ಬೆಂಗಳೂರು: ಕನ್ನಡ ಕಡ್ಡಾಯ ಆದೇಶ ಬೆನ್ನಲ್ಲೆ ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ
ಬೆಂಗಳೂರು ಸೆಪ್ಟಂಬರ್ 09: ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಇಲಾಖೆಗಳಿಂದ ನಡೆಯುವ ಪ್ರತಿ ಸಮಾರಂಭದಲ್ಲಿ ಕನ್ನಡ ಕಣೆಗಣಿಸುತ್ತಿರುವ ಪ್ರಸಂಗ ಮತ್ತೆ ಮುಂದುವರೆದಿದೆ.
ಬೆಂಗಳೂರಿನಲ್ಲಿ ಗುರುವಾರ ಉದ್ಘಾಟನೆಗೊಂಡ ಕೇಂದ್ರ ರಸ್ತೆ ಸಾರಿಗೆ ಹಾಗೂ ಭೂ ಹೆದ್ದಾರಿ ಇಲಾಖೆ ಆಯೋಜಿಸಿರುವ 'ಮಂಥನ ರಾಷ್ಟ್ರೀಯ ವಿಚಾರ ಸಂಕಿರಣ' ಕಾರ್ಯಕ್ರಮದಲ್ಲಿ ಈ ನೆಲದ ಭಾಷೆ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಕೇಂದ್ರ ಸಚಿವರ ಉಪಸ್ಥಿತಿ ಇರುವ ಸಮಾರಂಭದಲ್ಲಿ ಪ್ರಾದೇಶಿಕ ಭಾಷೆ ಕಡೆಗಣಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ್ ಆಗ್ರಹಿಸಿದ್ದಾರೆ.
ಬೆಂಗಳೂರು ವಿವಿ ಆವರಣದಲ್ಲಿ ದೇವಸ್ಥಾನ: ವಿದ್ಯಾರ್ಥಿಗಳ ಆಕ್ರೋಶ
ಈ ಸಂಬಂಧ ಟಿ.ಎಸ್. ನಾಗಾಭರಣ್ ಅವರು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಲೋಕೋಪಯೋಗಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯಭಾಷಾ ಅಧಿನಿಯಮ 1963ರ ಅನ್ವಯ ಕನ್ನಡ ಭಾಷೆಯು ಕರ್ನಾಟಕ ರಾಜ್ಯದ ರಾಜ್ಯಭಾಷೆ (ಆಡಳಿತ ಭಾಷೆ) ಆಗಿದೆ. ಕನ್ನಡವನ್ನು ರಾಜ್ಯದಾದ್ಯಂತ ಆಡಳಿತ ಭಾಷೆಯಾಗಿ ಕಡ್ಡಾಯವಾಗಿ ಎಲ್ಲ ಹಂತದಲ್ಲೂ ಜಾರಿಗೆ ತರಲಾಗಿದೆ. ಸರ್ಕಾರದ ಎಲ್ಲಾ ಇಲಾಖೆಗಳು ಆಡಳಿತದಲ್ಲಿ ಕನ್ನಡವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವಂತೆ ಸರ್ಕಾರ ಆದೇಶಿಸಿದೆ. ಹೀಗಿದ್ದರೂ ಸರ್ಕಾರ ಕೇಂದ್ರ ಸಚಿವರ ಉಪಸ್ಥಿತಿಯ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಕಡ್ಡಾಯ ಆದೇಶದ ಬೆನ್ನಲ್ಲೇ ಉಲ್ಲಂಘನೆ
ರಾಜ್ಯ ಸರ್ಕಾರ ಇದೇ ತಿಂಗಳ ಸೆಪ್ಟಂಬರ್ 6ರಂದು ಸುತ್ತೋಲೆ ಹೊರಡಿಸಿದೆ. ಅದರನ್ವಯ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಈ ನೆಲದಲ್ಲಿ ನಡೆಯುವ ಕಾರ್ಯಕ್ರಮಗಳ ಆಯೋಜನೆಯಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸುವಂತೆ ಸೂಚಿಸಲಾಗಿದೆ. ಇದಲ್ಲದೆ ಈ ಹಿಂದೆಯೂ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಹ ಕನ್ನಡಕ್ಕೆ ಪ್ರಥಮ ಪ್ರಾಧಾನ್ಯತೆ ನೀಡುವಂತೆ ಪತ್ರ ಬರೆಯಲಾಗಿತ್ತು ಎಂದರು.
ಕರ್ನಾಟಕದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರ ಆದೇಶ ಹೊರಡಿಸಿದ 2 ದಿನದಲ್ಲೇ ಕನ್ನಡ ಕಡೆಗಣನೆ ಆಗಿದೆ. ಲೋಕೋಪಯೋಗಿ ಇಲಾಖೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕನ್ನಡ ಮರೆಯಾಗಿದ್ದರ ಬಗ್ಗೆ ಮಾಧ್ಯಮಗಳು, ಸಾರ್ವಜನಿಕರು ಟ್ವಿಟ್ಟರ್ ಮೂಲಕ ಪ್ರಾಧಿಕಾರಕ್ಕೆ ದೂರು ಸಲ್ಲಿಸುತ್ತಿದ್ದಾರೆ.
ಆದ್ದರಿಂದ ರಾಜ್ಯದ ಆಡಳಿತ ಭಾಷೆ ಕನ್ನಡವನ್ನು ಕಡೆಗಣಿಸಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಬೇಕು. ಅಲ್ಲದೇ ಕನ್ನಡ ನಿರ್ಲಕ್ಷ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪತ್ರದ ಮೂಲಕ ತಿಳಿಸಿದ್ದಾರೆ.
ಕೇಂದ್ರ ನಾಯಕರು ಪಾಲ್ಗೊಳ್ಳುವ ಸಮಾರಂಭಗಳಲ್ಲಿ ಕನ್ನಡ ಕಡೆಗಣನೆ ಇದೇ ಮೊದಲೇನಲ್ಲ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರು ಬೆಂಗಳೂರಿನಲ್ಲಿ ಪಾಲ್ಗೊಂಡಿದ್ದ 'ಸಂಕಲ್ಪ ಸೇ ಸಿದ್ಧಿ' ಕಾರ್ಯಕ್ರಮ, ಪ್ರಧಾನಿ ಮೋದಿ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮಗಳಲ್ಲಿ ಹೀಗೆ ಆಗಿತ್ತು. ಅಲ್ಲಿ ಸಹ ಹಿಂದಿ ಭಾಷೆ ರಾರಾಜಿಸಿತ್ತು. ಇದಕ್ಕ ವ್ಯಾಪಕವಾಗಿ ಟೀಕೆಗಳು ಕೇಳಿ ಬಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ನೆಲದ ಭಾಷೆಯ ನಿರ್ಲಕ್ಷ್ಯ ಮಾತ್ರ ಮುಂದುವರಿದಿದೆ ಎಂದರೆ ತಪ್ಪಾಗಲಾರದು.
ಕೇಂದ್ರ ನಾಯಕರ ಕಾರ್ಯಕ್ರಮಗಳಲ್ಲಿ ಈ ನಾಡಿನ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಈ ಬಗ್ಗೆ ಗಮನ ಹರಿಸದಿರುವುದು ಕನ್ನಡಿಗರಲ್ಲಿ ಬೇಸರ ಮೂಡಿಸಿದೆ.