ದುಡಿಯುವ ಶಕ್ತಿ ಇರುವ ಪತಿಗೆ ಕಾಯಂ ಜೀವನಾಂಶ ಕೇಳುವಂತಿಲ್ಲ-ಹೈಕೋರ್ಟ್
ಬೆಂಗಳೂರು, ಜು.12: ರಟ್ಟೆಯಲ್ಲಿ ಶಕ್ತಿ ಇದ್ದು ದುಡಿದು ಸಂಪಾದಿಸುವ ಸಾಮರ್ಥ್ಯವಿರುವ ಪತಿಗೆ ಪತ್ನಿಯಿಂದ ಕಾಯಂ ಜೀವನಾಂಶ ಕೇಳಲು ಅವಕಾಶವಿಲ್ಲಎಂದು ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣದ ವಿವರಗಳನ್ನು ಗಮನಿಸಿದ ಬಳಿಕ ಪತ್ನಿಯಿಂದ ಕಾಯಂ ಜೀವನಾಂಶ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿ ಈ ಆದೇಶ ನೀಡಿದೆ.
ಉಡುಪಿಯ ಬಡನಿಡಿಯೂರು ಗ್ರಾಮದ ವ್ಯಕ್ತಿಯೊಬ್ಬರು ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿ ಪತ್ನಿಯಿಂದ ಜೀವನಾಂಶ ಕೋರಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಜೆ.ಎಂ. ಖಾಜಿ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಸಹಕಾರ ಸಂಘವೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ನಿ 15 ವರ್ಷದ ಮಗನನ್ನೂ ನೋಡಿಕೊಳ್ಳುತ್ತಿದ್ದಾರೆ. ಮಗನ ವಿದ್ಯಾಭ್ಯಾಸಕ್ಕೆ ಸಾಕಷ್ಟು ಹಣದ ಅಗತ್ಯವಿದ್ದು, ಈ ಎಲ್ಲ ಹೊರೆಯೂ ಆಕೆಯ ಮೇಲಿದೆ. ಹಾಗಾಗಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿರುವ ಪತಿ ಸಂಪಾದನೆಯ ಶಕ್ತಿ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಆದ್ದರಿಂದ, ಅವರಿಗೆ ಶಾಶ್ವತ ಜೀವನಾಂಶ ನಿರಾಕರಿಸಿರುವ ಕೌಟುಂಬಿಕ ನ್ಯಾಯಾಲಯದ ಕ್ರಮ ಸರಿಯಾಗಿಯೇ ಇದೆ ಎಂದು ಹೇಳಿದೆ.
ಶಾಶ್ವತ ಜೀವನಾಂಶ ಕೋರಿ ಅರ್ಜಿ ಸಲ್ಲಿಕೆಯಾದಾಗ ಎರಡೂ ಕಡೆಯವರ ಸ್ಥಿತಿಗತಿ, ಸತಿ ಅಥವಾ ಪತಿಯ ಅಗತ್ಯತೆಗಳು ಹಾಗೂ ಜೀವನಾಂಶ ಕೋರಿದವರ ಆದಾಯ ಮತ್ತು ಆಸ್ತಿಯನ್ನು ಪರಿಗಣಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ಪಾಟಿ ಸವಾಲಿನ ಸಂದರ್ಭದಲ್ಲಿ, ಪಿತ್ರಾರ್ಜಿತ ಜಮೀನು ಹಾಗೂ ಸದ್ಯ ವಾಸವಿರುವ ಮನೆಯಲ್ಲಿ ತಾವು ಪಾಲು ಹೊಂದಿರುವುದಾಗಿ ಪತಿಯೇ ಒಪ್ಪಿಕೊಂಡಿದ್ದಾರೆ, ಹಾಗಾಗಿ ಕಾಯಂ ಜೀವನಾಂಶಕ್ಕೆ ಅರ್ಹರಲ್ಲ ಎಂದು ಹೇಳಿದೆ
ಅರ್ಜಿದಾರರ ವಕೀಲರು, ಪ್ರತಿವಾದಿ ಪತ್ನಿ ಸಹಕಾರ ಸಂಘವೊಂದರಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಮೇಲ್ಮನವಿದಾರರು ಈಗ ಕೆಲಸ ಕಳೆದುಕೊಂಡಿದ್ದು, ಜೀವನ ನಿರ್ವಹಣೆಗೆ ಯಾವುದೇ ಆದಾಯವಿಲ್ಲದಂತಾಗಿದೆ ಎಂದು ಹೇಳಿದ್ದರು.
ಪತ್ನಿಯ ಪರ ವಕೀಲರು, ಬ್ರಹ್ಮಾವರದ ಸಹಕಾರ ಸಂಘದಲ್ಲಿಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ಮಹಿಳೆ ಮಾಸಿಕ 8 ಸಾವಿರ ವೇತನ ಪಡೆಯುತ್ತಿದ್ದು, 15 ವರ್ಷದ ಮಗನನ್ನೂ ಆ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಜೀವನಾಂಶ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಪ್ರಕರಣದ ವಿವರ: ದಂಪತಿ 1993ರ ಮಾ.25ರಂದು ಮದುವೆಯಾಗಿದ್ದರು. ಪತ್ನಿ ಮಗುವಿಗೆ ಜನ್ಮ ನೀಡುವ ಮೊದಲೇ 1994ರ ಫೆಬ್ರವರಿಯಲ್ಲಿ ಪತಿಯ ಮನೆ ತೊರೆದು ಹೋಗಿದ್ದರು. ಮಗು ಹುಟ್ಟಿದ ನಂತರ ಹಲವು ವರ್ಷಗಳೇ ಕಳೆದರೂ ಆಕೆ ಗಂಡನ ಮನೆಗೆ ತೆರಳಿರಲಿಲ್ಲ. ಇದರಿಂದ, ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಪತಿ ಅರ್ಜಿ ಸಲ್ಲಿಸಿದ್ದರು.
Recommended Video
ಜತೆಗೆ, ಹಿಂದು ವಿವಾಹ ಕಾಯ್ದೆಯ ಸೆಕ್ಷನ್ 25ರ ಅಡಿ ಶಾಶ್ವತ ಜೀವನಾಂಶ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ದಂಪತಿಗೆ ವಿಚ್ಛೇದನ ನೀಡಿ 2015ರ ಆ.19ರಂದು ಆದೇಶಿಸಿತ್ತಾದರೂ, ಶಾಶ್ವತ ಜೀವನಾಂಶ ಕೊಡಿಸುವಂತೆ ಮಾಡಿದ್ದ ಮನವಿ ತಿರಸ್ಕರಿಸಿತ್ತು. ಹಾಗಾಗಿ ಅದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.