3 ನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ!
ಬೆಂಗಳೂರು, ಮಾ. 7: 'ಪ್ರಪಂಚದಲ್ಲಿ 3 ನೇ ಮಹಾಯುದ್ಧವೇನಾದರೂ ನಡೆದರೆ ಅದು ನೀರಿಗಾಗಿಯೇ ಹೊರತು ಮತ್ತೇನಕ್ಕಲ್ಲ. ನೀರು ಸಿಗುತ್ತದೆ ಎಂಬ ಕಾರಣಕ್ಕಾಗಿ ನಾವು ಮನಸೋ ಇಚ್ಛೆ ಬಳಕೆ ಮಾಡುತ್ತಿದ್ದೇವೆ. ನೀರಿನ ಸಮಸ್ಯೆ ಉಂಟಾಗಲು ಇದು ಮುಖ್ಯ ಕಾರಣವಾಗಿದೆ' ಹೀಗೆಂದು ಆತಂಕ ವ್ಯಕ್ತಪಡಿಸಿದವರು ಕೃಷಿ ಸಚಿವ ಕೃಷ್ಣಬೈರೇಗೌಡ.
ನೀರಾವರಿ ಇಲಾಖೆ ಹಮ್ಮಿಕೊಂಡಿದ್ದ 'ಸೂಕ್ಷ್ಮ ನೀರಾವರಿ ಮುನ್ನೋಟ-ಒಂದು ಹೆಜ್ಜೆ ಮುಂದೆ' ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಎರಡು ಮಹಾಯುದ್ಧಗಳು ಬೇರೆ ಬೇರೆ ಕಾರಣಕ್ಕಾಗಿ ನಡೆದವು. ಆದರೆ, ಮುಂದೆ 3 ನೇ ಮಹಾಯುದ್ಧ ನಡೆದರೂ ಅದು ನೀರಿಗಾಗಿಯೇ ಎಂದು ಹೇಳಿದರು.[ಬೋರ್ ವೆಲ್ ನೀರಿಗೂ ಬಂತು ಮೀಟರ್]
ವೈಜ್ಞಾನಿಕ ತಂತ್ರಜ್ಞಾನ ಬಳಸಿ ಹನಿ ನೀರಾವರಿ ವಿಧಾನ ಅಳವಡಿಕೆ ಮಾಡಿಕೊಳ್ಳಬೇಕು. ಇದಕ್ಕೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.
ಬೃಹತ್ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸ್ಥಾಪಿಸುವವರು ಕಡ್ಡಾಯವಾಗಿ ನೀರಿನ ಪುನರ್ಬಳಕೆ ಮಾಡಿಕೊಳ್ಳಬೇಕೆಂಬ ಕಾನೂನು ಜಾರಿ ಮಾಡಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಜನರಲ್ಲಿ ಮಾಧ್ಯಮಗಳು, ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ನೀರಿನ ಬಳಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಮಕ್ಕಳಲ್ಲಿಯೂ ಈ ಬಗ್ಗೆ ಹೆಚ್ಚಿನ ತಿಳಿವಳಿಕೆ ಮೂಡಿಸುವ ಕೆಲಸವಾಗಬೇಕು ಎಂದು ಹೇಳಿದರು.[ಬೆಂಗಳೂರು ನಗರಕ್ಕೆ ಬೇಸಿಗೆಯಲ್ಲಿ ನೀರಿನ ಕೊರತೆ ಇಲ್ಲ]
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯೋಗದ ಆಯುಕ್ತೆ ಲತಾ ಕೃಷ್ಣರಾವ್ , ರಾಜಸ್ಥಾನದ ಅಳ್ವಾರ್ ತರುಣ್ ಭಾರತ್ ಸಂಘದ ಅಧ್ಯಕ್ಷ ರಾಜೇಂದ್ರಸಿಂಗ್, ಕೃಷಿ ಇಲಾಖೆ ಕಾರ್ಯದರ್ಶಿ ಉಮಮಹದೇವನ್ ಮತ್ತಿತರರು ಹಾಜರಿದ್ದರು.