ರಾಜ್ಯ ಸಚಿವ ಸಂಪುಟ ವಿಸ್ತರಣೆ? ಪುನಾರಚನೆ? ಅಥವಾ?
ಬೆಂಗಳೂರು, ಜು. 29: ವಿಧಾನ ಪರಿಷತ್ ಚುನಾವಣೆ, ಪರಿಷತ್ತಿನ 5 ಸ್ಥಾನಗಳಿಗೆ ನಾಮನಿರ್ದೇಶನ ಬಳಿಕ ಇದೀಗ ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಚರ್ಚೆ ಬಿಜೆಪಿಯಲ್ಲಿ ಭರ್ಜರಿಯಾಗಿಯೆ ನಡೆಯುತ್ತಿದೆ.
Recommended Video
ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಬಳಿಕ ಆಗಬಹುದಾದ ಸಂಭಾವ್ಯ ಅಸಮಾಧಾನವನ್ನು ತಣಿಸಲು ಸಿಎಂ ಯಡಿಯೂರಪ್ಪ ಅವರು ಈಗಾಗಲೇ ಪ್ರಯತ್ನ ಶುರು ಮಾಡಿದ್ದಾರೆ. ಮೊದಲ ಪ್ರಯತ್ನವಾಗಿ ಸಂಪುಟ ವಿಸ್ತರಣೆಗೂ ಮೊದಲೆ ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಮಾಡಿ ಆದೇಶ ಮಾಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ವರ್ಷ ತುಂಬಿದ ಬೆನ್ನಲ್ಲೆ ಯಡಿಯೂರಪ್ಪ ಅವರು ಶಾಸಕರಿಗೆ ಕೊಡುಗೆ ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ಸಿಎಂ ಯಡಿಯೂರಪ್ಪ ಅವರು ಹೈಕಮಾಂಡ್ ಭೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರ ಹೈಕಮಾಂಡ್ ಭೇಟಿ ಮತ್ತೊಂದು ಮುನ್ಸೂಚನೆ ಕೊಟ್ಟಿದೆ.
ಸಂಪುಟ ವಿಸ್ತರಣೆ/ಪುನಾರಚನೆ
ಇದೇ ಆಗಷ್ಟ್ ತಿಂಗಳಿನಲ್ಲಿ ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಸೂಚಿಸಿದೆ ಎಂಬ ಮಾಹಿತಿಯಿದೆ. ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆ ಮಾಡುವುದೋ ಎಂಬುದು ರಹಸ್ಯವಾಗಿದೆ.
ಸರ್ಕಾರಕ್ಕೆ ವರ್ಷ: ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಸಜ್ಜು?
ಸದ್ಯದ ಲಾಕ್ಡೌನ್ ಪರಿಸ್ಥಿತಿಯು ರಾಜ್ಯದ ಸಚಿವರಿಗೆ ಅಗ್ನಿಪರೀಕ್ಷೆಯನ್ನು ತಂದಿಟ್ಟಿದೆ. ಮೊದಲು ಸಂಪುಟ ವಿಸ್ತರಣೆಗೆ ಸೂಚನೆ ಕೊಟ್ಟಿದ್ದ ಹೈಕಮಾಂಡ್ ಇದೀಗ ಸಂಪುಟ ಪುನಾರಚನೆಗೆ ಮುಂದಾಗಿದೆ ಎಂಬ ಮಾಹಿಯಿದೆ. ಹೀಗಾಗಿ ಸಂಪುಟ ಪುನಾರಚನೆ ಆದಲ್ಲಿ ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ದಿಢೀರ್ ಬೆಳವಣಿಗೆಗಳು ಖಚಿತ ಎನ್ನಲಾಗುತ್ತಿದೆ.
ಡಿಸಿಎಂ-ಹೈಕಮಾಂಡ್ ಭೇಟಿ
ಸರ್ಕಾರಕ್ಕೆ ಒಂದು ವರ್ಷ ತುಂಬಿದ ಬೆನ್ನಲ್ಲೆ ರಾಜ್ಯ ಹಾಗೂ ದೆಹಲಿ ಮಟ್ಟದಲ್ಲಿ ಬಿಜೆಪಿಯಲ್ಲಿ ಹಲವು ಬೆಳವಣಿಗೆಗಳಾಗಿವೆ. ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಬಳಿಕ ಸಿಎಂ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಅದರ ಬೆನ್ನಲ್ಲೆ ಡಿಸಿಎಂ ಲಕ್ಷ್ಮಣ ಸವದಿ ಅವರೂ ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ಮಾಡಿರುವುದು ಕುತೂಹಲ ಮೂಡಿಸಿದೆ.
ಅದಾದ ಎರಡು ದಿನಗಳಲ್ಲಿ ದೆಹಲಿಗೆ ತೆರಳಿ ಡಿಸಿಎಂ ಲಕ್ಷ್ಮಣ ಸವದಿ ಅವರು ಹೈಕಮಾಂಡ್ ಭೇಟಿ ಮಾಡಿದ್ದಾರೆ. ಅವರ ಬೆಂಬಲಿಗರು ಬೆಳಗಾವಿಯಲ್ಲಿ ಮುಂದಿನ ಸಿಎಂ ಲಕ್ಷ್ಮಣ ಸವದಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹರ್ಷ ಹಂಚಿಕೊಂಡಿದ್ದಾರೆ. ಏನೂ ಬೆಳವಣಿಗೆ ಇಲ್ಲದೆಯೆ ಇವೆಲ್ಲ ಆಗುತ್ತಿವೆಯಾ ಎಂಬುದು ರಾಜಕೀಯ ವಲಯದ ಪ್ರಶ್ನೆ.
