ಕರ್ನಾಟಕ; ಮಳೆ ಅಬ್ಬರ ಕಡಿಮೆ, ತುಂತುರು ಮಳೆ ಸಾಧ್ಯತೆ
ಬೆಂಗಳೂರು, ಡಿಸೆಂಬರ್ 06; ಡಿಸೆಂಬರ್ ತಿಂಗಳು ಬಂದರೂ ಕರ್ನಾಟಕದಲ್ಲಿ ಮಳೆ ಅಬ್ಬರ ಕಡಿಮೆಯಾಗಿಲ್ಲ. ಅಕಾಲಿಕ ಮಳೆ ಈಗಾಗಲೇ ರಾಜ್ಯದಲ್ಲಿ ಅಪಾರ ನಷ್ಟವನ್ನು ಉಂಟು ಮಾಡಿದೆ. ಮಳೆ ಕಡಿಮೆಯಾದರೆ ಸಾಕು ಎಂದು ಜನರು ಕಾಯುವಂತಾಗಿದೆ.
ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿದ ಪರಿಣಾಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದೆ, ಆಗಾಗ ಸಾಧಾರಣ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಾಸನ; ಮತ್ತೆ ಮಳೆ, ಕೊಚ್ಚಿ ಹೋದ ರಸ್ತೆ, ಕೆರೆ ಏರಿ ಬಿರುಕು
ಶನಿವಾರ ಮತ್ತು ಭಾನವಾರ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ರಾಮನಗರ, ಮಂಡ್ಯ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಶನಿವಾರ ತಡರಾತ್ರಿ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ತುಂತುರು ಮಳೆಯ ನಿರೀಕ್ಷೆ ಇದೆ.
ಡಿಸೆಂಬರ್ 8ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ. ಆದರೆ ರಾತ್ರಿ ಉಷ್ಣಾಂಶ ಇಳಿಕೆಯಾಗಲಿದ್ದು ಮುಂಜಾನೆ ಶೀತವಾತಾವರಣ ಇರಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಅಕಾಲಿಕ ಮಳೆ; ಬೆಳೆ ಹಾನಿ ಪರಿಹಾರ ನೇರ ರೈತರ ಖಾತೆಗೆ
ತಗ್ಗಿದ ಮಳೆಯ ಅಬ್ಬರ; ನವೆಂಬರ್ 26ರ ಬಳಿಕ ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಮುನ್ಸೂಚನೆ ನೀಡಲಾಗಿತ್ತು. ಆದರೆ ಚಂಡಮಾರು ಪಶ್ಚಿಮ ಬಂಗಾಳ, ಓಡಿಶಾ ಭಾಗದತ್ತ ಸಾಗಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ.
ಶುಕ್ರವಾರ ಚಿಕ್ಕಮಗಳೂರು, ಕೊಡಗು, ಮಂಡ್ಯ ಮುಂತಾದ ಜಿಲ್ಲೆಗಳ ವಿವಿಧ ಕಡೆ ಮಳೆಯಾಗಿತ್ತು. ಶನಿವಾರ ರಾತ್ರಿ ರಾಮನಗರ, ಮಂಡ್ಯದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಮಳೆ ಅಬ್ಬರಿಸಿತ್ತು. ಉಳಿದಂತೆ ವಿವಿಧ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ, ಮೋಡ ಕವಿದ ವಾತಾವರಣ ಮುಂದುವರೆದಿದೆ.
ವಿಜಯಪುರದಲ್ಲಿ ಸುರಿದ ಅಕಾಲಿಕ ಮಳೆಗೆ ಮೆಣಸಿನಕಾಯಿ ಬೆಳೆಗೆ ಹಾನಿಯಾಗಿದೆ. ರಾಯಚೂರಿನಲ್ಲಿ ಸುರಿದ ಮಳೆ ಕಡಲೆ ಬೆಳೆಗೆ ಮಾರಕವಾಗಿದ್ದು, ಬೆಳೆಕೊಳೆಯಲು ಆರಂಭವಾಗಿದೆ. ಜಿಲ್ಲಾಡಳಿತಗಳು ಮಳೆಯಿಂದ ಹಾನಿಯ ಅಧ್ಯಯನ ನಡೆಸುತ್ತಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿವೆ.
