ಐದು ಗೆದ್ದರೂ ಬಿಜೆಪಿ ಸರಕಾರ ಸೇಫ್: ಅಡ್ಡಗೋಡೆ ಮೇಲೆ ಸಿದ್ದರಾಮಯ್ಯ ದೀಪ
ರಾಜ್ಯದ ಜನತೆಯನ್ನು ತುದಿಗಾಲಿನಲ್ಲಿ ನಿಲ್ಲಿಸಿರುವ ಉಪಚುನಾವಣೆಯ ಫಲಿತಾಂಶಕ್ಕೆ ಇನ್ನು ಎರಡು ದಿನ ಬಾಕಿಯಿದೆ. ಸೋಮವಾರ (ಡಿ 9) ಮಧ್ಯಾಹ್ನದ ಹೊತ್ತಿಗೆ, ಯಡಿಯೂರಪ್ಪನವರ ಸರಕಾರದ ಭವಿಷ್ಯ ಗೊತ್ತಾಗಲಿದೆ.
ಸಿವೋಟರ್ ಮತ್ತು ಗುಪ್ತಚರ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ, ಸರಕಾರ ಉಳಿಸಿಕೊಳ್ಳುವಷ್ಟು ಸೀಟನ್ನು ಬಿಜೆಪಿ ಗೆಲ್ಲಲಿದೆ. "ಇದನ್ನೆಲ್ಲಾ ನಾವು ನಂಬುವುದಿಲ್ಲ" ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಹೇಳಿಕೊಂಡಿದೆ.
ಈ ನಡುವೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಾದಾಮಿಯಲ್ಲಿ ನೀಡಿದ ಹೇಳಿಕೆ, ಅಡ್ಡಗೋಡೆ ಮೇಲೆ ದೀಪ ಇಟ್ಟಂತಿದೆ. "ಮುಖ್ಯಮಂತ್ರಿ ಹುದ್ದೆ ಯಾರಿಗೂ ಖಾಯಂ ಅಲ್ಲ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಂಟಿಬಿ ನಾಗರಾಜು-ಯಡಿಯೂರಪ್ಪ ಭೀತಿ: ಸೋಲಿನ ಭೀತಿ?
ಒಂದು ವೇಳೆ, ಬಿಜೆಪಿಗೆ ಬಹುಮತ ಸಾಬೀತು ಪಡಿಸುವಷ್ಟು ಸ್ಥಾನ ಸಿಗದಿದ್ದಲ್ಲಿ ಮತ್ತೆ ಕಾಂಗ್ರೆಸ್ - ಜೆಡಿಎಸ್ ಮೈತ್ರಿಯ ಬಗ್ಗೆಯೂ ಮಾತುಕತೆ ನಡೆಯುತ್ತಿದೆ ಎನ್ನುವ ಮಾತಿದೆ. ಸಿದ್ದರಾಮಯ್ಯ ಹೇಳಿದಿಷ್ಟು..
ನಾನೇ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲೂ ಹೇಳಿಲ್ಲ
"ಉಪಚುನಾವಣೆಯ ಬಳಿಕ ಬಿಜೆಪಿಗೆ ಬಹುಮತವಿರುವುದಿಲ್ಲ ಎಂದಷ್ಟೇ ನಾನು ಹೇಳಿದ್ದು. ನಾನೇ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಬಿಜೆಪಿವರಿಗೆ ತಲೆಕೆಟ್ಟಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಐದು ಸ್ಥಾನವನ್ನು ಬಿಜೆಪಿ ಗೆದ್ದರೂ, ಯಡಿಯೂರಪ್ಪನವರ ಸರಕಾರ ಸೇಫ್
"ಹದಿನೈದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹತ್ತು, ಜೆಡಿಎಸ್ ಒಂದೆರಡು ಸ್ಥಾನ ಗೆದ್ದರೆ ಮಾತ್ರ ಸರಕಾರ ಪತನಗೊಳ್ಳಲಿದೆ. ಐದು ಸ್ಥಾನವನ್ನು ಬಿಜೆಪಿ ಗೆದ್ದರೂ, ಯಡಿಯೂರಪ್ಪನವರ ಸರಕಾರ ಸೇಫ್" ಎನ್ನುವ ಮಾತನ್ನು ಸಿದ್ದರಾಮಯ್ಯ ಹೇಳಿದ್ದಾರೆ.
ಎಕ್ಸಿಟ್ ಪೋಲ್: ಯಡಿಯೂರಪ್ಪಗೆ ಒಂದು ಕಡೆ ಖುಷಿ, ಇನ್ನೊಂದು ಕಡೆ ದುಃಖ?
ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ
ಚುನಾವಣಾ ಫಲಿತಾಂಶದ ನಂತರ ಮತ್ತೆ ಮೈತ್ರಿ ಸರಕಾರ ಮತ್ತೆ ಬರಲಿದೆ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ. ಸರಕಾರ ಸೇಫ್ ಆಗಲು, ಕನಿಷ್ಟ ಬಿಜೆಪಿ ಏಳು ಸ್ಥಾನ ಗೆಲ್ಲಬೇಕಿದೆ. ಹಾಗಾಗಿ, ಅದ್ಯಾವ ಆಧಾರದ ಮೇಲೆ, ಸಿದ್ದರಾಮಯ್ಯ ಐದು ಸ್ಥಾನ ಗೆದ್ದರೆ, ಬಿಜೆಪಿ ಸೇಫ್ ಎಂದು ಹೇಳಿದರು ಎನ್ನುವುದು ಪ್ರಶ್ನೆಯಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಖಾಯಂ ಮುಖ್ಯಮಂತ್ರಿಗಳಲ್ಲ
"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಖಾಯಂ ಮುಖ್ಯಮಂತ್ರಿಗಳಲ್ಲ, ವಿರೋಧಪಕ್ಷದ ನಾಯಕರಲ್ಲ. ಈ ಸತ್ಯವನ್ನು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ಅರಿಯಬೇಕಾಗಿದೆ. ಚುನಾವಣೋತ್ತರ ಸಮೀಕ್ಷೆಯನ್ನೇ, ಫಲಿತಾಂಶ ಎಂದು ಯಡಿಯೂರಪ್ಪ ಅಂದು ಕೊಂಡಿದ್ದಾರೆ. ಇನ್ನೆರಡ್ಮೂರು ದಿನ ಕಾಯೋಣ, ಫಲಿತಾಂಶ ಬರಲಿ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಭಾರೀ ಮತದಾನ
ಬೆಂಗಳೂರು ಹೊರತು ಪಡಿಸಿ, ಮಿಕ್ಕೆಲ್ಲಾ ಕಡೆ ಭಾರೀ ಮತದಾನವಾಗಿದೆ. ಚಿಕ್ಕಬಳ್ಳಾಪುರ ಮತ್ತು ಹೊಸಕೋಟೆಯಲ್ಲಂತೂ ಶೇ. 85ರ ಮೇಲೆ ಮತದಾನವಾಗಿದೆ. ಟೆನ್ಸನ್ ನಲ್ಲಿರುವ ಅಭ್ಯರ್ಥಿಗಳು, ಬೂತ್ ಮಟ್ಟದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಪ್ರಮುಖವಾಗಿ ಐದು ಕ್ಷೇತ್ರಗಳಲ್ಲಿ, ತೀವ್ರ ಹಣಾಹಣಿಯಾಗುವ ನಿರೀಕ್ಷೆಯಿದೆ.