ನಿಗೂಢ ನಡೆ
ಸಂಪುಟ ವಿಸ್ತರಣೆ, ಪುನಾರಚನೆ ಅಥವಾ ನಾಯಕತ್ವ ಬದಲಾವಣೆ ಈ ಕುರಿತು ಹೈಕಮಾಂಡ್ ನಡೆ ಮಾತ್ರ ನಿಗೂಢವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ 3 ಡಿಸಿಎಂ ಪೋಸ್ಟ್ಗಳನ್ನು ಸೃಷ್ಟಿಸಲಾಗಿತ್ತು. ನಂತರ ಈಗ ನಿಗಮ-ಮಂಡಳಿಗಳಿಗೆ ನೇಮಕ ವಿಚಾರದಲ್ಲಿಯೂ ಬಿಜೆಪಿ ಹೈಕಮಾಂಡ್ ನಡೆ ನಿಗೂಢವಾಗಿತ್ತು. ಅಷ್ಟೇ ಅಲ್ಲ ವಿಧಾನ ಪರಿಷತ್ತಿಗೆ ನಾಮಕರಣ ಇರಬಹುದು, ರಾಜ್ಯಸಭಾ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಇರಬಹದು, ಎಲ್ಲವೂ ಅತ್ಯಂತ ರಹಸ್ಯವಾಗಿ ತೆಗೆದುಕೊಂಡ ನಿರ್ಧಾರಗಳೇ.
ನಿಗಮ-ಮಂಡಳಿಗಳಿಗೆ ನೇಮಕದ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ!
ಹೀಗಾಗಿ ರಾಜ್ಯದಲ್ಲಿ ಸಂಪುಟ ಪುನಾರಚನೆ ಆಗುತ್ತದೆಯೋ? ಅಥವಾ ಬರಿ ವಿಸ್ತರಣೆ ಆಗುತ್ತದೆಯೋ ಇಲ್ಲಾ ನಾಯಕತ್ವ ಬದಲಾವಣೆ ಆಗುತ್ತದೆಯೊ ಎಂಬುದು ನಿಗೂಢ ವಾಗಿದೆ. ಹೀಗಾಗಿ ಆಗಷ್ಟ್ನಲ್ಲಿ ರಾಜ್ಯ ಸಂಪುಟ ವಿಸ್ತರಣೆ ಆಗದೆ ಇದ್ದರೆ, ಅಕ್ಟೋಬರ್ನಲ್ಲಿ ಮಹತ್ವದ ಬದಲಾವಣೆ ರಾಜ್ಯದಲ್ಲಿ ಆಗಲಿದೆ ಎಂದು ಬಿಜೆಪಿ ಹೈಕಮಾಂಡ್ ನಡೆಯನ್ನು ವಿಶ್ಲೇಷಣೆ ಮಾಡಲಾಗುತ್ತಿದೆ.
ಸಚಿವ ಸ್ಥಾನಗಳು
ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟದ 34 ಸಚಿವ ಸ್ಥಾನಗಳ ಪೈಕಿ 6 ಸ್ಥಾನಗಳು ಖಾಲಿಯಿದ್ದು, ಸದ್ಯ 28 ಸಚಿವರ ಬಲವನ್ನು ಸಂಪುಟ ಹೊಂದಿದೆ. ಉಪ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದ ಶಾಸಕರಲ್ಲಿ 10 ಜನರಿಗೆ ಮಂತ್ರಿಸ್ಥಾನ ಕೊಡುವ ಮೂಲಕ ಸಂಪುಟ ವಿಸ್ತರಣೆಯನ್ನು ಕಳೆದ ಬಾರಿ ಮಾಡಲಾಗಿತ್ತು. ಇದೀಗ ಉಳಿದ 6 ಸ್ಥಾನಗಳಿಗೆ ಬಿಜೆಪಿ ಹಿರಿಯ ಶಾಸಕರೂ ಸೇರಿದಂತೆ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಎಚ್. ವಿಶ್ವನಾಥ್ ಅವರು ಒತ್ತಡ ಹಾಕಿದ್ದಾರೆ. ಸಂಪುಟ ಪುನಾರಚನೆ ಮಾಡಲು ಹೈಕಮಾಂಡ್ ಮುಂದಾದರೆ, ಖಾಲಿ ಇರುವ 6 ಸ್ಥಾನಗಳೊಂದಿಗೆ ಕಳಪೆ ಸಾಧನೆ ಹೊಂದಿರುವ 4 ಜನರನ್ನು ಮಂತ್ರಿ ಮಂಡಲದಿಂದ ಕೈಬಿಡಲು ತೀರ್ಮಾನ ಮಾಡಲಾಗಿದೆ.
ನಾಲ್ವರು ಸಚಿವರಿಂದ ರಾಜೀನಾಮೆ ಪಡೆದರೆ ಒಟ್ಟು 10 ಮಂತ್ರಿ ಸ್ಥಾನಗಳು ಖಾಲಿ ಆದಂತಾಗುತ್ತದೆ. ಅವುಗಳಲ್ಲಿ 8 ಜನರಿಗೆ ಮಂತ್ರಿ ಸ್ಥಾನ ಹಂಚಿಕೆ ಮಾಡಿ ಉಳಿದ 2 ಮಂತ್ರಿ ಪದವಿಗಳನ್ನು ಕಾಯ್ದಿರಿಸಲು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ.