ಶಿಕ್ಷಣ ಸಚಿವರು ಹೇಳಿದ್ದ ಐಐಟಿ ಪ್ರೊಫೆಸರ್: ರೋಹಿತ್ ಚಕ್ರತೀರ್ಥ ಸ್ಪಷ್ಟನೆ
ಬೆಂಗಳೂರು, ಮೇ 27: ಪಠ್ಯ ಪುಸ್ತಕ ವಿವಾದ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿರುವ ಬೆನ್ನಲ್ಲೇ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ವಿಚಾರದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೀಡಿದ್ದ ಹೇಳಿಕೆ ಸುಳ್ಳೆಂದು ಸಾಬೀತಾಗಿದೆ.
ತಾನು ಐಐಟಿ ಉಪನ್ಯಾಸಕನಲ್ಲ ಎಂದು ಖುದ್ದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ. "ಈಗ ಸ್ವತಃ ಆತನೇ ನಾನು ಉಪನ್ಯಾಸಕನಲ್ಲ ಎಂದಿದ್ದಾನೆ. ಕನಿಷ್ಠ ನೈತಿಕತೆ ಇದ್ದರೆ ಸುಳ್ಳು ಸಚಿವ @BCNagesh_bjp ರಾಜೀನಾಮೆ ಕೊಡಬೇಕು"ಎಂದು ಕರ್ನಾಟಕ ಕಾಂಗ್ರೆಸ್ಸಿನ ಐಟಿ ಶೆಲ್ ಒತ್ತಾಯಿಸಿದೆ.
ವೈರಲ್ ವಿಡಿಯೋ: ರೋಹಿತ್ ಚಕ್ರತೀರ್ಥ ಐಐಟಿ ಪ್ರೊಫೆಸರ್ ಎಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್
"ನಾನು ಐಐಟಿ ಪ್ರೊಫೆಸರ್ ಅಲ್ಲ. ಐಐಟಿ-ಸಿಐಟಿಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೊಡುತ್ತೇನೆ"ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟ ಪಡಿಸಿದ್ದಾರೆ. "ಇಲ್ಲಿ ಕುಳಿತ ಯಾರಿಗೆ ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆ ಗೊತ್ತಿದೆ. ಅವರು ಪ್ರಾಧ್ಯಾಪಕರು, ಪ್ರೊಫೆಸರ್ ಆಗಿದ್ದವರು. ಐಐಟಿ ಪ್ರೊಫೆಸರ್ ಮತ್ತು ಸಿಇಟಿ ಪ್ರಾಧ್ಯಾಪಕ" ಎಂದು ಸಚಿವರು ಹೇಳಿದ್ದರು. ಸಚಿವರ ಈ ಹೇಳಿಕೆ ವ್ಯಾಪಕ ಟೀಕೆಗೆ ಒಳಗಾಗಿತ್ತು.
"ಸಚಿವರು ಮಾತಿನ ಓಗದಲ್ಲಿ ನಾನು ಪ್ರೊಫೆಸರ್ ಎಂದು ಹೇಳಿರಬಹುದು. ಆದರೆ, ನಾನು ಉಪನ್ಯಾಸಕನಲ್ಲ, ಪ್ರಮುಖವಾಗಿ ಗಣಿತ ಭಾಗ. ನಾಲ್ಕು ವರ್ಷ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ, ಹವ್ಯಾಸಿ ಬರಹಗಾರ,' ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.
"ಇತಿಹಾಸ ಓದದ, ಅರಿಯದ ಅಯೋಗ್ಯನೊಬ್ಬ ನಾಡಿನ ಮಕ್ಕಳ ಕಲಿಕೆಯನ್ನು ನಿರ್ಧರಿಸುತ್ತಿರುವುದು ದುರಂತ. 'ಅರ್ಹತೆ' ಇಲ್ಲದ ವ್ಯಕ್ತಿಯನ್ನ ಸಮರ್ಥಿಸಲು IIT& CET ಪ್ರೊಫೆಸರ್ ಎಂಬ ಸುಳ್ಳಿನ ಕಿರೀಟ ತೊಡಿಸಿದ್ದ ಶಿಕ್ಷಣ ಸಚಿವರಿಗೆ ನಾಚಿಕೆ ಆಗಬೇಕು"ಎಂದು ಕೆಪಿಸಿಸಿ ಕಿಡಿಕಾರಿದೆ.
ಮಾಧ್ಯಮ ಗೋಷ್ಠಿಯಲ್ಲಿ ಮರುಪ್ರಶ್ನೆ ಎದುರಾದಾಗ, "ಮಾತಿನ ಬರದಲ್ಲಿ ಐಐಟಿ ಪ್ರೊಫೆಸರ್ ಎಂಬುದನ್ನು ಹೇಳಿದ್ದೇನೆ. ರೋಹಿತ್ ಚಕ್ರತೀರ್ಥರವರು ಅತಿಥಿ ಉಪನ್ಯಾಸಕರಾಗಿ, ಬರಹಗಾರರಾಗಿ, ಚಿಂತಕರಾಗಿ ಗುರುತಿಸಿಕೊಂಡಿದ್ದಾರೆ'' ಎಂದು ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆಯನ್ನು ನೀಡಿದ್ದರು.