ನ್ಯಾಯ ಬೆಲೆ ಅಂಗಡಿಯಲ್ಲಿ ಮೈಸೂರು ಸ್ಯಾಂಡಲ್ ಸೋಪು
ಬೆಂಗಳೂರು, ಫೆಬ್ರವರಿ 27: ಅಕ್ರಮ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ನೂತನ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.
ಅರ್ಹರಲ್ಲದವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಯನ್ನು ಹಿಂತಿರುಗಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಅಷ್ಟರಲ್ಲಿ ಪಡಿತರ ಚೀಟಿ ವಾಪಸ್ ಮಾಡದ ಅನರ್ಹರಿಗೆ ದಂಡ ವಿಧಿಸಲಾಗುವುದು ಎಂದು ಗೋಪಾಲಯ್ಯ ಹೇಳಿದ್ದಾರೆ.
ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆ
ಅಕ್ರಮ ಪಡಿತರ ಚೀಟಿಗಳನ್ನು ಎರಡು ತಿಂಗಳ ಒಳಗೆ ವಾಪಸ್ ಮಾಡದಿದ್ದರೆ ಪಡಿತರ ಪಡೆದ ದಿನಾಂಕದಿಂದ ಇಂದಿನವರೆಗೆ ಪಡೆದ ಪಡಿತರದ ಪ್ರಮಾಣದ ದಂಡವನ್ನು ಪಾವತಿ ಮಾಡಬೇಕಾಗುತ್ತದೆ. ಎರಡು ತಿಂಗಳ ನಂತರ ಅನರ್ಹರು ಪಡಿತರ ಚೀಟಿ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗತ್ಯವಿಲ್ಲದವರು ಪಡಿತರವನ್ನು ಪಡೆಯಬಾರದು ಎಂದು ಮನವಿ ಮಾಡಿದ ಸಚಿವರು, ಹಸಿವಿನಿಂದ ಯಾರೂ ಇರಬಾರದು ಎಂಬ ಕಾರಣಕ್ಕೆ ಪಡಿತರ ವಿತರಿಸಲಾಗುತ್ತಿದೆ ಆದರೆ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡೆದು ಮಾರಾಟ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ ಎಂದು ಅವರು ಹೇಳಿದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಮಾರಾಟ ಮಾಡುವ ಚಿಂತನೆ ಇದೆ ಎಂದು ಘೊಷಿಸಿದ ಸಚಿವರು, ಮಾರ್ಚ್ 5ರಂದು ಮಂಡನೆಯಾಗುವ ರಾಜ್ಯ ಬಜೆಟ್ ನಂತರ ಅನ್ನಭಾಗ್ಯ ಯೋಜನೆಯಲ್ಲಾಗುವ ಬದಲಾವಣೆ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.
ಶ್ರೀಮಂತರು ಬಿಪಿಎಲ್ ಕಾರ್ಡ್ ತ್ಯಜಿಸಲಿ, ಇಲ್ಲಾ ಕಾನೂನು ಕ್ರಮ ಎದುರಿಸಲಿ
2019-20ನೇ ಸಾಲಿನಲ್ಲಿ ಜನವರಿ ಅಂತ್ಯದವರೆಗೂ 32,29,87,817 ಸತ್ಯಾಪನಾ ಶುಲ್ಕವನ್ನು ವಸೂಲಿ ಮಾಡಲಾಗಿದೆ. 43,842 ತಪಾಸಣೆ ಕೈಗೊಂಡಿದ್ದು, 17,883 ಮೊಕದ್ದಮೆ ಹೂಡಲಾಗಿದೆ. 4,72, 27,300 ಅಭಿಸಂಧಾನದ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಮಂಜುಳಾ ಉಪಸ್ಥಿತರಿದ್ದರು.