ಮನೆ ಕಟ್ಟುವವರಿಗೆ ಸಿಹಿ ಸುದ್ದಿ ಕೊಟ್ಟ ಸಚಿವ ಮುರುಗೇಶ್ ನಿರಾಣಿ!
ಬೆಂಗಳೂರು, ಫೆ. 10: ಮನೆ ಕಟ್ಟುವವರಿಗೆ ಬಿಜೆಪಿ ಸರ್ಕಾರ ಸಿಹಿ ಸುದ್ದಿ ಕೊಟ್ಟಿದೆ. ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ನೂತನ ಮರಳು ನೀತಿ ಜಾರಿಗೆ ಅಂತಿಮ ನಿರ್ಧಾರ ಮಾಡಿದೆ. ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಹಾಗೂ ಸರಳವಾಗಿ ಮರಳು ಸಿಗುವಂತೆ ಮಾಡುವ ಉದ್ದೇಶದಿಂದ ಶೀಘ್ರದಲ್ಲೇ 'ಮರಳು ನೀತಿ'ಯನ್ನು ಜಾರಿ ಮಾಡಲು ತೀರ್ಮಾನ ಮಾಡಲಾಗಿದೆ.
ಶಿವಮೊಗ್ಗ ಸ್ಪೋಟದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ ಹಲವು ಸುಧಾರಣೆಗಳನ್ನು ಗಣಿ ನೀತಿಯಲ್ಲಿ ತರುತ್ತಿದೆ. ಜೊತೆಗೆ ಅಕ್ರಮಕ್ಕೆ ಕಡಿವಾಣ ಹಾಕಿ, ಸಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲು ಸರ್ಕಾರ ಮಾರ್ಗಸೂಚಿ, ನಿಯಮ ರೂಪಿಸುತ್ತಿದೆ. ಇನ್ನು ಕೆಲ ದಿನಗಳಲ್ಲಿ ಮರಳು ನೀತಿ 2021 ಜಾರಿಗೆ ತರಲು ಸರ್ಕಾರ ತೀರ್ಮಾನ ಮಾಡಿದೆ. ಎತ್ತಿನ ಗಾಡಿಯಲ್ಲಿ ಮರಳು ಸಾಗಣೆ ಮಾಡಿದರೂ ಪ್ರಕರಣ ದಾಖಲಿಸಲಾಗುತ್ತಿತ್ತು. ಹೀಗಾಗಿ ಮರಳು ನೀತಿಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗಿದೆ. ನೂತನ ಮರಳು ನೀತಿಯಲ್ಲಿದೆ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ!
ಜನ ಸಾಮಾನ್ಯರಿಗೆ ತೊಂದರೆ..
ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಹಾಗೂ ಸರಳವಾಗಿ ಮರಳು ಸಿಗುವಂತೆ ಮಾಡುವ ಉದ್ದೇಶದಿಂದ ಶೀಘ್ರದಲ್ಲೇ ಹೊಸ ಮರಳು ನೀತಿಯನ್ನು ಜಾರಿಗೆ ತರುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ತಿಳಿಸಿದ್ದಾರೆ. ಈ ಕುರಿತು ವಿಕಾಸಸೌಧದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ನೂತನ ಮರಳು ನೀತಿ ಜಾರಿ ಮಾಡುವ ಕುರಿತು ಕರಡು ಮರಳು ನೀತಿ ಸಿದ್ದಪಡಿಸಲಾಗಿದೆ. ಅಧಿಕಾರಿಗಳ ಜೊತೆ ಇನ್ನೊಮ್ಮೆ ಚರ್ಚಿಸಿ ಪ್ರಕಟ ಮಾಡಲಾಗುವುದೆಂದು ಹೇಳಿದರು.
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಒಂದೊಂದು ಭಾಗಕ್ಕೆ ಪ್ರತ್ಯೇಕವಾದ ಮರಳು ನೀತಿ ಇದೆ. ಈಗಾಗಲೇ ಒಂದು ಕರಡನ್ನು ತಂದಿದ್ದೇವೆ. ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಈ ನೀತಿ ತರುತ್ತಿದ್ದೇವೆ ಎಂದು ವಿವರಿಸಿದರು.
ಎತ್ತಿನ ಗಾಡಿಯಲ್ಲಿ ಮರಳು ಸಾಗಣೆ
ಮರಳು ಎಲ್ಲರಿಗೂ ಸುಲಭವಾಗಿ ಸಿಗುವಂತಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನೂತನ ನೀತಿ ರೂಪಿಸಲಾಗಿದೆ. ಹೀಗಾಗಿ ನಿಯಮಗಳನ್ನು ಆದಷ್ಟು ಸರಳಗೊಳಿಸಿದ್ದೇವೆ. ಹಳ್ಳ ಹಾಗೂ ಉಸುಕು ನಿಕ್ಷೇಪಗಳಲ್ಲಿ ಮಾತ್ರ ಮರಳು ತೆಗೆಯಲು ಅವಕಾಶ ಸಿಗಲಿದೆ. ಹಿಂದೆ ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆ ಕಟ್ಟಲೂ ಮರಳು ಕೊರತೆ ಇತ್ತು. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಎತ್ತಿನಗಾಡಿ, ಟ್ರ್ಯಾಕ್ಟರ್ಗಳಲ್ಲಿ ಮ ರಳು ಸಾಗಣೆಗೆ ಅವಕಾಶ ನೀಡಲಾಗುವುದೆಂದು ವಿವರಿಸಿದರು.
ರಾಯಲ್ಟಿಯಿಂದ ವಿನಾಯಿತಿ!
ಮರಳು ಗಣಿಗಾರಿಕೆಗೆ ಬ್ಲಾಕ್ಗಳನ್ನು ಗುರುತಿಸಿ ಹರಾಜಿನ ಮೂಲಕ ಗುತ್ತಿಗೆ ನೀಡಿರುವ ಪ್ರದೇಶಗಳನ್ನು ಬಿಟ್ಟು ಹಳ್ಳ, ತೊರೆಗಳಲ್ಲಿ ಸ್ವಂತ ಬಳಕೆಗೆ ದ್ವಿಚಕ್ರ ವಾಹನ, ಕತ್ತೆ, ಬಂಡಿ ಟ್ರ್ಯಾಕ್ಟರ್ಗಳಲ್ಲಿ ಕೊಂಡೊಯ್ಯುವ ಬಡವರು, ರೈತರಿಗೆ ಪರವಾನಗಿ, ರಾಯಲ್ಟಿಯಿಂದ ವಿನಾಯಿತಿ ನೀಡಲಾಗುವುದು ಎಂದು ಗಣಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ. ಆದರೆ, ಇದನ್ನೇ ಸಂಗ್ರಹಿಸಿ ಲಾರಿ, ಟಿಪ್ಪರ್ಗಳಲ್ಲಿ ಬೇರೆಡೆ ಸಾಗಣೆ, ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಗಾಡಿ, ಬೈಕ್, ಕತ್ತೆಗಳ ಮೇಲೆ ಮರಳು ಸಾಗಿಸಿದರೂ, ಪ್ರಕರಣ ದಾಖಲಿಸಿ ಎಫ್ಐಆರ್ ಹಾಕಿರುವ ನಿದರ್ಶನಗಳಿವೆ. ಆದರೆ ನಮ್ಮ ರಾಜ್ಯದಲ್ಲಿ ಅದಕ್ಕೆ ಅವಕಾಶ ನೀಡಬಾರದು ಎಂಬ ಚಿಂತನೆ ಇದೆ. ಮರಳನ್ನು ಮನೆ ನಿರ್ಮಾಣ ಹಾಗೂ ಸ್ವಂತ ಉಪಯೋಗಕ್ಕೆ ಸುಲಭವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡುತ್ತೆವೆ ಎಂದು ನಿರಾಣಿ ಅವರು ಭರವಸೆ ನೀಡಿದ್ದಾರೆ.
Recommended Video
ಅಧ್ಯಯನ ಮಾಡಲು ಸಮಿತಿಗಳು
ನೂತನ ಮರಳು ನೀತಿ ಜಾರಿಗೆ ತರಲು ಅನುಕೂಲವಾಗುವಂತೆ ಪ್ರಸ್ತುತ ಮೂರು ಸಮಿತಿಗಳನ್ನು ರಚಿಸಿದ್ದೇವೆ. ಆಂಧ್ರಪ್ರದೇಶ ರಾಜ್ಯದಲ್ಲಿನ ಮರಳು ನೀತಿ ಅಧ್ಯಯನ ಮಾಡಲು ಒಂದು ಸಮಿತಿ ರಚಿಸಲಾಗಿದೆ. ಹಾಗೆಯೇ ವಿಭಾಗವಾರು ಸಮಿತಿಗಳನ್ನು ರಚನೆ ಮಾಡಿದ್ದೇವೆ. ಸುಲಭವಾಗಿ ಎಲ್ಲರಿಗೂ ಮರಳು ಸಿಗಬೇಕು. ಜೊತೆಗೆ ನೈಸರ್ಗಿಕವಾಗಿಯೂ ಯಾವುದೇ ಅಪಾಯ ಆಗಬಾರದು. ತಾಂತ್ರಿಕವಾಗಿ ಹೇಗೆ ಮರಳುಗಾರಿಕೆ ಮಾಡಬಹುದು ಎಂಬುದರ ಬಗ್ಗೆ ನಿಯಮಗಳನ್ನು ರೂಪಿಸಲಾಗುವುದು ಎಂದು ನಿರಾಣಿ ಹೇಳಿದ್ದಾರೆ.