ಸಂಪುಟ ವಿಸ್ತರಣೆ: 5 ಹಾಲೀ ಸಚಿವರಿಗೆ ಶುರುವಾಯಿತು ಢವಢವ..
ಬೆಂಗಳೂರು, ಜ 12: ಕರ್ನಾಟಕ ಸರಕಾರದ ಸಚಿವ ಸಂಪುಟ ವಿಸ್ತರಣೆಗೆ ಅಂತೂ ಇಂತೂ ವರಿಷ್ಠರಿಂದ ಗ್ರೀನ್ ಸಿಗ್ನಲ್ ಬಂದಿದೆ. ಇದನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೇ ಸ್ಪಷ್ಟ ಪಡಿಸಿದ್ದಾರೆ. ಇದರ ಜೊತೆಗೆ ಹೊಸ ಲೆಕ್ಕಾಚಾರವೂ ಆರಂಭವಾಗಿದೆ.
ಈ ಕ್ಷಣದವರೆಗೂ ಸಂಪುಟ ಪುನರ್ ರಚನೆಯ ಬಗ್ಗೆಯೇ ಹೆಚ್ಚಿನ ಒಲವನ್ನು ಹೊಂದಿರುವ ಈ ವಿಚಾರದಲ್ಲಿ ತಮ್ಮದೇನೂ ಇಲ್ಲ, ಎಲ್ಲಾ ಹೈಕಮಾಂಡ್ ನಿರ್ಧಾರ ಎಂದು ಆಪ್ತರಲ್ಲಿ ಹೇಳಿಕೊಂಡಿದ್ದಾರಂತೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬಿಎಸ್ವೈ ಜೊತೆ 'ಇಡೀ' ವರಿಷ್ಠರ ತಂಡದ ಕ್ಲೋಸ್ ಡೋರ್ ಮೀಟಿಂಗ್!
ಸಂಪುಟ ವಿಸ್ತರಣೆ ಆಗದಿದ್ದರೂ, ಸಂಪುಟ ವಿಸ್ತರಣೆ ಆಗುವುದಂತೂ ನಿಶ್ಚಿತ. ಹಾಗಾಗಿ, ಯಾರ್ಯಾರಿಗೆ ಸಚಿವ ಸ್ಥಾನ ಒಲಿದು ಬರಬಹುದು ಎನ್ನುವ ಅನಧಿಕೃತ ಪಟ್ಟಿ ಈಗಾಗಲೇ ಬಿಸಿಬೋಂಡಾದಂತೆ ಸಾಮಾಜಿಕ ತಾಣದಲ್ಲಿ ಓಡಾಡುತ್ತಿದೆ.
ಸಚಿವ ಎಚ್.ನಾಗೇಶ್ ಅವರನ್ನು ಸಂಪುಟದಿಂದ ಕೈಬಿಡದಂತೆ ಒತ್ತಾಯ
ಈ ಕ್ಷಣದವರೆಗೂ ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎನ್ನುವ ಗುಟ್ಟನ್ನು ಎಲ್ಲಿಯೂ ಬಹಿರಂಗಪಡಿಸದ ಸಿಎಂ ಬಿಎಸ್ವೈ, ಒಂದು ವೇಳೆ ಪುನರ್ ರಚನೆಗೆ ಮುಂದಾದರೆ, ಹಾಲೀ ಐವರ ತಲೆದಂಡ ಅಂತೂ ನಿಶ್ಚಿತ ಎಂದು ಹೇಳಲಾಗುತ್ತಿದೆ. ಅವರು ಯಾರು?
ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ
ತಾನಾಯಿತು, ತನ್ನ ಇಲಾಖೆಯ ಕೆಲಸವಾಯಿತು ಮತ್ತು ಯಾವುದೇ ವಿಚಾರದಲ್ಲೂ ಅನಗತ್ಯ ಹೇಳಿಕೆಯನ್ನು ನೀಡದೇ ಪಕ್ಷದ ಶಿಸ್ತಿನ ಸಿಪಾಯಿಯಂತಿರುವ, ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸಂಪುಟದಿಂದ ಕೊಕ್ ಮಾಡಬಹುದು. ಇವರು, ಸದ್ಯ, ಒಳನಾಡು ಬಂದರು, ಮೀನುಗಾರಿಕೆ ಮತ್ತು ಮುಜರಾಯಿ ಖಾತೆಯ ಸಚಿವರು.
