ಅನರ್ಹ ಶಾಸಕರ ಸದ್ದು ಜಾಸ್ತಿಯಾದರೆ, 'ಸದ್ದಡಗಿಸಲು' ಬಿಜೆಪಿಯ ಪ್ಲಾನ್- ಬಿ ರೆಡಿ!
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಲು, ಅತೃಪ್ತ ಶಾಸಕರ ಮೇಲೆ ಬಿಜೆಪಿ ತೋರಿದ್ದ ಕಾಳಜಿ, ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆಯೇ? ಈ ಪ್ರಶ್ನೆ, ಅತೃಪ್ತ ಶಾಸಕರಲ್ಲೂ ಕಾಡುತ್ತಿದೆ.
ಒಂದು ಕಡೆ, ಸುಪ್ರೀಂಕೋರ್ಟಿನಿಂದ ವಿಚಾರಣೆ ವಿಳಂಬವಾಗುತ್ತಿರುವುದು, ಇನ್ನೊಂದು, ಸಿಎಂ, ಡಿಸಿಎಂ ಮತ್ತು ಬಿಜೆಪಿ ವರಿಷ್ಠರು ತಮ್ಮ ಮುತುವರ್ಜಿ ವಹಿಸದೇ ಇರುವ ಆತಂಕ ಇವರಲ್ಲಿ ಕಾಡುತ್ತಿದೆ. ಅದೇ ಕಾರಣಕ್ಕೆ, ಕೆಲವು ದಿನಗಳ ಕೆಳಗೆ, ಎಚ್ ವಿಶ್ವನಾಥ್, ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ ಬಂದಿರುವುದು.
Recommended Video
ಡಿಸಿಎಂ ಅಶ್ವಥ್ ನಾರಾಯಣ್ 'ಕಿಂಗ್ ಪಿನ್' ಎಂದಿದ್ಯಾಕೆ ಎಚ್ ಡಿಕೆ?
ರಾಜ್ಯ ಬಿಜೆಪಿ ಘಟಕದ ಮುಖಂಡರ ಮಾತಿಗೆ ಬಿಜೆಪಿ ವರಿಷ್ಠರು ಜಾಸ್ತಿ ಸೊಪ್ಪು ಹಾಕದೇ ಇರುವುದರಿಂದ, ಅತೃಪ್ತ ಶಾಸಕರು ಎಲ್ಲದಕ್ಕೂ ದೆಹಲಿಯ ಕೇಂದ್ರ ಮಟ್ಟದ ನಾಯಕರನ್ನೇ ಅವಲಂಬಿತವಾಗಬೇಕಾಗಿರುವ ಸನ್ನಿವೇಶ ಎದುರಾಗಿದೆ ಎನ್ನುವ ಮಾತು ಚಾಲ್ತಿಯಲ್ಲಿದೆ.
ಅನರ್ಹ ಶಾಸಕರಿಗೆ ತುಸು ನೆಮ್ಮದಿ ನೀಡಿದ ಸುಪ್ರೀಂಕೋರ್ಟ್
ಒಂದು ವೇಳೆ, ಅತೃಪ್ತ ಶಾಸಕರು ಜಾಸ್ತಿ ಸದ್ದು ಮಾಡಲಾರಂಭಿಸಿದರೆ, ಅವರನ್ನು ಹತೋಟಿಯಲ್ಲಿಡಲು, ಬಿಜೆಪಿ ಪ್ಲಾನ್ - ಬಿ ರೆಡಿ ಮಾಡಿಕೊಂಡಿದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ. ಕುಮಾರಸ್ವಾಮಿ, ಮೊನ್ನೆ ನೀಡಿದ ಹೇಳಿಕೆ ಸೂಚ್ಯವಾಗಿ ಇದನ್ನೇ ಸಾರುವಂತಿತ್ತು.
ಎಚ್.ವಿಶ್ವನಾಥ್, ಸಿಎಂ ಯಡಿಯೂರಪ್ಪ ಭೇಟಿ
" ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯ ಸರದಿ ಬೇಗ ಬರುವಂತೆ ಮಾಡಲು ಸಹಾಯ ಮಾಡುವುದಾಗಿ ಹೇಳಿದ್ದೀರಿ. ಆದರೆ, ಇದ್ಯಾವುದೂ ಹಿಂದಿನ ಮಾತಿನಂತೆ ನಡೆಯುತ್ತಿಲ್ಲ. ಹೀಗಾದರೆ, ನಮ್ಮ ಮುಂದಿನ ರಾಜಕೀಯ ಜೀವನ ಹೇಗೆ " ಎಂದು, ಎಚ್.ವಿಶ್ವನಾಥ್, ಸಿಎಂ ಯಡಿಯೂರಪ್ಪನವರ ಬಳಿ ಬೇಸರದಿಂದ ಮಾತನಾಡಿದ್ದಾರೆಂದು ವರದಿಯಾಗಿದೆ. (ಅತೃಪ್ತ ಶಾಸಕರ ವಿಚಾರಣೆರನ್ನು ಸುಪ್ರೀಂ, ಸೆ10ಕ್ಕೆ ಕೈಗೆತ್ತಿಗೊಳ್ಳಲಿದೆ, ವಿಶ್ವನಾಥ್ ಭೇಟಿ, ಅದಕ್ಕಿಂತ ಹಿಂದಿನ ಬೆಳವಣಿಗೆ).
