ಉಪಚುನಾವಣೆಗೆ ಮುನ್ನ ಭಾರೀ ಮಹತ್ವ ಪಡೆದುಕೊಂಡ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ
Recommended Video
ಚಿಕ್ಕಮಗಳೂರು, ಅ 15: ಉಪಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಯಾರೂ ಊಹಿಸಲೂ ಆಗದ ಹೇಳಿಕೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯನವರು ಕಾಫಿನಾಡಿನಲ್ಲಿ ನೀಡಿರುವ ಹೇಳಿಕೆ, ಮುಂದಿನ ದಿನಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣವನ್ನೇ ಬದಲಾಯಿಸುವ ಸಾಧ್ಯತೆಯಿದೆ.
ಈ ಹಿಂದೆ, ಕುಮಾರಸ್ವಾಮಿ ಸರಕಾರ ಪತನದ ಅಂಚಿನಲ್ಲಿ ಇದ್ದಾಗ, ಅತೃಪ್ತರೆಲ್ಲಾ ಸಿದ್ದರಾಮಯ್ಯನವರ ಶಿಷ್ಯರು ಎಂದು ಸುದ್ದಿಯಾಗಿತ್ತು. ಇದು, ಹಲವು ಬಾರಿ ಸಿದ್ದರಾಮಯ್ಯನವರಿಗೆ ಮುಜುಗರವನ್ನೂ ಉಂಟುಮಾಡಿತ್ತು.
ಸಿದ್ದರಾಮಯ್ಯ ಭೇಟಿಯಾದ ರಮೇಶ್ ಜಾರಕಿಹೊಳಿಯ ಬಿಜೆಪಿ ಎದುರಾಳಿ
ಮೂರು ದಿನಗಳ ಚಳಿಗಾಲದ ಅಧಿವೇಶನದಲ್ಲಿ ತನ್ನ ಖದರ್ ಅನ್ನು ತೋರಿದ್ದ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ನಲ್ಲಿ ತನ್ನ ಹಿಡಿತವನ್ನು ಮುಂದುವರಿಸಿದ್ದಾರೆ. ಅದಕ್ಕೆ, ಸಾಕ್ಷಿಯೆನ್ನುವಂತ್ತಿದೆ, ಅನರ್ಹ ಶಾಸಕರ ಬಗ್ಗೆ ಸಿದ್ದರಾಮಯ್ಯ ನೀಡಿದ ಹೇಳಿಕೆ.
ಸಿದ್ದರಾಮಯ್ಯನವರ ಬೃಹನ್ನಾಟಕ ನನಗೆ ಗೊತ್ತಿಲ್ಲವೇ
ಸಮ್ಮಿಶ್ರ ಸರಕಾರದಲ್ಲಿನ ಭಿನ್ನಮತಕ್ಕೆ ತುಪ್ಪ ಸುರಿಯುತ್ತಿರುವವರು ಸಿದ್ದರಾಮಯ್ಯನವರೇ ಎಂದು ಹಲವು ಬಾರಿ ದೇವೇಗೌಡ್ರು, ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರ ಬಳಿ ದೂರು ನೀಡಿದ್ದರು. ಸರಕಾರ ಪತನಗೊಂಡ ನಂತರ, "ಸಿದ್ದರಾಮಯ್ಯನವರ ಬೃಹನ್ನಾಟಕ ನನಗೆ ಗೊತ್ತಿಲ್ಲವೇ" ಎಂದು ಕುಮಾರಸ್ವಾಮಿಯವರೂ ಹೇಳಿದ್ದರು. ಈಗ ಸಿದ್ದರಾಮಯ್ಯ ನೀಡಿದ ಹೇಳಿಕೆ, ಅದಕ್ಕೆಲ್ಲಾ ಪೂರಕ ಎನ್ನುವಂತಿದೆ.
