IMA Scam: ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮಕ್ಕೆ ಒಪ್ಪಿಗೆ
ಬೆಂಗಳೂರು, ಸೆಪ್ಟೆಂಬರ್ 14: ಬಹುಕೋಟಿ ರುಪಾಯಿಯ ಐಎಂಎ ಹಗರಣದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಎಂ. ನಿಂಬಾಳ್ಕರ್ ಹಾಗೂ ಅಜಯ್ ಹಿಲೋರಿ ವಿರುದ್ಧ ಕಾನೂನು ಕ್ರಮಕ್ಕೆ ಕರ್ನಾಟಕ ಸರ್ಕಾರವು ಸಿಬಿಐಗೆ ಅನುಮತಿ ನೀಡಿದೆ. ಕರ್ನಾಟಕ ಪೊಲೀಸ್ ಕಾಯ್ದೆ 1963ರ ಅಪರಾಧ ದಂಡ ಸಂಹಿತೆ ಸೆಕ್ಷನ್ 197, 170ರ ಅಡಿಯಲ್ಲಿ ಅನುಮತಿ ನೀಡಲಾಗಿದೆ.
ಐಎಂಎ ಜ್ಯುವೆಲ್ಲರಿ ಹಗರಣ 2019ರ ಜೂನ್ ನಲ್ಲಿ ಬಯಲಿಗೆ ಬಿತ್ತು. ಆ ಸಂದರ್ಭದಲ್ಲಿ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು. ಹೂಡಿಕೆದಾರರ ನೂರಾರು ಕೋಟಿ ರುಪಾಯಿ ವಂಚನೆಯಾದ ಹಿನ್ನೆಲೆಯಲ್ಲಿ ಹಗರಣದ ಪ್ರಮುಖ ಆರೋಪಿ, ಐಎಂಎ ಜ್ಯುವೆಲ್ಲರಿ ಮಾಲೀಕ ಮೊಹ್ಮದ್ ಮನ್ಸೂರ್ ಖಾನ್ ನನ್ನು ಬಂಧಿಸಲಾಯಿತು. ಆತ ತನಗೆ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳು ವಂಚನೆ ಮಾಡಿದ್ದಾರೆ ಹಾಗೂ ಅವರಿಗೆ ಲಂಚ ನೀಡಿದ್ದಾಗಿ ಹೇಳಿದ್ದ.
ಐಎಂಎ ಹಗರಣ; ಇಬ್ಬರು ಸರ್ಕಾರಿ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್
ಆ ನಂತರ ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಉರುಳಿ, ಬಿಜೆಪಿ ಸರ್ಕಾರ ಬಂತು. ಐಎಂಎ ಹಗರಣವನ್ನು ಸಿಬಿಐಗೆ ವಹಿಸಲಾಯಿತು. ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಸಾವಿರ ಪುಟಗಳ ಚಾರ್ಜ್ ಶೀಟ್ ದಾಖಲು ಮಾಡಿತ್ತು ಸಿಬಿಐ ಹಾಗೂ ಆರೋಪ ಪಟ್ಟಿಯಲ್ಲಿ ಸರ್ಕಾರಿ ಅಧಿಕಾರಿಗಳ ಹೆಸರುಗಳನ್ನು ಸಹ ಸೇರಿಸಿತ್ತು. ಈ ಹಿಂದೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದ ಬಿ.ಎಂ. ವಿಜಯಶಂಕರ್ ಹೆಸರು ಸಹ ಇತ್ತು. ಅವರು ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡರು.
Recommended Video
ಐಎಂಎ ಸಂಸ್ಥಾಪಕ ಮೊಹಮದ್ ಮನ್ಸೂರ್ ಖಾನ್ ವಿದೇಶಕ್ಕೆ ಪರಾರಿ ಆಗುವುದಕ್ಕೆ ಆಗ ಸಿಐಡಿ ಐಜಿಪಿ ಆಗಿದ್ದ ಹೇಮಂತ್ ನಿಂಬಾಳ್ಕರ್ ಅವರೇ ಸಹಾಯ ಮಾಡಿದ್ದಾರೆ ಎಂಬುದು ಅವರ ಮೇಲೆ ಇರುವ ಆರೋಪ. ಅದೇ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆಯನ್ನು ಸಹ ಅವರು ಎದುರಿಸಿದ್ದರು. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಇಲಾಖೆಯಿಂದ ಐಎಂಎ ಬಗ್ಗೆ ಎಚ್ಚರಿಕೆ ನೀಡಿದ್ದರೂ ಐಎಂಎ ಜ್ಯುವೆಲ್ಲರಿಗೆ ಆಗಿನ ಸಿಸಿಬಿ ಹೆಚ್ಚುವರಿ ಕಮಿಷನರ್ ಆಗಿದ್ದ ಅಜಯ್ ಹಿಲೋರಿ ಕ್ಲೀನ್ ಚಿಟ್ ನೀಡಿದ್ದರು ಎಂಬುದು ಅವರ ಮೇಲಿನ ಆರೋಪ.