ಮಲೆನಾಡು ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಅಡಕೆ, ಕಾಫಿ, ಭತ್ತ ಬೆಳೆದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಅಡಕೆಗೆ ಉತ್ತಮ ಧಾರಣೆ ಇದ್ದು, ಬೇಗ ಕೊಯ್ಲು ಮಾಡಲು ರೈತರು ಬಯಸಿದ್ದರು. ಆದರೆ ಅಕಾಲಿಕ ಮಳೆ ಇದಕ್ಕೆ ಅಡ್ಡಿ ಮಾಡಿತ್ತು.
ಕರಾವಳಿ ಮತ್ತು ಮಲೆನಾಡಿನ ಅನೇಕ ಜಿಲ್ಲೆಗಳಲ್ಲಿ ಭತ್ತದ ಕಟಾವು ಸಮಯವಾಗಿದೆ. ಮಳೆ ಜೋರಾಗಿ, ಗಾಳಿ ಬೀಸಿದರೆ ಫೈರು ನೆಲಕ್ಕೆ ವಾಲುವ ಭೀತಿ ಇದೆ. ಆದರೆ ಮಳೆ ಅಬ್ಬರ ಕಡಿಮೆಯಾಗಿದ್ದು, ರೈತರು ನಿಟ್ಟುಸಿರು ಬಿಟ್ಟಿದ್ದಾರೆ.
ಅಕಾಲಿಕ ಮಳೆಯಿಂದಾಗಿ ಕೊಡಗು, ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗೆ ಹಾನಿಯಾಗಿತ್ತು. ಕೊಯ್ಲು ಮಾಡಬೇಕಿದ್ದ ಕಾಫಿ ಬೀಜಗಳು ಮಣ್ಣಿ ಪಾಲಾಗಿತ್ತು. ಈಗ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದು, ಮತ್ತೆ ಮಳೆ ಆರಂಭವಾಗದಿದ್ದರೆ ಸಾಕು ಎಂದು ಬೆಳೆಗಾರರು ಬಯಸುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆ, ರಾಜ್ಯದಲ್ಲಿ ಸುರಿದ ಮಳೆಯಿಂದಾಗಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಭತ್ತದ ಬೆಳೆಗೆ ಹಾನಿಯಾಗಿದ್ದು, ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಅಕ್ಕಿಯ ಬೆಲೆ 4 ರಿಂದ 10 ರೂ. ತನಕ ಏರಿಕೆ ಕಂಡಿದೆ. ಸೋನಾ ಮಸೂರಿ, ಬಾಸಮತಿ ಸೇರಿದಂತೆ ವಿವಿಧ ಬಗೆಯ ಅಕ್ಕಿಯ ಬೆಲೆ ಅಕ್ಟೋಬರ್ ತಿಂಗಳಿಗೆ ಹೋಲಿಕೆ ಮಾಡಿದರೆ ಡಿಸೆಂಬರ್ನಲ್ಲಿ ಏರಿಕೆ ಕಂಡಿದೆ.
ಅಕಾಲಿಕ ಮಳೆಯಿಂದಾಗಿ ಭತ್ತ, ತೊಗರಿ, ಗೋಧಿ ಸೇರಿದಂತೆ ವಿವಿಧ ಬೆಳೆಗೆ ಹಾನಿಯಾಗಿದ್ದು ಒಂದೊಂದೇ ಪದಾರ್ಥದ ಬೆಲೆಗಳು ಏರಿಕೆಯಾಗುತ್ತಿದೆ. ಗಗನಕ್ಕೆ ಏರಿದ್ದ ತರಕಾರಿ ಬೆಲೆಗಳು ನಿಧಾನವಾಗಿ ಕಡಿಮೆಯಾಗುತ್ತಿವೆ.
ಕಲಬುರಗಿ ಜಿಲ್ಲೆ ರಾಜ್ಯದ ತೊಗರಿ ಕಣಜವಾಗಿದೆ. ಜನವರಿ ತಿಂಗಳಿನಲ್ಲಿ ಬೆಳೆ ಕಟಾವಿಗೆ ಬರಲಿದ್ದು, ಬಳಿಕ ದರ ಹೆಚ್ಚಾಗಲಿದೆಯೇ? ಎಂದು ಕಾದು ನೋಡಬೇಕಿದೆ.
Recommended Video