"ಸಂಘ ಪರಿವಾರ ಅಧಿಕಾರಕ್ಕೇರಿದರೆ ಅದು ಜನಗಳಲ್ಲ, ದನಗಳ ಸರ್ಕಾರ"
ಬೆಂಗಳೂರು, ಅಕ್ಟೋಬರ್ 26: "ಒಂದೊಮ್ಮೆ ದೇಶದಲ್ಲಿ ಇನ್ನೊಂದು ಅವಧಿಗೆ ಸಂಘ ಪರಿವಾರ ಅಧಿಕಾರಕ್ಕೆ ಬಂದರೆ ಅದು ಜನಗಳ ಸರ್ಕಾರವಲ್ಲ, ದನಗಳ ಸರ್ಕಾರವಾಗಿರಲಿದೆ," ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಹಿಂದುಳಿದ ವರ್ಗಗಳ ಒಳವರ್ಗೀಕರಣ ಮತ್ತು ಸಾಮಾಜಿಕ ನ್ಯಾಯ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಡಿ.ದೇವರಾಜ ಅರಸು ಸಂಶೋಧನಾ ಸಂಸ್ಥೆ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಬಿಜೆಪಿ ಗೋ ರಾಜಕೀಯದ ಬಗ್ಗೆ ಆತಂಕ ವ್ಯಕ್ತಪಡಿಸಿದ ರವಿವರ್ಮ ಕುಮಾರ್, "ಈಗಾಗಲೇ ಉತ್ತರ ಭಾರತದಲ್ಲಿ ದನಗಳಿಗೆ ಹಾಸ್ಟೆಲ್ ಆರಂಭಿಸಿದ್ದಾರೆ. ಮುಂದೊಂದು ದಿನ ವಿದ್ಯಾರ್ಥಿಗಳನ್ನೇ ಹಾಸ್ಟೆಲ್ ಗಳಿಂದ ಹೊರ ಹಾಕಿ, ದನಗಳಿಗೆ ಆಶ್ರಯ ನೀಡುವ ಅಪಾಯವಿದೆ. ಈ ಬಗ್ಗೆ ದೇಶದ ಜನರು ಎಚ್ಚರಿಕೆಯಿಂದರಬೇಕು," ಎಂದು ಹೇಳಿದರು.
ಒಳಮೀಸಲಾತಿಗೆ ಒತ್ತಾಯ
ಒಳಮೀಸಲಾತಿ ವರ್ಗೀಕರಣಕ್ಕೆ ಆಗ್ರಹಿಸಿದ ರವಿವರ್ಮ ಕುಮಾರ್, ಹಿಂದುಳಿದ ವರ್ಗ ಮತ್ತು ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಒಳಮೀಸಲಾತಿ ವರ್ಗೀಕರಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಅವರು ಸ್ವಾಗತಿಸಿದರು.
ಇನ್ನು ತಮ್ಮ ಭಾಷಣದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡುವಂತೆಯೂ ಅವರು ಆಗ್ರಹಿಸಿದರು. ತಕ್ಷಣವೇ ಆರ್ಥಿಕ, ಸಾಮಾಜಿಕ ಸಮೀಕ್ಷಾ ವರದಿಯನ್ನು ಬಹಿರಂಗಪಡಿಸಬೇಕು. ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಈ ಸಮೀಕ್ಷಾ ವರದಿ ಬಿಡುಗಡೆಯಾಗದಿದ್ದಲ್ಲಿ ಅದು ಹಿಂದುಳಿದ ವರ್ಗಗಳಿಗೆ ಮಾಡಿದ ದ್ರೋಹ ಎಂದು ವಿಶ್ಲೇಷಿಸಿದರು.