'ಲವ್ ಲೆಟರ್'ಗೆ ಸೊಪ್ಪು ಹಾಕದಿದ್ದರೆ ರಾಜ್ಯಪಾಲರ ನಡೆ ಏನಿರಬಹುದು?
ವಿಶ್ವಾಸಮತ ಸಾಬೀತಿಗೆ ರಾಜಭವನದಿಂದ ಎರಡನೇ ಪತ್ರ ಬಂದಿದೆ. ಗುರುವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದ ರಾಜ್ಯಪಾಲ ವಜೂಭಾಯಿ ವಾಲಾ ಶುಕ್ರವಾರ ಮಧ್ಯಾಹ್ನ ಒಂದೂವರೆಗೆ ಒಳಗೆ ವಿಶ್ವಾಸ ಮತವನ್ನು ಸಾಬೀತು ಪಡಿಸುವಂತೆ ತಾಕೀತು ಮಾಡಿದ್ದರು. ಇದನ್ನು ಸರಕಾರ ಮೀರುತ್ತಿದ್ದಂತೆ ಎರಡನೇ ಪತ್ರ ಬಂದಿದೆ. ಶುಕ್ರವಾರ ಸಂಜೆ ಆರರ ಒಳಗೆ ಬಹುಮತವನ್ನು ತೋರಿಸುವಂತೆ ಹೇಳಿದ್ದಾರೆ.
ರಾಜ್ಯಪಾಲರ ಈ ಪತ್ರಗಳನ್ನು ಸಿಎಂ ಕುಮಾರಸ್ವಾಮಿ 'ಲವ್ ಲೆಟರ್ಗಳು' ಎಂದು ಸದನದೊಳಗೆ ವ್ಯಂಗ್ಯವಾಡಿದ್ದಾರೆ. ಈ ಕುರಿತು ಚರ್ಚೆ ಮುಂದುವರಿದಿದೆ. ಒಂದು ವೇಳೆ ರಾಜ್ಯಪಾಲರ ಎರಡನೇ ಪತ್ರಕ್ಕೂ ಆಡಳಿತ ಪಕ್ಷ ಸೊಪ್ಪು ಹಾಕದಿದ್ದರೆ ಮುಂದೇನಾಗಬಹುದು? ಅದು ಸದ್ಯದ ಕುತೂಹಲಕಾರಿ ಅಂಶ.
ವಿಶ್ವಾಸಮತ ಯಾಚನೆಗೆ ಸಿಎಂಗೆ ಹೊಸ ಡೆಡ್ಲೈನ್ ನೀಡಿದ ರಾಜ್ಯಪಾಲರು
ವಿಧಾನ ಸಭಾಧ್ಯಕ್ಷರಾಗಲೀ ಅಥವಾ ಮುಖ್ಯಮಂತ್ರಿ ಆಗಲಿ ವಿಶ್ವಾಸ ಮತ ಸಾಬೀತಿಗೆ ಯಾವುದೇ ಆತುರವಿಲ್ಲ ಎಂಬ ಧೋರಣೆ ಅನುಸರಿಸುತ್ತಿದ್ದಾರೆ. "ಅಂಥ ಸನ್ನಿವೇಶದಲ್ಲಿ ತೀರ್ಮಾನ ಕೈಗೊಳ್ಳುವುದು ರಾಜ್ಯಪಾಲರ ಕೈಲಿರುತ್ತದೆ. ಏಕೆಂದರೆ, ವಿಶ್ವಾಸ ಮತವನ್ನು ಸಾಬೀತು ಮಾಡಿಲ್ಲ ಅಂತ ಪರಿಗಣಿಸಿ, ಈ ಸರಕಾರಕ್ಕೆ ಬಹುಮತ ಇಲ್ಲ. ಮುಖ್ಯಮಂತ್ರಿಗಳನ್ನು ರಾಜೀನಾಮೆ ಸಲ್ಲಿಸುವಂತೆ ಕೇಳಬಹುದು" ಎನ್ನುತ್ತಾರೆ ಕಾನೂನು ತಜ್ಞರು.
ವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆ
"ಒಂದು ವೇಳೆ ಮುಖ್ಯಮಂತ್ರಿ ರಾಜೀನಾಮೆ ನೀಡುವುದಕ್ಕೆ ನಿರಾಕರಿಸಿದರೆ ಸಚಿವ ಸಂಪುಟವನ್ನೇ ರಾಜ್ಯಪಾಲರು ವಜಾ ಮಾಡಬಹುದು ಹಾಗೂ ಹೊಸ ಮುಖ್ಯಮಂತ್ರಿಯನ್ನು ನೇಮಿಸಬಹುದು- ಆ ನಂತರ ಹೊಸದಾಗಿ ನೇಮಕ ಆಗುವ ಮುಖ್ಯಮಂತ್ರಿಯನ್ನು ಬಹುಮತ ಸಾಬೀತು ಮಾಡುವಂತೆ ಕೇಳಬಹುದು" ಎಂದು ಅಭಿಪ್ರಾಯ ಪಡುತ್ತಾರೆ ತಜ್ಞರು. ಬಹುಮತ ಸಂಖ್ಯೆ ಕಳೆದುಕೊಂಡರೆ ಸಮ್ಮಿಶ್ರ ಸರಕಾರದ ಮುಂದೆ ಕಾನೂನಿಗೆ ಸಂಬಂಧಿಸಿದ ಹಲವು ಆಯ್ಕೆಗಳಿಲ್ಲ ಅಂತಲೂ ಸೇರಿಸುತ್ತಾರೆ.
ಕರ್ನಾಟಕದಲ್ಲಿ ಬಿಕ್ಕಟ್ಟು: ಕೇಂದ್ರ ಗೃಹ ಇಲಾಖೆಗೆ ರಾಜ್ಯಪಾಲರ ವರದಿ
ಮೈತ್ರಿ ಸರಕಾರಕ್ಕೆ ಬೆಂಬಲ ಇಲ್ಲವೋ ಅಥವಾ ಇದೆಯೋ ಅದು ವಿಧಾನಸಭೆಯಲ್ಲೇ ತೀರ್ಮಾನ ಆಗಬೇಕು. ಆದರೆ ಅಲ್ಲಿ ಬಹುಮತ ಸಾಬೀತಿಗೆ ಅವಕಾಶ ಇಲ್ಲದಿದ್ದಲ್ಲಿ ಮೈತ್ರಿ ಪಕ್ಷಗಳಿಗೆ ಇತರ ಆಯ್ಕೆಗಳಿಲ್ಲ ಮತ್ತು ಹೊಸದಾಗಿ ವಿಶ್ವಾಸ ಮತ ಯಾಚನೆ ಮಾಡಲೇ ಬೇಕಾಗುತ್ತದೆ ಎಂಬ ಮಾಹಿತಿ ನೀಡುತ್ತಾರೆ.
ಗತ್ಯಂತರ ಇಲ್ಲದೆ ಮಧ್ಯಂತರ ಚುನಾವಣೆ
ಇನ್ನು ಇದಕ್ಕೆ ಪರ್ಯಾಯವಾಗಿ ಸಂವಿಧಾನದ ಪರಿಚ್ಛೇದ 356ರ ಅಡಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರ ಸರಕಾರಕ್ಕೆ ರಾಜ್ಯಪಾಲರು ಶಿಫಾರಸು ಮಾಡಬಹುದು. ಆ ಸಂದರ್ಭದಲ್ಲಿ ಏನಾಗುತ್ತದೆ? ಹಾಗೆ ಶಿಫಾರಸು ಮಾಡಿದ ಎರಡು ತಿಂಗಳ ಒಳಗಾಗಿ ಸಂಸತ್ ನಲ್ಲಿ ಅದನ್ನು ಒಪ್ಪಿಕೊಳ್ಳಬೇಕು. ಆ ನಂತರ ಕರ್ನಾಟಕ ವಿಧಾನಸಭೆ ವಿಸರ್ಜನೆ ಮಾಡಲಾಗುತ್ತದೆ. ಹಾಗೆ ವಿಸರ್ಜನೆ ಆಗುವ ತನಕ ವಿಧಾನಸಭೆ ಅಮಾನತಿನಲ್ಲಿ ಇರುತ್ತದೆ. ಒಂದು ಸಲ ಹಾಗೆ ಆದ ಮೇಲೆ ಸದನದಲ್ಲಿ ಬಹುಮತ ಸಾಬೀತು ಮಾಡುವುದಕ್ಕೆ ಯಡಿಯೂರಪ್ಪ ಅವರು ಅವಕಾಶ ಕೇಳಬಹುದು. ಒಂದು ವೇಳೆ ಯಾರಿಗೂ ಬಹುಮತ ಇಲ್ಲದ ಪಕ್ಷದಲ್ಲಿ ಗತ್ಯಂತರ ಇಲ್ಲದೆ ಮಧ್ಯಂತರ ಚುನಾವಣೆಯನ್ನು ಕರ್ನಾಟಕ ಎದುರಿಸಬೇಕಾಗುತ್ತದೆ.
