ಶುಕ್ರವಾರ ಗಮನಿಸಬೇಕಾದ ಪ್ರಮುಖ ಸುದ್ದಿಗಳು
ಬೆಂಗಳೂರು, ಡಿಸೆಂಬರ್ 27: ರಾಜ್ಯ, ರಾಷ್ಟ್ರಮಟ್ಟದಲ್ಲಿ 'ರಾಜಕೀಯ' ತೀವ್ರವಾಗಿದ್ದು ಸುದ್ದಿಗಳೆಲ್ಲವೂ 'ರಾಜಕೀಯ'ದ ಸುತ್ತಲೇ ಗಿರಕಿ ಹೊಡೆಯುತ್ತಿವೆ. ಶುಕ್ರವಾರ ಓದುಗರು ಗಮನಿಸಬೇಕಾದ ಸುದ್ದಿಗಳಲ್ಲಿ ರಾಜಕೀಯವೇ ಪ್ರಧಾನವಾಗಿದೆ.
* ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಮೈತ್ರಿ ಗೆದ್ದಿದ್ದು, ಹೇಮಂತ್ ಸೊರೆನ್ ಸಿಎಂ ಆಗಿ ಡಿಸೆಂಬರ್ 29 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಂಪುಟ ವಿಸ್ತರಣೆ ಕುರಿತಾದ ಸಭೆ ಇಂದು ನಡೆಯಲಿದ್ದು, ಮೈತ್ರಿ ನಡುವೆ ಖಾತೆ ಹಂಚಿಕೆ ಗಮನ ಸೆಳೆದಿದೆ.
* ಗೃಹ ಸಚಿವ ಅಮಿತ್ ಶಾ ಇಂದು ಶಿಮ್ಲಾ ನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದು, ಸಿಎಎ, ಎನ್ಆರ್ಸಿ ಬಗ್ಗೆ ಅವರಾಡಲಿರುವ ಮಾತುಗಳು ಮಹತ್ವ ಪಡೆದಿವೆ. 'ಎನ್ಆರ್ಸಿ ದೇಶದೆಲ್ಲೆಡೆ ಜಾರಿ ಮಾಡಲಾಗುವುದಿಲ್ಲ' ಎಂಬ ಹೇಳಿಕೆ ಇಂದು ಅಧಿಕೃತಗೊಳ್ಳುವ ಸಾಧ್ಯತೆ ಇದೆ.
* ರಾಷ್ಟ್ರಮಟ್ಟದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಕಾವು ಆರಿಲ್ಲವಾದ್ದರಿಂದ ಸಿಎಎ ಪ್ರತಿಭಟನೆ, ಅದರ ಕುರಿತಾದ ರಾಜಕೀಯ ನಾಯಕರ ಹೇಳಿಕೆಗಳು ಭಾರಿ ಪ್ರಾಮುಖ್ಯತೆ ಪಡೆದುಕೊಂಡಿದೆ. ನಿನ್ನೆ ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದು, ಅದರ ವಿರುದ್ಧ ಬಿಜೆಪಿ ನಾಯಕರಿಂದ ಹೊರ ಬೀಳುವ ಹೇಳಿಕೆಗಳತ್ತ ಗಮನ ಇಂದು ಗಮನ ಹರಿದಿದೆ.
* ಪೇಜಾವರ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದ ಕಾರಣ ಡಿಸೆಂಬರ್ 20 ರಂದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ನೀಡಲಾಗಿದ್ದು, ಶ್ರೀಗಳನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ.
* ರಾಜ್ಯದಲ್ಲಿ ಸಿಎಎ ಪ್ರತಿಭಟನೆಗಳು ಜೋರಾಗಿರುವ ಕಾರಣ ವಿಪಕ್ಷಗಳ ವಾಗ್ದಾಳಿಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಧಿವೇಶನವನ್ನು ಮುಂದೂಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದ್ದು, ಇಂದು ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.
* ಮಂಗಳೂರು ಗಲಭೆ ಮತ್ತು ಅದರ ಸುತ್ತಿನ ರಾಜಕೀಯದ ಕಾವು ಇನ್ನೂ ಆರಿಲ್ಲ. ಮಮತಾ ಬ್ಯಾನರ್ಜಿ ಮಂಗಳೂರಿನಲ್ಲಿ ಪ್ರಾಣ ಕಳೆದುಕೊಂಡವರಿಗೆ ಪರಿಹಾರ ಘೊಷಿಸಿರುವುದು ಬಿಜೆಪಿ-ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ನಾಂದಿ ಆಗುವ ಸಾಧ್ಯತೆ ಇದೆ.
* ಆಂಧ್ರ ಪ್ರದೇಶದಲ್ಲಿ ರೈತ ಆಂದೋಲನ ನಡೆಯುತ್ತಿದ್ದು, ಇದನ್ನು ಹತ್ತಿಕ್ಕಲು ಅಲ್ಲಿನ ಜಗನ್ ಸರ್ಕಾರ ವಿಪಕ್ಷ ನಾಯಕರಲ್ಲಿ ಕೆಲವರನ್ನು ಗೃಹ ಬಂಧನದಲ್ಲಿ ಇರಿಸಿದೆ. ಇಂದು ಈ ಸಂಬಂಧ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ.