ಸರಕಾರ ರಚನೆಯಾದರೆ ಯಡಿಯೂರಪ್ಪನವರೇ ಮುಖ್ಯಮಂತ್ರಿ : ಡಿವಿ ಸದಾನಂದ ಗೌಡ
ಬೆಂಗಳೂರು, ಜುಲೈ 06 : ಒಂದು ವೇಳೆ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರೆ, ಭಾರತೀಯ ಜನತಾ ಪಕ್ಷ ಸಿದ್ಧವಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನ ಡಜನ್ ಶಾಸಕರು ಮೈತ್ರಿ ಸರಕಾರದ ವಿರುದ್ಧವೇ ಸಿಡಿದೆದ್ದಿದ್ದು, ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ, ರಾಜಕೀಯ ಅಂಗಳದಲ್ಲಿ ಭರ್ಜರಿ ಚಟುವಟಿಕೆಗಳು ನಡೆಯುತ್ತಿದ್ದು, ಕುಮಾರಸ್ವಾಮಿ ಸರಕಾರ ಯಾವುದೇ ಸಮಯ ಬಿದ್ದುಹೋಗುವ ಸ್ಥಿತಿಗೆ ತಲುಪಿದೆ.
14 ಶಾಸಕರ ರಾಜೀನಾಮೆ : ಕ್ಷಣ ಕ್ಷಣದ ಮಾಹಿತಿ Live Updates
ಈ ಬೆಳವಣಿಗೆಗಳನ್ನು ಗಮನಿಸುತ್ತಿರುವ ಭಾರತೀಯ ಜನತಾ ಪಕ್ಷ, ಯಾವುದೇ ನಿರ್ಧಾರಕ್ಕೆ ಬರದೆ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ. ತಾವಾಗಿಯೇ ಸರಕಾರ ರಚಿಸುವ ಪ್ರಸ್ತಾವನೆ ಸಲ್ಲಿಸುವ ಬದಲು, ರಾಜ್ಯಪಾಲರಿಂದಲೇ ಆಹ್ವಾನ ಬಂದರೆ ಸ್ವೀಕರಿಸಿ ಸರಕಾರ ಸಚಿಸುವ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ಪ್ರಶ್ನೆ ಕೇಳಿದಾಗ, ಈ ನಿರ್ಧಾರ ತೆಗೆದುಕೊಳ್ಳುವವರು ರಾಜ್ಯಪಾಲರು, ಸಾಂವಿಧಾನಿಕವಾಗಿ ಅವರು ಭಾರತೀಯ ಜನತಾ ಪಕ್ಷಕ್ಕೆ ಆಹ್ವಾನ ನೀಡಿದರೆ ಸರಕಾರ ರಚಿಸಲು ಬಿಜೆಪಿ ಸಿದ್ಧ. ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿದ್ದು ನಮ್ಮ ಬಳಿ 105 ಶಾಸಕರಿದ್ದಾರೆ ಎಂದು ಸದಾನಂದ ಗೌಡರು ವಿವರಿಸಿದ್ದಾರೆ.
I am sorry, ಐ ಆಮ್ ಹೆಲ್ಪ್ ಲೆಸ್: ಹೈಕಮಾಂಡಿಗೆ ಸಿದ್ದರಾಮಯ್ಯ?
ಕುಲಗೆಟ್ಟ ಸರಕಾರದಿಂದ ಹೊರಬರಲು ಇದೇ ಸರಿಯಾದ ಸಮಯ ಎಂದು ಆ 11-12 ಶಾಸಕರು ನಿರ್ಧರಿಸಿದ್ದಾರೆ ಮತ್ತು ಇಲ್ಲಿ ಮುಂದುವರಿಯುವುದು ಸಾಧ್ಯವೇ ಇಲ್ಲ ಎಂದು ಅಂದುಕೊಂಡ ಬಳಿಕ ಸ್ಪೀಕರ್ ಅವರಿಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆ ಸಾಂವಿಧಾನಿಕವಾಗಿ ಮತ್ತು ರಾಜ್ಯದ ಪರವಾಗಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಡಿವಿಎಸ್ ವ್ಯಖ್ಯಾನಿಸಿದ್ದಾರೆ.
ರಾಜೀನಾಮೆಯ ನಾಟಕ ಶನಿವಾರ ಬೆಳಿಗ್ಗೆಯೇ ಶುರುವಾಗುತ್ತಿದ್ದಂತೆ ರಾಜ್ಯಪಾಲರ ಬಳಿ ಧಾವಿಸಿದ್ದ ಯಡಿಯೂರಪ್ಪನವರು, ವಜುಭಾಯಿ ವಾಲಾ ಅವರೊಂದಿಗೆ ಸಮಾಲೋಚನೆ ನಡೆಸಿದರು. ಅದೇ ಸಮಯದಲ್ಲಿ ರಾಜೀನಾಮೆ ನೀಡಿದ್ದ ಶಾಸಕರು ಕೂಡ ರಾಜ್ಯಪಾಲರ ಬಳಿ ತೆರಳಿದ್ದು ಕುತೂಹಲಕ್ಕೆ ಕಾರಣವಾಗಿತ್ತು.
ಹೋಗಿದ್ದು 12 ಜನ, ರಾಜೀನಾಮೆ ಕೊಟ್ಟಿದ್ದು 11 ಶಾಸಕರು!
ಈ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡವಿಲ್ಲ. ಆಪರೇಷನ್ ಕಮಲಕ್ಕೆ ಬಿಜೆಪಿ ಖಂಡಿತ ಯತ್ನಿಸಿಲ್ಲ. ಅವರಾಗಿಯೇ ಬಿಜೆಪಿಗೆ ಬಂದರೆ ಸ್ವಾಗತ. ಆದರೆ, ನಾವಾಗಿಯೇ ಸರಕಾರವನ್ನು ಬೀಳಿಸಲು ಯತ್ನಿಸುವುದಿಲ್ಲ. ಸರಕಾರ ರಚಿಸಲೂ ಸಿದ್ಧ, ಮತ್ತೊಂದು ಚುನಾವಣೆ ಎದುರಿಸಲೂ ಸಿದ್ಧ ಎಂದು ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.