ಯಡಿಯೂರಪ್ಪ ರಾಜೀನಾಮೆ ಮಾತಿನ ಟೈಮಿಂಗ್ಸ್: ಎಚ್ಚರಿಕೆಯೋ, ರಣತಂತ್ರವೋ?
ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ನೀಡುತ್ತೇನೆ ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪನವರ ಹೇಳಿಕೆ, ಬರೀ ರಾಜ್ಯ ಬಿಜೆಪಿ ಘಟಕದಲ್ಲಿ ಮಾತ್ರವಲ್ಲದೇ, ವಿರೋಧ ಪಕ್ಷದಲ್ಲೂ ತಲ್ಲಣ ಮೂಡಿಸಿದೆ.
ಕಳೆದ ವಾರ ಸಿಎಂ ಪುತ್ರ ವಿಜಯೇಂದ್ರ ದೆಹಲಿ ಭೇಟಿಯ ನಂತರ ಯಡಿಯೂರಪ್ಪನವರ ಈ ಹೇಳಿಕೆ ಹಲವು ಕಾರಣಕ್ಕೆ ಮಹತ್ವವನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಇಲ್ಲದಿಲ್ಲ, ಇಲ್ಲಿ ಗಮನಿಸಬೇಕಾಗಿರುವುದು ಸಿಎಂ ನೀಡಿರುವ ಈ ಹೇಳಿಕೆಯ ಟೈಮಿಂಗ್ಸ್.
ಸಿಎಂ ಯಡಿಯೂರಪ್ಪ 'ರಾಜೀನಾಮೆ' ಮಾತಿನ ಹಿಂದಿನ ರಹಸ್ಯ ಬಿಚ್ಚಿಟ್ಟ ಡಿ.ಕೆ. ಶಿವಕುಮಾರ್
ವಿಜಯೇಂದ್ರ ಅವರ ದೆಹಲಿ ಭೇಟಿಯ ಹಿಂದೆ ವೈಯಕ್ತಿಕ ಕೆಲಸ, ಇಡಿ ವಿಚಾರಣೆ ಎನ್ನುವ ಹಲವು ವಿಚಾರಗಳು ಸುತ್ತಾಡುತ್ತಿದ್ದರೂ, ಒಂದು ವಾರದ ಹಿಂದೆ ಯಡಿಯೂರಪ್ಪನವರು ನೀಡಿದ್ದ ಹೇಳಿಕೆಗೂ, ಈಗಿನ ಹೇಳಿಕೆಗೂ ಬಹಳಷ್ಟು ವ್ಯತ್ಯಾಸಗಳನ್ನು ಕಾಣಬಹುದಾಗಿದೆ.
ಯಡಿಯೂರಪ್ಪ ರಾಜೀನಾಮೆ ಹೇಳಿಕೆ ಸ್ವಾಗತಿಸಿದ ಎಚ್. ವಿಶ್ವನಾಥ್
ಯಾರೋ ಒಬ್ಬರು, ಇಬ್ಬರು ದೆಹಲಿಗೆ ಹೋಗಿದ್ದಾರೆ, ನಮ್ಮ ವರಿಷ್ಠರು ಅವರನ್ನು ವಿಚಾರಿಸಿಕೊಂಡಿದ್ದಾರೆ ಎಂದು ಹೇಳಿದ್ದ ಯಡಿಯೂರಪ್ಪನವರು, ಈಗ, ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ದ ಎನ್ನುವ ಹೇಳಿಕೆ, ಉದ್ದೇಶಪೂರ್ವಕವೋ, ಎಚ್ಚರಿಕೆಯೋ ಎನ್ನುವ ಪ್ರಶ್ನೆ ಕಾಡುವುದಕ್ಕೆ ಕಾರಣ ಇಲ್ಲದಿಲ್ಲ..
ಮಹತ್ವ ಪಡೆದುಕೊಂಡ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಹೇಳಿಕೆ
ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಹೇಳಿಕೆ, ಸಿಎಂ ರಾಜೀನಾಮೆ ಮಾತಿನ ಸುತ್ತಮುತ್ತ ಇನ್ನಷ್ಟು ತಿರುಗುವಂತೆ ಮಾಡಿದೆ. "ಮುಖ್ಯಮಂತ್ರಿಯಾಗಿ ನೀವೇ ಮುಂದುವರಿಯಿರಿ ಎಂದು ಪಕ್ಷ ಹೇಳಿತ್ತು. ಆದರೆ ಈಗಿನ ಪರಿಸ್ಥಿತಿ ವಿಷಮವಾಗುತ್ತಿದೆ. ಅವರ ವಯಸ್ಸು, ಆರೋಗ್ಯ, ಮನಸ್ಸಿನ ಸಂಘರ್ಷ ನಿಭಾಯಿಸುವ ಸ್ಪಿರಿಟ್ ಕಡಿಮೆಯಾಗುತ್ತಾ ಬಂದಿದೆ" ಎನ್ನುವ ಬೊಮ್ಮಾಯಿ ಹೇಳಿಕೆ ಈ ಕಾಲಘಟ್ಟದಲ್ಲಿ ಮಹತ್ವ ಪಡೆದುಕೊಡಿದೆ.
