ಮೇಲ್ಮೈ ಸುಳಿಗಾಳಿ: ಮಲೆನಾಡು, ಕರಾವಳಿಯಲ್ಲಿ ಮಳೆ
ಬೆಂಗಳೂರು ಜು.5: ಅರಬ್ಬೀ ಸಮುದ್ರದಲ್ಲಿ ಸೋಮವಾರ ಉಂಟಾಗಿದ್ದ ಮೇಲ್ಮೈ ಸುಳಿಗಾಳಿ ತುಸು ತೀವ್ರತೆ ಪಡೆದುಕೊಂಡಿದೆ. ಇದರಿಂದಾಗಿ ಕರ್ನಾಟಕದಲ್ಲಿ ಮಳೆ ಹಾಗೂ ಚಳಿಯ ವಾತಾವರಣ ನಿರ್ಮಾಣವಾಗಿದೆ. ಕರಾವಳಿ ಹಾಗೂ ಮಲೆನಾಡಿನ ಭಾಗದ ಕೆಲವೆಡೆ ಭಾರೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬೀ ಸಮುದ್ರದಿಂದ ಪಶ್ಚಿಮ ಘಟ್ಟದ ಕಡೆಗೆ ಸಮುದ್ರ ಮೇಲ್ಮೈ ಸುಳಿಗಾಳಿಯು ಗಂಟೆಗೆ ಸುಮಾರು 50 ಕಿ. ಮೀ. ವೇಗದಲ್ಲಿ ಬೀಸುತ್ತಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 6-7 ಕಿ. ಮೀ. ಎತ್ತರದಲ್ಲಿರುವ ಕಾರಣದಿಂದಾಗಿ ತೇವಭರಿತ ಚಳಿಗಾಳಿ ರಾಜ್ಯವನ್ನು ಆವರಿಸಿದೆ. ಆದರೆ ಹಲವು ಭಾಗದಲ್ಲಿ ಮಾತ್ರ ಸಾಧಾರಣ, ಭಾರೀ ಮತ್ತು ಸಾಧಾರಣ ಮಳೆ ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ವಿಜ್ಞಾನಿ ಪ್ರಸಾದ್ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಯಾದಂತೆ ಹಿಂದಿನ 24ಗಂಟೆಗಳಲ್ಲಿ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ದಾಖಲಾಗಿದೆ. ಈ ಪೈಕಿ ಮಂಗಳೂರಿನಲ್ಲಿ 144.6 ಮಿ.ಮೀ. ಅತ್ಯಧಿಕ ಮಳೆ ಆಗಿದ್ದರೆ, ಕಾರವಾರದಲ್ಲಿ 120.2 ಮಿ.ಮೀ. ಹಾಗೂ ಹೊನ್ನಾವರದಲ್ಲಿ 72.2 ಮಿ.ಮೀ ಮಳೆ ದಾಖಲಾಗಿದೆ.
ಹಲವೆಡೆ ಉತ್ತಮ ಮಳೆ
ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಭಾಗದಲ್ಲಿ ಮಂಜು ಕವಿದ ರೀತಿಯ ವಾತಾವರಣ ಉಂಟಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆ ಬಿದ್ದಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ (6.8ಮಿ.ಮೀ.), ಗದಗ ಮತ್ತು ಚಿತ್ರದುರ್ಗ, ಬೆಂಗಳೂರು ನಗರದಲ್ಲಿ ತುಂತುರು ಮಳೆ ಆಗಿದೆ ಎಂದು ಹವಾಮಾನ ಇಲಾಖೆ ವರದಿ ಹೇಳಿದೆ.
ಹುಬ್ಬಳ್ಳಿಯಲ್ಲೂ ಉತ್ತಮ ಮಳೆಯಾಗಿದ್ದು, ರಸ್ತೆ ಮೇಲೆಲ್ಲ ನೀರು ನಿಂತು ವಾಹನಗಳ ಸಂಚಾರಕ್ಕೆ ತೊಂದರೆ ಆಗಿದೆ. ಸೋಮವಾರ ಬೆಳಗ್ಗೆಯಿಂದಲೂ ಈ ಭಾಗದಲ್ಲಿ ಜಿಟಿ ಜಿಟಿ ಮಳೆ ಆರಂಭವಾಗಿತ್ತು ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಇದೇ ರೀತಿ ವಾತಾವರಣ ಕಂಡು ಬರಲಿದೆ. ಒಂದು ವೇಳೆ ಸಮುದ್ರಮಟ್ಟದಲ್ಲಿರುವ ಮೇಲ್ಮೈ ಸುಳಿಗಾಳಿ ಇನ್ನಷ್ಟು ತೀವ್ರಗೊಂಡು ವಾಯುಭಾರ ಕುಸಿತವಾಗಿ ಬದಲಾದರೆ ಇಡಿ ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ. ಮೇಲ್ಮೈ ಸುಳಿಗಾಳಿ ತೀವ್ರಗೊಳ್ಳದಿದ್ದರೆ 2-3ದಿನದ ನಂತರ ರಾಜ್ಯದ ವಾತಾವರಣ ಸಹಜ ಸ್ಥಿತಿಗೆ ಮರಳಲಿದೆ ಎಂದು ಅಂದಾಜಿಸಲಾಗಿದೆ.
ಕೆಲವೆಡೆ ಗರಿಷ್ಠ ಉಷ್ಣಾಂಶ
ರಾಜ್ಯದ ಬಹುತೇಕ ಕಡೆಗಳಲ್ಲಿ ಕಂಡು ಬಂದ ಚಳಿಯ ವಾತಾವರಣ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕಂಡು ಬಂದಿಲ್ಲ. ಈ ಎರಡು ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ ತಲಾ 35 ಡಿ.ಸೆ. ದಾಖಲಾಗಿದೆ. ಜತೆಗೆ ಬಳ್ಳಾರಿ, ಹಂಪಿ, ಕಲಬುರಗಿ, ಮೈಸೂರು ಪ್ರದೇಶದಲ್ಲಿ 30 ಡಿ.ಸೆ.ಗೂ ಹೆಚ್ಚು ಗರಿಷ್ಠ ತಾಪಮಾನ ದಾಖಲಾಗಿದೆ. ಇನ್ನು ಚಿತ್ರದುರ್ಗ, ಬೆಂಗಳೂರು ನಗರ ಮತ್ತು ಗದಗ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 20 ಡಿ.ಸೆ. ವರದಿ ಆಗಿದೆ.
ಮಂಗಳವಾರದ ಮಳೆ ಎಚ್ಚರಿಕೆ
ಭಾರೀ ಮಳೆ ಸುರಿಯುವ ಮುನ್ಸೂಚನೆ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಅಲ್ಲದೇ ಮಲೆನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಇದರೊಂದಿಗೆ ಹಾಸನ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಮುದ್ರ ತೀರದಲ್ಲಿ ಗಾಳಿ ವೇಗ ಹೆಚ್ಚಿರುವ ಕಾರಣ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಬೆಂಗಳೂರಿನ ಇಂದಿನ ವಾತಾವರಣ
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಅಲ್ಲಲ್ಲಿ ತುಂತುರು ಮಳೆ ದಾಖಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 1.8 ಮಿ. ಮೀ., ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿ 0.4ಮಿ.ಮೀ. ಹಾಗೂ ಎಚ್ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ1.6 ಮಿ.ಮೀ., ಮಳೆ ದಾಖಲಾಗಿದೆ.
ಮುಂದಿನ 48 ಗಂಟೆಗಳ ಕಾಲದಲ್ಲಿ ನಗರದಲ್ಲಿ ಇದೇ ರೀತಿ ತಂಪು ಹಾಗೂ ಮೋಡ ಮುಸುಕಿನ ವಾತಾವರಣ ಮುಂದುವರಿಯಲಿದೆ. ಈ ವೇಳೆ ತಾಪಮಾನ ಗರಿಷ್ಠ 26 ಡಿ.ಸೆ. ಹಾಗೂ ಕನಿಷ್ಠ 20ಡಿ.ಸೆ. ದಾಖಲಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Recommended Video