ಎರಡು ತಿಂಗಳ ಒಳಗೆ ಶಿಫಾರಸು ಅಂಗೀಕಾರ ಆಗಬೇಕು
ರಾಷ್ಟ್ರಪತಿ ಆಳ್ವಿಕೆ ಹೇರುವ ಮುನ್ನ ಸಂಸತ್ ನ ರಾಜ್ಯ ಸಭೆ ಹಾಗೂ ಲೋಕಸಭೆ ಎರಡರಲ್ಲೂ ಎರಡು ತಿಂಗಳ ಒಳಗೆ ಶಿಫಾರಸು ಅಂಗೀಕಾರ ಆಗಬೇಕು. ಒಂದು ವೇಳೆ ಅಂಗೀಕಾರ ಸಿಕ್ಕ ಮೇಲೆ, ಆರು ತಿಂಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಇರುತ್ತದೆ. ಆದರೆ ಈ ಸಮಯವು ಮೂರು ವರ್ಷದ ತನಕ ವಿಸ್ತರಣೆ ಆಗಬಾರದು. ಮತ್ತು ಕಾಲಾವಧಿ ವಿಸ್ತರಣೆ ಆಗುವ ಮುನ್ನ ಪ್ರತಿ ಆರು ತಿಂಗಳಿಗೆ ಒಮ್ಮೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಅಂಗೀಕಾರ ಪಡೆಯಲೇಬೇಕು. "ರಾಜ್ಯಪಾಲರ ಸಂದೇಶವನ್ನು ಪರಾಂಬರಿಸಿ. ಆದರೆ ಶಾಸಕರ ಹಕ್ಕುಗಳನ್ನು ಸಹ ಪರಿಗಣನೆಗೆ ತೆಗೆದುಕೊಳ್ಳಬೇಕು" ಎಂದು ಕೃಷ್ಣ ಬೈರೇಗೌಡ ಅವರು ಸ್ಪೀಕರ್ ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿದ್ದಾರೆ.
Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್
ಅರುಣಾಚಲ ಪ್ರದೇಶದಲ್ಲಿ ನಡೆದ ಬೆಳವಣಿಗೆ
ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠದ ಮೂರು ವರ್ಷದ ಹಿಂದಿನ ಆದೇಶವನ್ನು ಗಮನಕ್ಕೆ ತಂದ ಅವರು, ಇದೇ ರೀತಿಯ ರಾಜಕೀಯ ಬಿಕ್ಕಟ್ಟು ಅರುಣಾಚಲ ಪ್ರದೇಶದಲ್ಲಿ ಆಗಿದ್ದಾಗ, ರಾಜ್ಯಪಾಲರ ಹಕ್ಕುಗಳ ಮಿತಿಗಳೇನು ಎಂಬುದನ್ನು ಉದಾಹರಿಸಿದ್ದನ್ನು ಪ್ರಸ್ತಾಪಿಸಿದರು. "ಕೆಲವು ವಿಚಾರಗಳನ್ನು ಹೊರತು ಪಡಿಸಿ, ಆಡಳಿತಾತ್ಮಕ ಸಂಗತಿಗಳು ಹಾಗೂ ಶಾಸಕಾಂಗಕ್ಕೆ ಸಂಬಂಧಿಸಿದ ಸಂಗತಿಗಳನ್ನು ಸಚಿವರ ಸಲಹೆ ಹಾಗೂ ಸದನದ ನಿಯಮಾವಳಿ ಅನ್ವಯ ಕೈಗೊಳ್ಳಬೇಕು. ಸಚಿವರ ಸಲಹೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ರಾಜ್ಯಪಾಲರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಸಂವಿಧಾನದ ಪರಿಚ್ಛೇದ 163ರ ಅಡಿಯಲ್ಲಿ ಏನು ಹೇಳಲಾಗಿದೆಯೋ ಅದನ್ನು ಮಾತ್ರ ರಾಜ್ಯಪಾಲರು ಮಾಡಬಹುದು. ಅದನ್ನು ಈ ಸಂದರ್ಭದಲ್ಲಿ ತರಬಾರದು" ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನಸಭೆ ವಿಸರ್ಜಿಸುವ ಅಧಿಕಾರ ಇದೆ
ಆದರೆ, ಕಾನೂನು ತಜ್ಞರು ಹೇಳುವಂತೆ: ಸಂವಿಧಾನದ ಪರಿಚ್ಛೇದ 175ರ ಪ್ರಕಾರ, ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸದನಕ್ಕೆ ಸಂದೇಶ ಕಳುಹಿಸಬಹುದು. ಮತ್ತು ಅಂಥ ಸಂದೇಶವನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಪರಿಗಣಿಸಬೇಕು ಎಂದು ಸಂವಿಧಾನ ಹೇಳುತ್ತದೆ. ಸಂವಿಧಾನದ ಪರಿಚ್ಛೇದ 175 (2) (b) ಅಡಿಯಲ್ಲಿ ವಿಧಾನಸಭೆ ವಿಸರ್ಜನೆ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿರುವುದು ಕಾಂಗ್ರೆಸ್ ನ ಬೆಂಬಲದೊಂದಿಗೆ. ಕಾಂಗ್ರೆಸ್ ನ ಹಲವು ಶಾಸಕರು ರಾಜೀನಾಮೆ ನೀಡಿರುವುದಾಗಿ ರಾಜ್ಯಪಾಲರಿಗೆ ತಿಳಿಸಿದ್ದಾರೆ. ಇದರಿಂದ ಸ್ಪಷ್ಟವಾಗುತ್ತದೆ; ಮೈತ್ರಿ ಸರಕಾರ ಬಹುಮತ ಕಳೆದುಕೊಂಡಿದೆ. ಸರಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿರುವುದರಿಂದ ಇಂತಿಷ್ಟು ಸಮಯದಲ್ಲಿ ವಿಶ್ವಾಸ ಮತ ಸಾಬೀತು ಮಾಡಿ ಎಂದು ರಾಜ್ಯಪಾಲರು ಹೇಳಿದ್ದಾರೆ.
ಸರಕಾರದ ಪತನವನ್ನೇ ಸೂಚಿಸುತ್ತದೆ
ಆಡಳಿತಾತ್ಮಕ ವ್ಯವಸ್ಥೆ ಹಾಳಾಗಿದೆ, ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದೆ, ಕಾನೂನು- ಸುವ್ಯವಸ್ಥೆ ಹಾಳಾಗಿದೆ ಈ ಎಲ್ಲ ನೆಲೆಗಟ್ಟು ಸೇರಿದಂತೆ ವಿವಿಧ ಕಾರಣಗಳಿಗೆ ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು. ಇನ್ನು ಕರ್ನಾಟಕ ವಿಧಾನಸಭೆಯಲ್ಲಿ ನಡೆಯುತ್ತಿರುವ ಕಲಾಪಗಳನ್ನು ಅವಲೋಕಿಸಿ, ಸಾಂವಿಧಾನಿಕ ಬಿಕ್ಕಟ್ಟು ಉದ್ಭವಿಸಿದೆ ಎಂದು ನಿರ್ಧರಿಸುವ ಆನುವಂಶಿಕ ಹಕ್ಕು ಸುಪ್ರೀಂ ಕೋರ್ಟ್ ಗೆ ಇದ್ದು, ಆ ಹಕ್ಕನ್ನು ಚಲಾಯಿಸುವ ಸಾಧ್ಯತೆ ಕೂಡ ತಳ್ಳಿ ಹಾಕುವಂತಿಲ್ಲ. ಈ ಮೇಲ್ಕಂಡ ಎಲ್ಲ ಸಂಗತಿಗಳು ಕರ್ನಾಟಕದಲ್ಲಿ ಇರುವ ಮೈತ್ರಿ ಸರಕಾರದ ಪತನವನ್ನೇ ಸೂಚಿಸುತ್ತದೆ.