ಕಾಂಗ್ರೆಸ್ ಕಾರ್ಪೋರೇಟರ್ ಗಳು ಧರಣಿ
ಇನ್ನು, ಡಿ.ಕೆ.ಶಿವಕುಮಾರ್ ಬಂಧನ ಪ್ರತಿಭಟಿಸಿ, ಕೆ.ಆರ್.ಪುರಂ ಘಟಕದ ಕಾಂಗ್ರೆಸ್ ಕಾರ್ಪೋರೇಟರ್ ಗಳು ಧರಣಿ ನಡೆಸಿದ್ದರು. ಅಲ್ಲಿನ, ಅತೃಪ್ತ ಶಾಸಕರ ಸೂಚನೆಯಂತೆ ಪ್ರತಿಭಟನೆ ನಡೆಸಲಾಗಿತ್ತು ಎಂದು ಹೇಳಲಾಗುತ್ತಿದೆ. ಕೆ.ಆರ್.ಪುರಂ ಕ್ಷೇತ್ರದ ಉಪಚುನಾವಣೆಗೆ, ಭೈರತಿ ಬಸವರಾಜು ಅವರಿಗೆ, ಬಿಜೆಪಿ ಟಿಕೆಟ್ ನೀಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಹಾಗಾಗಿ, ಉದ್ದೇಶಪೂರ್ವಕವಾಗಿಯೇ ಈ ಪ್ರತಿಭಟನೆ ನಡೆಸಲಾಯಿತು ಎನ್ನುವ ಮಾತಿದೆ.
ಅತೃಪ್ತ ಶಾಸಕರು
ಯಡಿಯೂರಪ್ಪ ಸರಕಾರ ರಚನೆಗೆ ಕಾರಣಕರ್ತರಾದ ತಮ್ಮನ್ನು ನೇಪಥ್ಯಕ್ಕೆ ಸರಿಸಲು ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ದುಗುಡ, ಅತೃಪ್ತ ಶಾಸಕರಲ್ಲಿ ಕಾಡುತ್ತಿದೆ. ಇದನ್ನರಿತ ಬಿಜೆಪಿ, ಇನ್ನೊಂದು ಸುತ್ತಿನ ಆಪರೇಷನ್ ಕಮಲ ನಡೆಸಲು ಮುಂದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೊದಲು, ಅತೃಪ್ತ ಶಾಸಕರ ಮನವೊಲಿಸುವುದು, ಇಲ್ಲದಿದ್ದರೆ, ಪ್ಲಾನ್ - ಬಿ ಆಗಿ, ಆಪರೇಷನ್ ನಡೆಸುವ ಪ್ಲಾನ್ ಅನ್ನು ಬಿಜೆಪಿ ಹೊಂದಿದೆ ಎನ್ನುವ ಸುದ್ದಿಯಿದೆ.
ನಮ್ಮ ಪಕ್ಷದ ಕೆಲವು ಶಾಸಕರನ್ನು ಬಿಜೆಪಿ ಮತ್ತೆ ಸಂಪರ್ಕಿಸಿದೆ, ಎಚ್ಡಿಕೆ
" ನಮ್ಮ ಪಕ್ಷದ ಕೆಲವು ಶಾಸಕರನ್ನು ಬಿಜೆಪಿ ಮತ್ತೆ ಸಂಪರ್ಕಿಸಿದೆ. ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಆಪರೇಷನ್ ಕಮಲ ಬಿಟ್ಟಿಲ್ಲ. ಇನ್ನೂ ಹದಿನೈದು-ಇಪ್ಪತ್ತು ಮಂದಿ ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ" ಎಂದು ಕುಮಾರಸ್ವಾಮಿ, ಎರಡು ದಿನಗಳ ಹಿಂದೆ ಆರೋಪಿಸಿದ್ದರು.
ಹಳೇ ಮೈಸೂರು ಪ್ರಾಂತ್ಯದ ಜೆಡಿಎಸ್ ಶಾಸಕರು
ಒಂದು ವೇಳೆ, ಸುಪ್ರೀಂಕೋರ್ಟ್ ತೀರ್ಪು, ಅನರ್ಹಗೊಂಡ ಶಾಸಕರ ಪರವಾಗಿ ಬಂದರೆ, ಯಡಿಯೂರಪ್ಪನವರ ಸರಕಾರದಲ್ಲಿ ಆಯಕಟ್ಟಿನ ಸಚಿವಸ್ಥಾನವನ್ನು ಅವರೆಲ್ಲಾ ಕೇಳಬಹುದು. ಅದು ಸಾಧ್ಯವಾಗದೇ ಇದ್ದಲ್ಲಿ, ಸರಕಾರದ ಭವಿಷ್ಯಕ್ಕೆ ತೊಂದರೆಯಾಗಬಹುದು. ಹಾಗಾಗಿ, ಹಳೇ ಮೈಸೂರು ಪ್ರಾಂತ್ಯದ ಜೆಡಿಎಸ್ ಶಾಸಕರು, ಸೂಕ್ತ ರಾಜಕೀಯ ಸನ್ನಿವೇಶ ಒದಗಿ ಬಂದಲ್ಲಿ, ಬಿಜೆಪಿಯತ್ತ ಮುಖಮಾಡಲು ತಯಾರಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಒಟ್ಟಿನಲ್ಲಿ, ಇನ್ನೊಂದು ಸುತ್ತಿನ ಆಪರೇಷನ್ ಕಮಲ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ.