಕೊಡುವುದಿಲ್ಲ. ನಮ್ಮ ಮೆಟ್ರೋದಲ್ಲಿ ಭದ್ರತಾ ಸಿಬ್ಬಂದಿ ಸೇರಿ ಎಲ್ಲ ಹುದ್ದೆಗಳನ್ನು ಕನ್ನಡಿಗರಿಗೆ ಕೊಡಬೇಕು. ಕನ್ನಡದಲ್ಲೇ ವ್ಯವಹಾರ ನಡೆಯಬೇಕು. ಇಲ್ಲವಾದಲ್ಲಿ ಸುಮ್ಮನೆ ಬಿಡುವುದಿಲ್ಲ"