ಇಂದು, ನಾಳೆ ರಾಜ್ಯದಲ್ಲಿ ಕೆಲವೆಡೆ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಏಪ್ರಿಲ್ 27: ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಮುಂದಿನ ಒಂದೆರೆಡು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಿತ್ರದುರ್ಗ, ದಾವಣಗೆರೆ ಹೊರತುಪಡಿಸಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ ಸೇರಿ ಇತರೆ ಜಿಲ್ಲೆಗಳಲ್ಲಿ ಏ.27 ಮತ್ತು 28ರ ಸಂಜೆ ಅಥವಾ ರಾತ್ರಿ ಬಿರುಗಾಳಿ ಸಹಿತ ಮಳೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದಲ್ಲಿ ಮಾ.1ರಿಂದ ಏ.26ರವರೆಗೆ ವಾಡಿಕೆಯಂತೆ 34.2 ಮಿ.ಮೀ ಮಳೆ ದಾಖಲಾಗಬೇಕು.
ವಾರಾಂತ್ಯವರೆಗೂ ಬೆಂಗಳೂರಲ್ಲಿ ಮಳೆ ಮುಂದುವರೆಯುವ ಸಾಧ್ಯತೆ
ಆದರೆ ಈ ಸಾಲಿನಲ್ಲಿ 53.6ಮಿ.ಮೀ ಮಳೆ ದಾಖಲಾಗಿದ್ದು, ವಾಡಿಕೆಗಿಂತ ಶೇ.57 ಅಧಿಕ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದ 3 ವರ್ಷಕ್ಕೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಹೆಚ್ಚನ ಪ್ರಮಾಣದ ಬೇಸಿಗೆ ಮಳೆಯಾಗಿದೆ. 2016ರಲ್ಲಿ 45.2 ಮಿ.ಮೀ, 2017ರಲ್ಲಿ 71 ಮಿ.ಮೀ ಮಳೆ ದಾಖಲಾಗಿತ್ತು. ಈ ವರ್ಷ ಬೇಸಿಗೆಯಲ್ಲಿ 100.2 ಮಿ.ಮೀ ಮಳೆ ದಾಖಲಾಗಿದೆ.
ಯಾದಗಿರಿ, ಚಾಮರಾಜನಗರ ಮತ್ತು ಬಳ್ಳಾರಿ ಜಿಲ್ಲೆಗಳಷ್ಟೇ ಬೇಸಿಗೆ ಮಳೆ ಪ್ರಮಾಣ ತಗ್ಗಿದೆ. ದಕ್ಷಿಣ ಒಳನಾಡಿನಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆ ದಾಖಲಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಬಿಸಿಲ ಧಗೆ ಏರುತ್ತಿದೆ. ಕಲಬುರಗಿ ಮತ್ತು ಬಳ್ಳಾರಿಯಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ತಲುಪಿದೆ. ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬೀದರ್ ನಲ್ಲಿ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 34.7 ಡಿಗ್ರಿ ಸೆಲ್ಸಿಯಸ್, ಕನಿಷ್ಠ 22.0 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ ನಲ್ಲಿ ಗರಿಷ್ಠ 34.3 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.2ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ ನಲ್ಲಿ 34.6ಡಿಗ್ರಿ ಸೆಲ್ಸಿಯಸ್ ಕನಿಷ್ಠ 20.9ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.