ಬೆಂಗಳೂರಿಗೆ ಬಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದರೆ ಅಮಿತ್ ಶಾ?!
Recommended Video
ಬೆಂಗಳೂರು, ಜನವರಿ 02: ಕರ್ನಾಟಕದಲ್ಲಿ ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕರ್ನಾಟಕ ಬಿಜೆಪಿ ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಬಿಜೆಪಿ ನಾಯಕರಿಗೆ ಅಮಿತ್ ಶಾ ಕೊಟ್ಟ ಸೂಚನೆಗಳು!
ಡಿ.31 ರಂದು ಬೆಂಗಳೂರಿನ ಯಲಹಂಕದ ರಾಯಲ್ ಆರ್ಕಿಡ್ ನಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಹಲವು ಸಭೆಗಳು ನಡೆದಿದ್ದವು. 2018 ರ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಂತೆ ಈ ಸಂದರ್ಭದಲ್ಲಿ ಗಂಭೀರವಾಗೊ ಚರ್ಚೆ ನಡೆಸಿದ ಅಮಿತ್ ಶಾ, ಕರ್ನಾಟಕದಲ್ಲಿ ಇನ್ನೂ ಒನ್ ಪ್ಲಸ್ ಒನ್ ಸ್ಟ್ರಾಟಜಿ ಜಾರಿಗೆ ಬಂದಿಲ್ಲ, ಏಕೆ? ಎಂದು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಅಗ್ನಿ ಪರೀಕ್ಷೆ!
"ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ನಾನು ಈ ಮೊದಲೇ ಸೂಚನೆ ನೀಡಿದ್ದೆ. ಆದರೆ ಅದು ಇದುವರೆಗೂ ಜಾರಿಗೆ ಬಂದಿಲ್ಲ, ಏಕೆ? ಒಂದು ಸಣ್ಣ ಕೆಲಸವನ್ನೂ ಮಾಡದೆ, ಗೆಲ್ಲಬೇಕು ಎಂದರೆ ಹೇಗಾಗುತ್ತದೆ?" ಎಂದು ಬಿಜೆಪಿ ನಾಯಕರಿಗೆ ಬಿಸಿಮುಟ್ಟಿಸಿದ್ದಾರೆ.
ಏನಿದು ಒನ್ ಪ್ಲಸ್ ಒನ್ ಸ್ಟ್ರಾಟಜಿ?
ಒನ್ ಪ್ಲಸ್ ಒನ್ ಸ್ಟ್ರಾಟಜಿ ಎಂದರೆ ಪ್ರತಿ ಶಾಸಕನೂ ತನ್ನ ಕ್ಷೇತ್ರದ ಜೊತೆಗೆ ಮತ್ತೊಂದು ಹೆಚ್ಚುವರಿ ಕ್ಷೇತ್ರವನ್ನು ಆಯ್ದುಕೊಂಡು ಅಲ್ಲೂ ಪ್ರಚಾರ ಕಾರ್ಯ ನಡೆಸುವುದು, ಅಭಿವೃದ್ಧಿ ಕಾರ್ಯಗಳು ಆಗುವಂತೆ ಸರ್ಕಾರವನ್ನು ಒತ್ತಾಯಿಸುವುದು, ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು, ಜನರ ನೋವಿಗೆ ಸ್ಪಂದಿಸುವುದು, ಜನರೊಂದಿಗೆ ನಿರಂತರವಾಗಿ ಒಡನಾಡುವುದು. ಈ ಮೂಲಕ ಮತದಾರರಲ್ಲಿ ವಿಶ್ವಾಸ ಹುಟ್ಟಿಸಬೇಕು ಎಂಬುದು ಅಮಿತ್ ಶಾ ಉದ್ದೇಶ.
ಜನವರಿ 10ರಂದು ಚಿತ್ರದುರ್ಗಕ್ಕೆ ಅಮಿತ್ ಶಾ
ಗಡುವು ನೀಡಿದ ಅಮಿತ್ ಶಾ!
ಒನ್ ಪ್ಲಸ್ ಒನ್ ಸ್ಟ್ರಾಟಜಿಯನ್ನು ಶೀಘ್ರದಲ್ಲೇ ಜಾರಿಗೆ ತರಲೇಬೇಕು. ಜನವರಿ 9 ರಂದು ನಾನು ಮತ್ತೆ ಬೆಂಗಳೂರಿಗೆ ಭೇಟಿ ನೀಡುತ್ತೇನೆ. ಅಷ್ಟರಲ್ಲಿ ಈ ಈ ಸ್ಟ್ರಾಟಜಿ ಜಾರಿಗೆ ಬರಬೇಕು ಎಂದು ಶಾ, ಬಿಜೆಪಿ ನಾಯಕರಿಗೆ ಗಡುವು ನೀಡಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಡಿ ವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಗೆಲ್ಲುವುದಕ್ಕೆ ಇಷ್ಟು ಪ್ರಯತ್ನ ಸಾಲದು!
ನಾವು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂದರೆ ಇಷ್ಟು ಪ್ರಯತ್ನ ಯಾವುದಕ್ಕೂ ಸಾಲದು, ನಾನು ನಿಮ್ಮೆಲ್ಲರಿಂದ ಇನ್ನೂ ಹೆಚ್ಚಿನ ಪ್ರಯತ್ನ ಮತ್ತು ಉತ್ಸಾಹವನ್ನು ನಿರೀಕ್ಷಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ!
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ದನಿ ಏರಿಸುತ್ತಿರುವುದು ಯಾವುದಕ್ಕೂ ಸಾಲುತ್ತಿಲ್ಲ. ಮತ್ತಷ್ಟು ಆಕ್ರೋಶದಿಂದ ಧ್ವನಿ ಏರಿಸಿ. ಅಷ್ಟೇ ಅಲ್ಲ, ಕಾಂಗ್ರೆಸ್ ಸರ್ಕಾರದ ದೌರ್ಬಲ್ಯಗಳನ್ನು ಜನರಿಗೆ ಅರ್ಥಮಾಡಿಸಲು ಪ್ರಯತ್ನಿಸಿ. ಈ ಮೂಲಕ ಬಿಜೆಪಿಯನ್ನು ತಳಮಟ್ಟದಿಂದ ಬಲಪಡಿಸಿ ಎಂದು ಅವರು ಸಲಹೆ ನೀಡಿದ್ದಾರೆ. ಇನ್ನೆರಡು ತಿಂಗಳಿನಲ್ಲಿ ಬಿಜೆಪಿಯ ಎಲ್ಲಾ ನಾಯಕರೂ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗುತ್ತೀರಾ ಎಂದು ನಿರೀಕ್ಷಿಸುವುದಾಗಿಯೂ ಅವರು ಹೇಳಿದ್ದಾರೆ.
ಮಹದಾಯಿ ವಿಷಯದಲ್ಲೂ ವಿಫಲ!
ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳಬಹುದಿತ್ತು. ಈ ಮೂಲಕ ಉತ್ತರ ಕರ್ನಾಟಕದ ಭಾಗದ ರೈತರ ವಿಶ್ವಾಸ ಗಳಿಸಬಹುದಿತ್ತು. ಆದರೆ ಈ ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿ ಸರಿಯಿಲ್ಲ ಎಂದು ಅವರು ನೇರವಾಗಿ ಬಿಜೆಪಿ ನಾಯಕರನ್ನು ದೂರಿದರು.
ಪರಿವರ್ತನಾ ಯಾತ್ರೆಗೆ ಮೆಚ್ಚುಗೆ
ಕರ್ನಾಟಕ ಬಿಜೆಪಿ ನವೆಂಬರ್ ತಿಂಗಳಾರಂಭದಿಂದ ಶುರು ಮಾಡಿರುವ ಪರಿವರ್ತನಾ ಯಾತ್ರೆಯ ಕುರಿತು ಶಾ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಯಾತ್ರೆ ನಡೆಸಿ, ಜನವರಿ 28 ರಂದು ಯಾತ್ರೆಗೆ ಮಂಗಳ ಹಾಡಲಿದೆ. ಯಾತ್ರೆಯಿಂದಾಗಿ ರಾಜ್ಯದಲ್ಲಿ ಕೊಂಚ ಬದಲಾವಣೆಯ ಗಾಳಿ ಬೀಸಿದೆ ಎಂಮದ ಅಮಿತ್ ಶಾ, ಪ್ರತಿಯೊಬ್ಬ ನಾಯಕರೂ ಈ ಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಉತ್ಸಾಹದಿಂದ ಪ್ರಚಾರ ಕಾರ್ಯ ನಡೆಸುವಂತೆ ಸೂಚಿಸಿದರು.
ಯಾತ್ರೆಯ ಸಮಯದಲ್ಲಿ ಅಭ್ಯರ್ಥಿಯ ಹೆಸರು ಘೋಷಿಸಬೇಡಿ
'ಯಾತ್ರೆಯ ಸಮಯದಲ್ಲಿ ಯಾರೂ ಚುನಾವಣೆಗೆ ಯಾವುದೇ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಬೇಡಿ. ಈ ಕುರಿತು ತೀರ್ಮಾನಿಸುವುದು ಹೈಕಮಾಂಡ್ ಗೆ ಬಿಟ್ಟಿದ್ದು. ಯಾತ್ರೆಯ ಸಮಯದಲ್ಲಿ ಮನಬಂದಂತೆ ಹೆಸರು ಘೋಷಿಸುವುದರಿಂದ ಬಿಜೆಪಿ ನಾಯಕರಲ್ಲೇ ಒಡಕು ಮೂಡುತ್ತದೆ' ಎಂದು ಅವರು ಹೇಳಿದ್ದಾರೆ.