ನಾನು ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಪ್ರಜ್ವಲ್ ರೇವಣ್ಣ
Recommended Video
ಬೆಂಗಳೂರು, ಮಾರ್ಚ್ 08: ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ಕಗ್ಗಂಟಾಗಿರುವಾಗಲೇ ಅವರು 'ನಾನೂ ಕೂಡಾ ಟಿಕೆಟ್ ಆಕಾಂಕ್ಷಿ' ಎಂದು ಹೇಳಿಕೆ ನೀಡಿ, ವಿಷಯಕ್ಕೆ ಇನ್ನಷ್ಟು ಕುತೂಹಲ ಬೆರೆಸಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ನಾನು ರಾಜರಾಜೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ' ಎಂದು ಮನದಾಸೆ ಬಹಿರಂಗಪಡಿಸಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಟಿಕೆಟ್: ಕುಮಾರಸ್ವಾಮಿ ಹೇಳಿದ್ದೇನು?
ಆದರೆ ವರಿಷ್ಠರ ನಿರ್ಣಯಕ್ಕೆ ತಲೆಬಾಗುವುದಾಗಿಯೂ ಹೇಳಿರುವ ಅವರು, 'ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ, ಆದರೆ ಟಿಕೆಟ್ ಕೊಡದಿದ್ದರೆ ಕಾರ್ಯಕರ್ತನಾಗಿ ದುಡಿಯುತ್ತೇನೆ' ಎಂದಿದ್ದಾರೆ.
'ರಾಜರಾಜೇಶ್ವರಿ ನಗರದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಕಾಂಗ್ರೆಸ್ ಶಾಸಕ ಮುನಿರತ್ನ ಅವರನ್ನು ಮನೆಗೆ ಕಳಿಸುವುದೇ ನನ್ನ ಗುರಿ' ಎಂದು ಮುನಿರತ್ನ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿರುವ ಪ್ರಜ್ವಲ್ ಅವರು,ಶಾಸಕರು ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರ ಸುತ್ತುವುದು ಬಿಟ್ಟು ಬೇರೇನು ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.
ಚಿತ್ರ ನಿರ್ಮಾಪಕರೂ ಆಗಿರುವ ಶಾಸಕ ಮುನಿರತ್ನ ಅವರು ಕುಮಾರಸ್ವಾಮಿ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಪ್ತರಾಗಿದ್ದು, ಈಗ ಪ್ರಜ್ವಲ್ ರೇವಣ್ಣ ಅವರು ಮುನಿರತ್ನ ಮೇಲೆ ಹರಿಹಾಯ್ದಿರುವುದು ಅವರಿಬ್ಬರಿಗೂ ಮುಜುಗರ ಉಂಟುಮಾಡುವ ಸಾಧ್ಯತೆ ಇದೆ. ಮುನಿರತ್ನ ಅವರು ನಿರ್ಮಿಸುತ್ತಿರುವ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಅಭಿಮನ್ಯು ಪಾತ್ರ ನಿರ್ವಹಿಸಿದ್ದಾರೆ.
ಪ್ರಜ್ವಲ್ ಗೆ ಅಸೆಂಬ್ಲಿ ಟಿಕೆಟ್, ದೊಡ್ಡ ಗೌಡರಿಗೆ ಕಾರ್ಯಕರ್ತರ ಆಗ್ರಹ
ಕುಮಾರಸ್ವಾಮಿ ಅವರು ಸಹ ಇತ್ತೀಚೆಗೆ ಪ್ರಜ್ವಲ್ ರೇವಣ್ಣ ಅವರ ಟಿಕೆಟ್ ಸಂಬಂಧ ಕೇಳಲಾದ ಪ್ರಶ್ನೆಗೆ 'ಅವರಿಗೆ ಗೆಲ್ಲುವ ಶಕ್ತಿ ಇದ್ದಲ್ಲಿ ಖಂಡಿತ ಟಿಕೆಟ್ ನಿಡಲಾಗುವುದು' ಎಂದಿದ್ದರು. ಅದು ಅಲ್ಲದೆ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದ್ದು, ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನಿಡಿದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೂ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತು ಜೆಡಿಎಸ್ ಪಕ್ಷದಲ್ಲಿ ಹರಿದಾಡುತ್ತಿದೆ.