ಅಬಕಾರಿ ಇಲಾಖೆಯ ಸಚಿವ ಎಚ್.ನಾಗೇಶ್
ಸಂಪುಟ ಪುನರ್ ರಚನೆಯಾದರೆ ಒಬ್ಬರಿಗೆ ಕೊಕ್ ಆಗುವುದಂತೂ ಗ್ಯಾರಂಟಿ ಎನ್ನುವ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಅಬಕಾರಿ ಇಲಾಖೆಯ ಸಚಿವ ಎಚ್.ನಾಗೇಶ್. ವರ್ಗಾವಣೆಗಾಗಿ ಕೋಟಿ ರೂಪಾಯಿ ಲಂಚಕ್ಕೆ ಡಿಮಾಂಡ್ ಮಾಡಿದ್ದರು ಎನ್ನುವ ದೂರು ಇವರ ವಿರುದ್ದ ಪ್ರಧಾನಿ ಕಾರ್ಯಾಲಯಕ್ಕೆ ಹೋಗಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ
ಈ ಪಟ್ಟಿಯಲ್ಲಿ ಕೇಳಿ ಬರುತ್ತಿರುವ ಇನ್ನೊಂದು ಹೆಸರು, ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಅಣ್ಣಾಸಾಹೇಬ್ ಅವರದ್ದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯಾಗಿರುವ ಜೊಲ್ಲೆಯವರ ಹೆಸರೂ ಕೊಕ್ ಆಗುವವರ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.
ಪಶು ಸಂಗೋಪನಾ ಖಾತೆಯ ಸಚಿವ ಪ್ರಭು ಚೌಹಾಣ್
ಸಂಪುಟದಿಂದ ಕೊಕ್ ಆಗಲಿದ್ದಾರೆ ಎನ್ನುವ ಪಟ್ಟಿಯಲ್ಲಿ ಕೇಳಿ ಬರುತ್ತಿರುವ ಹೆಸರು ಪ್ರಭು ಚೌಹಾಣ್ ಅವರದ್ದು. ಖಾತೆ ನಿಭಾಯಿಸುವ ವಿಚಾರದಲ್ಲಿ ಚೌಹಾಣ್ ವಿರುದ್ದ ಅಲ್ಲಲ್ಲಿ ಅಪಸ್ವರ ಎದ್ದಿದ್ದರೂ, ಗೋಹತ್ಯಾ ನಿಷೇಧ ಕಾಯ್ದೆ ಜಾರಿಯ ವೇಳೆ, ಪಕ್ಷದ ನಿಲುವನ್ನು ಸಮರ್ಥವಾಗಿ ಹೇಳಿದ್ದರು ಎನ್ನುವ ಪ್ಲಸ್ ಪಾಯಿಂಟ್ ಇವರಿಗಿದೆ. ಇವರು ಪಶು ಸಂಗೋಪನಾ ಖಾತೆಯ ಸಚಿವರಾಗಿದ್ದಾರೆ.
ಗಣಿಖಾತೆಯ ಸಚಿವ ಸಿ.ಸಿ.ಪಾಟೀಲ್
ಬಿಜೆಪಿಯ ನರಗುಂದ ಕ್ಷೇತ್ರದ ಶಾಸಕ, ಗಣಿಖಾತೆಯ ಸಚಿವ ಸಿ.ಸಿ.ಪಾಟೀಲ್ ಅವರ ಹೆಸರೂ ಕೊಕ್ ಆಗುವವರ ಪಟ್ಟಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲವೂ, ಬಿಜೆಪಿ ವರಿಷ್ಠರು ಸಂಪುಟ ಪುನರ್ ರಚನೆಗೆ ಅವಕಾಶ ನೀಡಿದರೆ ಮಾತ್ರ ಆಗಲು ಸಾಧ್ಯ.