ಈಗಿನ ಬಿಎಸ್ವೈ ಹೇಳಿಕೆ ಬಿಜೆಪಿಯಲ್ಲಿ ಚರ್ಚೆಯ ವಿಷಯವಾಗಿದೆ
ಒಂದು ವಾರದ ಹಿಂದಿನ ಹೇಳಿಕೆಗೂ, ಈಗಿನ ಬಿಎಸ್ವೈ ಹೇಳಿಕೆ ಬಿಜೆಪಿಯಲ್ಲಿ ಚರ್ಚೆಯ ವಿಷಯವಾಗಿದೆ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ಒಗಾಯಿಸಲು ಸಿದ್ದ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಯ ಹಿಂದೆ, ಕುರ್ಚಿಗೆ ಅಂಟಿಕೊಳ್ಳುವ ಜಾಯಮಾನ ನನ್ನದಲ್ಲ ಎನ್ನುವ ವಿಷಯವನ್ನು ತಮ್ಮ ವಿರೋಧಿಗಳಿಗೆ ತೋರಿಸುವ ಉದ್ದೇಶವನ್ನು ಬಿಎಸ್ವೈ ಹೊಂದಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ನಾಯಕತ್ವ ಬದಲಾವಣೆ ಎನ್ನುವ ವಿಷಯ ಪ್ರಸ್ತಾವಿಸುವವರಿಗೆ ವರಿಷ್ಠರೇ ಮೂಗುದಾರ ಹಾಕಲಿ
ಇನ್ನೊಂದು ಆಯಾಮದ ಪ್ರಕಾರ, ಯಡಿಯೂರಪ್ಪನವರಿಗೆ ಪರ್ಯಾಯ ಶಕ್ತಿ ಬಿಜೆಪಿಯಲ್ಲಿ ಇಲ್ಲ ಎನ್ನುವುದನ್ನು ವಿರೋಧ ಪಕ್ಷದವರೂ ಒಪ್ಪಿಕೊಳ್ಳುತ್ತಾರೆ. ಜೊತೆಗೆ, ಡಿ.ಕೆ.ಶಿವಕುಮಾರ್ ಹೇಳಿದ ಹಾಗೆ ಬಿಎಸ್ವೈ ಗಟ್ಟಿ ಮನುಷ್ಯ. ಈ ವಿಚಾರ ಬಿಜೆಪಿ ವರಿಷ್ಠರಿಗೆ ಗೊತ್ತಿರದ ವಿಷಯವೇನೂ ಅಲ್ಲ. ಹಾಗಾಗಿ, ನಾಯಕತ್ವ ಬದಲಾವಣೆ ಎನ್ನುವ ವಿಷಯವನ್ನು ಪ್ರಸ್ತಾವಿಸುವವರಿಗೆ ವರಿಷ್ಠರೇ ಮೂಗುದಾರ ಹಾಕಲಿ ಎನ್ನುವ ಉದ್ದೇಶದಿಂದ ಬಿಎಸ್ವೈ ಅವರಿಂದ ಈ ಹೇಳಿಕೆ ಬಂದಿರಬಹುದು.
Recommended Video
ಬಿಜೆಪಿಯ ಮಾತೃಸಂಘಟನೆ ಆರ್ ಎಸ್ ಎಸ್ ಪ್ರಮುಖರಿಗೆ ಯಡಿಯೂರಪ್ಪ ಸಂದೇಶ
ಕೆಲವೊಂದು ಮೂಲಗಳ ಪ್ರಕಾರ, ಬಿಜೆಪಿಯ ಮಾತೃಸಂಘಟನೆ ಆರ್ ಎಸ್ ಎಸ್ ಪ್ರಮುಖರಿಗೆ ಯಡಿಯೂರಪ್ಪ ಸಂದೇಶ ಕಳುಹಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ, ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದವನು ನಾನು. ಹಾಗಾಗಿ, ಗೌರವಯುತವಾಗಿ ನಾನು ಕೆಳಗಿಳಿಯುವಂತ ಸನ್ನಿವೇಶ ನಿರ್ಮಾಣವಾಗಬೇಕು. ಇಲ್ಲದಿದ್ದರೆ ನಾನು ಬಗ್ಗುವುದಿಲ್ಲ ಎನ್ನುವ ಸಂದೇಶವನ್ನೂ ರಾಜೀನಾಮೆ ಹೇಳಿಕೆ ಮೂಲಕ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.