ಕರ್ನಾಟಕದಲ್ಲಿ ಜುಲೈ 1ರವರೆಗೆ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು ಜೂ.28; ಕರ್ನಾಟಕದಲ್ಲಿ ಜುಲೈ 1ರವರೆಗೆ ಗುಡುಗು ಸಹಿತ ಜೋರು ಮಳೆ ಆಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಂಜೆ ನಂತರ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುನ್ಸೂಚನೆ ಪ್ರಕಾರ, ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಸುರಿಯಲಿದೆ. ಅದೇ ರೀತಿ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಇರಲಿದೆ. ಕರಾವಳಿ ಭಾಗದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜೂ.29ರಂದು ಯೆಲ್ಲೋ ಅಲರ್ಟ್, ಜೂ.30 ಹಾಗೂ ಜುಲೈ 1ರಂದು ಎರಡು ದಿನ ಆರೆಂಜ್ ಅಲರ್ಟ್ ನೀಡಲಾಗಿದೆ.
ಈ ಅವಧಿಯಲ್ಲಿ ಕರಾವಳಿ ಭಾಗದಲ್ಲಿ ಗಾಳಿಯವೇಗ ಗಂಟೆಗೆ ಸುಮಾರು 40ಕಿ. ಮೀ. ವೇಗದಲ್ಲಿ ಬೀಸುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ಕೊಡಲಾಗಿದೆ.
ಅದೇ ರೀತಿ ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಗದಗ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮತ್ತು ಕೊಡಗು ಜಿಲ್ಲೆಗಳಿಗೆ ಮುಂದಿನ ಎರಡು ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಆಗಾಗ ಮುಂಗಾರು ಆರ್ಭಟಿಸಲಿದ್ದು, ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರಲಿದೆ.
ಒಟ್ಟಾರೆ ಮುಂದಿನ ಎರಡು ಮೂರು ದಿನ ರಾಜ್ಯದ ಅರ್ಧಭಾಗದಲ್ಲಿ ಧಾರಾಕಾರ ಮಳೆ ಯಾಗುವ ಸಂಭವವಿದೆ. ಕರಾವಳಿಯ ಗುಡ್ಡಗಾಡು ಪ್ರದೇಶದಲ್ಲಿ ಈಗಾಗಲೇ ಕಳೆದ ನಾಲ್ಕೈದು ದಿನಗಳಿಂದ ಮಳೆ ಎಡೆಬಿಡೆದೆ ಸುರಿಯುತ್ತಿದೆ. ಮುಂಗಾರು ಆರಂಭವಾದ ಬಳಿಕ ಕರಾವಳಿ ಭಾಗದಲ್ಲಿ ಚುರುಕಾಗಿರುವ ಮಾರುತಗಳು ಉತ್ತರ ಒಳನಾಡಿನ ಭಾಗದಲ್ಲಿ ದುರ್ಬಲವಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನಲ್ಲೂ ಮಳೆ; ಮುಂದಿನ 48ಗಂಟೆ ಬೆಂಗಳೂರಿನಲ್ಲೂ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಬೆಳಗ್ಗೆಯಿಂದ ಆಗಾಗ ಬಿಸಿಲಿನ ದರ್ಶನಾದರೂ ಸಂಜೆ ನಂತರ ಗುಡುಗು, ಮಿಂಚು ಸಹಿತ ಮಳೆ ಬೀಳಲಿದೆ. ಬಹುತೇಕ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರುವುದರಿಂದ ಬೆಳಗ್ಗೆ ಹಾಗೂ ಸಂಜೆ ಚಳಿಯ ವಾತಾವರಣ ಕಂಡು ಬರಲಿದೆ. ಈ ವೇಳೆ ನಗರದಲ್ಲಿ ತಾಪಮಾನ ಗರಿಷ್ಠ 28 ಡಿ.ಸೆ. ಹಾಗೂ ಕನಿಷ್ಠ 20 ಡಿ.ಸೆ. ದಾಖಲಾಗುವ ಸಾಧ್ಯತೆ ಇದೆ.
ಮೇ ತಿಂಗಳಿನಲ್ಲಿ ನಗರದಲ್ಲಿ ಸುರಿದ ಮಳೆಗೆ ಕಾಪೌಂಡ್ ಹಾಗೂ ಥಿಯೇಟರ್ ನ ಗೋಡೆಯೊಂದು ಕುಸಿದಿತ್ತು. ಅಲ್ಲದೇ 24ವರ್ಷದ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿಹೋಗಿದ್ದ. ಬೆಂಗಳೂರಿನಿಂದ 50 ಕಿ. ಮೀ. ದೂರದಲ್ಲಿರುವ ಮಾಗಡಿಯಲ್ಲಿ ತುಂಬಿದ ಕೆರೆಗೆ ಕಾರು ಉರುಳಿದ ಬಿದ್ದು ಅವಘಡ ಸಂಭವಿಸಿತ್ತು. ಕಾರಲ್ಲಿದ್ದವರ ಪೈಕಿ ಎಂಟೆಕ್ ವಿದ್ಯಾರ್ಥಿಯೊಬ್ಬ ಅಸುನೀಗಿದ್ದರು. ಪ್ರತಿ ಭಾರೀ ಮಳೆ ಬಂದಾಗಲೂ ಒಂದಿಲ್ಲೊಂದು ಅವಘಡಗಳು ಎದುರಾಗುತ್ತಲೆ ಇದ್ದು, ಸಾರ್ವಜನಿಕರು ಆದಷ್ಟು ಜಾಗರೂಕರಾಗಿ ಇದ್ದರೆ ಒಳಿತು.