ರೀ ಎಲ್ಲವನ್ನೂ ಸಾರ್ವಜನಿಕವಾಗಿ ಹೇಳೋಕೆ ಆಗುತ್ತಾ
"ಕಾಂಗ್ರೆಸ್ ತೊರೆದ ಅನರ್ಹ ಶಾಸಕರಿಗೆ ಕಾಂಗ್ರೆಸ್ ಬಾಗಿಲು ಇನ್ನುಮುಂದೆ ಯಾವತ್ತೂ ಬಂದ್" ಎಂದು ಹೇಳಿದ್ದ ಸಿದ್ದರಾಮಯ್ಯ ಈಗ ಸಾಫ್ಟ್ ಆಗಿದ್ದಾರೆ. ಅನರ್ಹ ಶಾಸಕರನ್ನು ಪಕ್ಷಕ್ಕೆ ವಾಪಸ್ ಸೇರಿಸಿಕೊಳ್ಳುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ, "ರೀ ಎಲ್ಲವನ್ನೂ ಸಾರ್ವಜನಿಕವಾಗಿ ಹೇಳೋಕೆ ಆಗುತ್ತೇನ್ರೀ" ಎಂದು ಹೇಳಿದ್ದಾರೆ.
ಉಪಚುನಾವಣೆಗೆ ದಿನಾಂಕ ನಿಗದಿ, ಇಂದಿನಿಂದಲೇ ನೀತಿ ಸಂಹಿತೆ ಜಾರಿ
ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬರಬಹುದು
"ಯಾರೇ ಆಗಲಿ, ಪಕ್ಷದ ಸಿದ್ದಾಂತವನ್ನು ನಂಬಿ ಬಂದರೆ, ಅವರಿಗೆ ಕಾಂಗ್ರೆಸ್ ನಲ್ಲಿ ಸ್ಥಾನವಿದೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಯಾರು ಬೇಕಾದರೂ ನಮ್ಮ ಪಕ್ಷಕ್ಕೆ ಬರಬಹುದು. ತುಂಬಾ ಜನ ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲವನ್ನೂ ಈಗ ಹೇಳಲು ಸಾಧ್ಯವಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅನರ್ಹ ಶಾಸಕರಿಗೆ ಮತ್ತೆ ಕಾಂಗ್ರೆಸ್ ನಲ್ಲಿ ಸ್ಥಾನವಿದೆಯೇ ಎನ್ನುವ ಪ್ರಶ್ನೆಗೆ, ಸಿದ್ದರಾಮಯ್ಯ ಕೊಟ್ಟ ಉತ್ತರ ಇದಾಗಿತ್ತು.
ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ
"ನೋಡಿ ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುತ್ತೇವೆ. ನಮ್ಮ ಪಕ್ಷದ ಸಿದ್ದಾಂತವನ್ನು ಮೊದಲು ಅವರು ಒಪ್ಪಬೇಕು. ಆದರೆ, ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ನಾನು ಯಾವುದೇ ಖಾತ್ರಿ ನೀಡುವುದಿಲ್ಲ. ಅದೆಲ್ಲಾ, ದೊಡ್ಡವರಿಗೆ ಬಿಟ್ಟ ವಿಚಾರ" ಎಂದು ಅನರ್ಹ ಶಾಸಕರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಪಕ್ಷಕ್ಕೆ ವಾಪಸ್ ಬರುತ್ತೇನೆಂದು ಕೆಲವರು ನನ್ನ ಬಳಿ ಮಾತನಾಡಿದ್ದಾರೆ
"ಪಕ್ಷಕ್ಕೆ ವಾಪಸ್ ಬರುತ್ತೇನೆಂದು ಕೆಲವರು ನನ್ನ ಬಳಿ ಮಾತನಾಡಿದ್ದಾರೆ. ಎಲ್ಲವನ್ನೂ ಈಗ ಬಹಿರಂಗ ಪಡಿಸಲು ಸಾಧ್ಯವಿಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅನರ್ಹರಲ್ಲಿ ಒಬ್ಬರಾದ ಚಿಕ್ಕಬಳ್ಳಾಪುರ ಕ್ಷೇತ್ರದ ಡಾ. ಸುಧಾಕರ್, ಈಗಲೂ ನಮ್ಮ ನಾಯಕ ಸಿದ್ದರಾಮಯ್ಯ ಎಂದಿದ್ದರು. ಸಿದ್ದರಾಮಯ್ಯನವರ ಹೇಳಿಕೆ, ಉಪಚುನಾವಣೆಯ ವೇಳೆ ಮಹತ್ವನ್ನು ಪಡೆದುಕೊಂಡಿದೆ.