ಬಿಜೆಪಿಯ ಆಪರೇಷನ್ ಸಕ್ಸಸ್ ಆದರೆ ಅರವಿಂದ ಲಿಂಬಾವಳಿ ಮುಂಚೂಣಿಗೆ
ರಾಜ್ಯದಲ್ಲಿ ಮೈತ್ರಿ ಸರಕಾರ ಕೆಡವಿ, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಇದಕ್ಕೂ ಮುನ್ನ ಮಾಡಿದ್ದ ಮೂರ್ನಾಲ್ಕು ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಈ ಸಲ ಹಾಗಾಗುವಂತೆ ಕಾಣುತ್ತಿಲ್ಲ. ಹಾಗಂತ ಇದನ್ನು 'ಆಪರೇಷನ್ ಕಮಲ' ಎಂದು ಕರೆಯುವಂತೆಯೂ ಇಲ್ಲ. ಏಕೆಂದರೆ, ಈಗಿನ ಸ್ವರೂಪವೇ ಬೇರೆ ಥರ ಇದೆ.
ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಹೆಸರು ಪದೇ ಪದೇ ಕೇಳಿಬರುತ್ತಿದೆ. ಬಿಜೆಪಿಯ ಕೇಂದ್ರ ವರಿಷ್ಠರು ಅರವಿಂದ ಲಿಂಬಾವಳಿ ಮೇಲೆ ವಿಶ್ವಾಸ ತೋರುತ್ತಿದ್ದಾರೆ. ದೊಡ್ಡ ಹುದ್ದೆಯೊಂದರ ಜವಾಬ್ದಾರಿ ನೀಡುವ ಇಷಾರೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಅದೆಂಥ ಜವಾಬ್ದಾರಿ, ಅದೇನು ಹುದ್ದೆ ಎಂಬ ಬಗ್ಗೆ ಹೊರಗೆ ಎಲ್ಲೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.
ಸರಕಾರ ರಚನೆಯಾದರೆ ಯಡಿಯೂರಪ್ಪನವರೇ ಮುಖ್ಯಮಂತ್ರಿ : ಡಿವಿ ಸದಾನಂದ ಗೌಡ
ಈ ಹಿಂದಿನ ಪ್ರಯತ್ನಗಳಲ್ಲಿ ಯಡಿಯೂರಪ್ಪ ಅವರು ತಮ್ಮ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವಲ್ಲಿ ಕೊನೆ ಹಂತದಲ್ಲಿ ವಿಫಲರಾಗಿದ್ದರಿಂದ ಈ ಸಲ ಹೊಸ ಟೀಮಿನ ಜತೆ ಆಟಕ್ಕೆ ಇಳಿದ ಹೈಕಮಾಂಡ್, ಅರವಿಂದ ಲಿಂಬಾವಳಿ ಅವರಿಗೆ ಜವಾಬ್ದಾರಿ ವಹಿಸಿತ್ತು ಎನ್ನಲಾಗುತ್ತಿದೆ.
ಅದೇ ಕಾರಣಕ್ಕೆ ಬಿಜೆಪಿಯ ಯಾವ ನಾಯಕರೂ ಹೇಳಿಕೆಗಳನ್ನು ನೀಡಬಾರದು ಎಂಬ ಬಗ್ಗೆ ಹುಕುಂ ಹೊರಡಿಸಲಾಗಿತ್ತು. ಮಾಧ್ಯಮದವರು ಶನಿವಾರ ನಡೆದ ಬೆಳವಣಿಗೆ ಬಗ್ಗೆ ಮಾಧ್ಯಮದವರು ಕೇಳಿದಾಗ ಯಡಿಯೂರಪ್ಪನವರು, ನನಗೆ ಈ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರೆ ಹೊರತು ಮಾತು ಬೆಳೆಸಲಿಲ್ಲ.
ಈಗಿರುವ ಪ್ರಶ್ನೆ ಏನೆಂದರೆ, ಬಿಜೆಪಿಯೇ ಸರಕಾರವನ್ನು ರಚನೆ ಮಾಡುತ್ತದೆಯೆ ಅಥವಾ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿ, ಆ ನಂತರ ಚುನಾವಣೆಯನ್ನು ಎದುರಿಸುತ್ತದೆಯೇ ಎಂಬ ಪ್ರಶ್ನೆ ಇದೆ.